ಕಡಬ, ಸೆ. 04 (DaijiworldNews/PY): ಕಡಬದ ಯುವಕನೋರ್ವನನ್ನು ಸೈಬರ್ ಕ್ರೈಂ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ, ಪ್ರಸಕ್ತ ಮಂಗಳೂರಿನಲ್ಲಿ ಟ್ರೇಡಿಂಗ್ ವ್ಯವಹಾರ ನಡೆಸುತ್ತಿರುವ ಸಂಜಯ್ ಕೃಷ್ಣ ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಪಶ್ಚಿಮ ಬಂಗಾಳದ ಯುವತಿಯೋರ್ವಳ ಹೆಸರಿನ ನಕಲಿ ಸಾಮಾಜಿಕ ಜಾಲತಾಣ ಖಾತೆ ತೆರೆದ ಆರೋಪದ ಮೇರೆಗೆ ಸಂಜಯ್ ಕೃಷ್ಣನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ತನ್ನ ಹೆಸರಿನ ನಕಲಿ ಸಾಮಾಜಿಕ ಜಾಲತಾಣ ಖಾತೆಯನ್ನು ಯಾರೋ ಅಪರಿಚಿತರು ನಕಲಿಸಿ ಉಪಯೋಗಿಸಿರುವ ಬಗ್ಗೆ ಯುವತಿ ಪಶ್ಚಿಮ ಬಂಗಾಳದಲ್ಲಿ ದೂರು ದಾಖಲಿಸಿದ್ದಳು.
ಸೈಬರ್ ಕ್ರೈಂನಡಿ ದೂರು ದಾಖಲಿಸಿಕೊಂಡಿರುವ ಕೊಲ್ಕತ್ತಾ ಪೊಲೀಸರು ಇಂದು ಕಡಬಕ್ಕೆ ಆಗಮಿಸಿ ಆರೋಪಿ ಸಂಜಯ್ ಕೃಷ್ಣನನ್ನು ಬಂಧಿಸಿದ್ದು, ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.