ಕಾರ್ಕಳ, ಸೆ. 04 (DaijiworldNews/PY): "ಯಶಸ್ಸು ಹಿಂದೆ ಛಲ ಅಡಕವಾಗಿರುತ್ತದೆ. ಇತರರ ಬದುಕಿನಲ್ಲಿ ಯಶಸ್ಸು ದೊರೆತಾಗ ಖುಷಿ ಪಡಬೇಕು. ಅಂತಹ ಸದ್ಗುಣ ಹೊಂದಿದವರಲ್ಲಿ ಶಿಕ್ಷಕ ಪಾಲು ದೊಡ್ಡದು. ಕ್ಷಮಾಗುಣದ ಶ್ರೇಷ್ಠ ಮನಸ್ಥಿತಿ ಇರುವವರು ಶಿಕ್ಷಕರು. ವಿದ್ಯಾರ್ಥಿಗಳು ತಪ್ಪು ಮಾಡುವುದು ಅವರ ವಯೋಸಹಜ ಗುಣ, ಅದನ್ನು ಮನಗಂಡು ಬುದ್ಧಿವಾದ ಹೇಳುವ ಮೂಲಕ ಅವರ ಮನಪರಿವರ್ತನೆ ಮಾಡುವುದು ಬಹುದೊಡ್ಡ ಜವಾಬ್ದಾರಿಯಾಗಿದೆ. ತಪ್ಪು ಮಾಡಿದರೆಂಬ ಕಾರಣಕ್ಕಾಗಿ ಕೊಡುವ ಶಿಕ್ಷೆ ಅವರ ಭವಿಷ್ಯವನ್ನು ಹಾಳು ಮಾಡುವಂತಿರಬಾರದು" ಎಂದು ಕಾರ್ಕಳ ನಗರ ಠಾಣಾಧಿಕಾರಿ ಮಧು ಬಿ.ಇ ಹೇಳಿದರು.
ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥೆಯ ಶಿಕ್ಷರ-ರಕ್ಷಕ ಸಂಘದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ಕೃಪಾ ಕಿರಣ್ ಕೌನ್ಸಿಲಿಂಗ್ ಸೆಂಟರ್ನ ಸಹಾಯಕ ನಿರ್ದೇಶಕ ಫಾ. ಫ್ರಾನ್ಸಿಸ್ ಸುನೀಲ್ ಡಿ’ಸೋಜಾ ಮಾತನಾಡಿ, "ಶಿಕ್ಷಕರು ಸರಿಯಾದ ಮಾರ್ಗದರ್ಶನ ನೀಡಿ ಮಕ್ಕಳ ಪ್ರತಿಭೆ ಬೆಳಗುವಂತೆ ಮಾಡಬೇಕು.ಶಿಕ್ಷಕರು ಕೇವಲ ಬೋಧಕರಲ್ಲ, ಅವರು ಮಕ್ಕಳ ಭವಿಷ್ಯ ರೂಪಿಸುವವರು" ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಹಾಗೂ ಅಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ, "ಶಿಕ್ಷಕನಿಂದ ಉತ್ತಮ ಸಮಾಜ ನಿರ್ಮಿಸಬಹುದು. ಶಿಕ್ಷಕರು ಸದಾ ಶಿಕ್ಷಣಾರ್ಥಿಗಳಾಗಿರುವುದರ ಜೊತೆಗೆ ಮಕ್ಕಳ ಹೃದಯ ಗೆಲ್ಲಬೇಕು" ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಉಪನ್ಯಾಸಕರು, ಶಿಕ್ಷಕರು ಹಾಗೂ ಬೋಧಕೇತರ ವೃಂದದವರನ್ನೂ ಸನ್ಮಾನಿಸಿ ಗೌರವಿಸಲಾಯಿತು.
ಪದವಿಪೂರ್ವ ವಿಭಾಗದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜೆರಾಲ್ಡ್ ಡಿ’ಸಿಲ್ವ ಪ್ರಸ್ತಾವನೆಗೈದರು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ವಾಲ್ಟರ್ ಡಿ’ಸೋಜ, ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಮುಖ್ಯೋಪಾಧ್ಯಾಯ ಪ್ರೌಢಶಾಲಾ ವಿಭಾಗದ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ವಿಭಾಗದ ಮೇರಿಯನ್ ಡಿ’ಸೋಜ, ಉಪಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೇಕ್ ಮೊಹಮ್ಮದ್ ಅಲ್ತಾಫ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಾಥಮಿಕ ವಿಭಾಗದ ಕವಿತಾ ಪಾಯ್ಸ್ ಸ್ವಾಗತಿಸಿದರು. ಪೌಢಶಾಲಾ ವಿಭಾಗದ ಶಿಲ್ಪಾ ಪ್ರಶಾಂತ್ ವಂದಿಸಿದರು. ವಿದ್ಯಾರ್ಥಿನಿ ಜಿಯಾ ಅಂಟೋನಿಯಾ ಕುಟಿನ್ಹೊ ನಿರೂಪಿಸಿದರು.