ಮಂಗಳೂರು, ಸೆ. 05 (DaijiworldNews/PY): ಟೀಮ್ ಬಿ-ಹ್ಯೂಮನ್ (ರಿ) ಮಂಗಳೂರು ಇದರ ವತಿಯಿಂದ ಜಮೀಯತುಲ್ ಫಲಾಹ್ ಮಂಗಳೂರು, ಇಂಡಿಯನ್ ರೆಡ್ ಕ್ರಾಸ್ ಸೋಸೈಟಿ ಹಾಗೂ ಟೀಂ ಮೇಕ್-ಎ-ಚೇಂಜ್ ಇದರ ಸಹಭಾಗಿತ್ವದಲ್ಲಿ ಉಚಿತ ಕೊರೊನಾ ಲಸಿಕಾ ಶಿಬಿರವು ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ನಲ್ಲಿ ಆ.3ರಂದು ಯಶಸ್ವಿಯಾಗಿ ನೆರವೇರಿತು.
ಜನರು ಕೊರೊನಾ ವೈರಸ್ ಮೂರನೇ ಅಲೆಯ ಭೀತಿಯಲ್ಲಿರೋ ಈ ಸಮಯದಲ್ಲಿ ಇದನ್ನು ತಡೆಗಟ್ಟುವ ಸಲುವಾಗಿ ಟೀಂ ಬಿ-ಹ್ಯೂಮನ್ ತಂಡವು ಅತ್ಯಂತ ಮುತುವರ್ಜಿ ವಹಿಸಿ ಈ ಲಸಿಕಾ ಶಿಬಿರವನ್ನು ಹಮ್ಮಿಕೊಂಡಿತ್ತು.
ಅತ್ಯಂತ ಯಶಸ್ವಿಯಾಗಿ ನಡೆದಂತ ಲಸಿಕಾ ಶಿಬಿರದಲ್ಲಿ ಸುಮಾರು 660 ಜನಸಾಮಾನ್ಯರು ಸೇರಿದಂತೆ ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು ಕೂಲಿ ಕಾರ್ಮಿಕರು ಹಾಗೂ ಇತರ ಶ್ರಮಿಕ ವರ್ಗದವರು ತಮ್ಮ ಪ್ರಥಮ ಮತ್ತು ಕೆಲವರು ತಮ್ಮ ದ್ವಿತೀಯ ಡೋಸ್ ಲಸಿಕೆಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಕೆಲವು ಹಿರಿಯ ರೋಗಿಗಳು ಶಿಬಿರದ ಸ್ವಯಂಸೇವಕರ ವಾಹನದ ಮೂಲಕ ಆಗಮಿಸಿ ಲಸಿಕೆಯನ್ನು ಪಡೆದಿದ್ದು ವಿಶೇಷವಾಗಿತ್ತು.
ಕೆಲವೇ ದಿನಗಳ ಹಿಂದೆ ಸಲ್ಲಿಸಿದ್ದ ಕೋರಿಕೆಯನ್ನು ಮನ್ನಿಸಿ ಈ ಶಿಬಿರವನ್ನು ಆಯೋಜಿಸಲು ಸಹಕರಿಸಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹಾಗೂ ಸ್ಥಳೀಯ ಕಾರ್ಪೊರೇಟರ್ ಸಂದೀಪ್ ಗರೋಡಿ ಅವರಿಗೆ ಟೀಂ ಬಿ-ಹ್ಯೂಮನ್ ಇದರ ಸಂಸ್ಥಾಪಕ ಆಸಿಫ್ ಡೀಲ್ಸ್ ಅವರು ಧನ್ಯವಾದಗಳನ್ನು ಸಮರ್ಪಿಸಿದರು.
ಅತ್ಯಂತ ವ್ಯವಸ್ಥಿತವಾಗಿ ಆಯೋಜನೆಗೊಂಡಿದ್ದ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಇದರಲ್ಲಿ ಕೇವಲ 660 ಮಂದಿಗಷ್ಟೇ ಲಸಿಕೆ ಲಭ್ಯವಾಗಿತ್ತು. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆಯನ್ನು ಪಡೆದಿಲ್ಲ ಎಂಬುದು ಮನವರಿಕೆಯಾಗಿದ್ದು ಮಂಗಳೂರು ನಗರದಾದ್ಯಂತ ಇಂತಹ ಹಲವು ಉಚಿತ ಲಸಿಕ ಶಿಬಿರಗಳನ್ನು ಏರ್ಪಡಿಸಲು ಅನುವು ಮಾಡಿಕೊಡುವಂತೆ ಶಾಸಕರಲ್ಲಿ ಆಸಿಫ್ ಡೀಲ್ಸ್ ಅವರು ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ಅಲೆಯು ತೀವ್ರವಾಗಿ ವ್ಯಾಪಿಸಿದ ದಿನಗಳಿಂದಲೂ ನಿರಂತರವಾಗಿ ಈ ರೀತಿಯ ಉಚಿತ ಲಸಿಕಾ ಶಿಬಿರಗಳನ್ನು, ರಕ್ತದಾನ ಶಿಬಿರಗಳನ್ನು, ರೋಗಿಗಳಿಗೆ ಉಪಯುಕ್ತ ಮಾಹಿತಿ ಶಿಬಿರಗಳನ್ನು ಹಾಗೂ ವಿವಿಧ ಧಾರ್ಮಿಕ ಕ್ಷೇತ್ರಗಳ ಸ್ಯಾನಿಟೈಸೇಶನ್ ಕಾರ್ಯಗಳನ್ನು ಟೀಂ ಬಿ-ಹ್ಯೂಮನ್ ತಂಡವು ಅತ್ಯಂತ ಯಶಸ್ವಿಯಾಗಿ ನಡೆಸುತ್ತಾ ಬಂದಿದೆ.
ಕಾರ್ಯಕ್ರಮದಲ್ಲಿ ಟೀಂ ಬಿ-ಹ್ಯೂಮನ್ ನ ತಮೀಂ, ಇರ್ಷಾದ್ ಕಂದಕ್, ನಜ್ಜಿ ಕಂದಕ್, ದಾವೂದ್, ಅಹ್ನಾಫ್ ಡೀಲ್ಸ್, ಮುಫ್ತಿ, ಅದ್ನಾನ್, ದುೃವ್, ಉದಯ್, ಸಾದಿಕ್, ತೌಸಿಫ್, ಇಮ್ರಾನ್, ಮಣಿಕಂಟ ಮುಂತಾದವರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು.
ಟೀಂ ಮೇಕ್-ಎ-ಚೇಂಜ್ ನ ಸುಹೈಲ್ ಕಂದಕ್, ಅಫ್ರೀದ್, ಮಿಶಾಬ್, ರಿಹಾನ್, ನಿಯಾನ್, ಶಕೀಲ್, ರೆಡ್ ಕ್ರಾಸ್ನ ಪ್ರವೀಣ್ ಹಾಗೂ ಅವರ ತಂಡ ಸಹಕಾರ ನೀಡಿದೆ.