ಉಡುಪಿ, ಸ.04 (DaijiworldNews/HR): ಮದುವೆ ಮಾಡಿ ಕೊಡಿ ಎಂದು ಸಂದೇಶ್ ಕುಲಾಲ್ ಮನೆಯಲ್ಲಿ ಬಹಳ ಒತ್ತಾಯ ಮಾಡಿ ಕೇಳಿದ ಮೇಲೆ ಮಾವನ ಮದುವೆ ಅಗಲಿ, ಅಣ್ಣನ ಅಮೇಲೆ ಮದುವೆ ಆಗುವೆ ಎಂದು ಮದುವೆಯನ್ನು ಮುಂದೂಡುತ್ತಲೇ ಬಂದರು, ನಮ್ಮ ಮನೆಯವರು ಐದಾರು ಬಾರಿ ಸಂದೇಶ್ ಮನೆಗೆ ಭೇಟಿಯಾಗಿ ಮದುವೆ ಆಗುವಂತೆ ಕೇಳಿಕೊಂಡಿದ್ದರು. ಆದರೂ ಸಂದೇಶ್ ಮನೆಯವರು ಮುಂದೆ ಬಂದಿಲ್ಲ. ಸೌಮ್ಯ ಶ್ರೀ ಈತನಿಂದ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದಳು ಎಂದು ಸೌಮ್ಯ ಶ್ರೀ ಅತ್ತಿಗೆ ನಿಕ್ಷಿತಾ ಆರೋಪಿಸಿದ್ದರು.
ಸಂತೆಕಟ್ಟೆ ಬಳಿ ನಡೆದ ಕೊಲೆ ಹಾಗೂ ಆತ್ಮಹತ್ಯೆಯ ಘಟನೆಯ ವಿಚಾರವಾಗಿ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಸೌಮ್ಯ ಶ್ರೀ ಮನೆಯವರು ಮಾತನಾಡಿ, "ಪ್ರತಿದಿನ ಪದೆಪದೇ ಕಾಲ್ ಮಾಡಿ ಕಿರುಕುಳವನ್ನು ನೀಡುತ್ತಿದ್ದ. ಸೌಮ್ಯಶ್ರೀ ತನ್ನನ್ನೇ ಮದುವೆ ಆಗಬೇಕೆಂದು ಹೇಳುತ್ತಿದ್ದ. ಸೌಮ್ಯ ಶ್ರೀಯ ತಂದೆಯೂ ಕೂಡ ಆಕೆಯನ್ನು ಆದಷ್ಟು ಶೀಘ್ರ ಮದುವೆಯಾಗುವಂತೆ ವಿನಂತಿಸಿದ್ದರು. ಕೊನೆ ಪಕ್ಷ ರಿಜಿಸ್ಟರ್ ಮ್ಯಾರೇಜ್ ಆದ್ರೂ ಆಗು ಎಂದು ಹೇಳಿದ್ದರು. ಅದಕ್ಕೂ ಒಪ್ಪಲಿಲ್ಲ. ಸೌಮ್ಯ ಕೂಡ ತುಂಬಾ ಬೇಡಿಕೊಂಡಿದ್ದರು. ಎರಡು ವರ್ಷದ ನಂತರ ಮದುವೆ ಆಗುವುದಾಗಿ ಆತ ಹೇಳಿತ್ತಿದ್ದ" ಎಂದಿದ್ದಾರೆ.
ಇನ್ನು ಸೌಮ್ಯ ಶ್ರೀಯು ಪೋಷಕರಲ್ಲಿ ಸಂದೇಶ್ ನನ್ನು ಮದುವೆಯಾಗುವುದಿಲ್ಲವೆಂದೇ ಹೇಳಿಕೊಂಡಿದ್ದರು. ಆತನ ಕೊಡುವ ಮಾನಸಿಕ ಹಿಂಸೆಯನ್ನು ತಡೆಯಲು ಆಗುತ್ತಿಲ್ಲ. ಬೇರೆ ಹುಡುಗನನ್ನು ಮದುವೆಯಾಗುವುದಾಗಿ ಹೇಳಿಕೊಂಡಿದ್ದರು. ಈ ಘಟನೆ ಆದ ಸ್ವಲ್ಪ ದಿನದಲ್ಲೇ ಅಪ್ಪನಿಗೆ ಹೃದಯಾಘಾತ ಆಯ್ತು. ಒಂದುವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸೌಮ್ಯರ ತಾಯಿ ಸುಶೀಲರು ಮಗಳಿಗೆ ಆದಷ್ಟು ಬೇಗ ಮದುವೆಯಾಗಲಿ ಇದು ಆಕೆಯ ತಂದೆಯ ಕೊನೆ ಆಸೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಆಕೆಯ ತಂದೆಯ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಎಚ್ಚರ ವಹಿಸುವಂತೆ ಹೇಳಿದ್ದರು.
ಸೌಮ್ಯಳ ಎಂಗೇಜ್ಮೆಂಟ್ ಮೊದಲು ಆಕೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗುತ್ತಿದ್ದ. ಸಂದೇಶ್ನ ಅಣ್ಣನಿಗೆ ಆತನಿಗೆ ಬುದ್ದಿ ಹೇಳುವಂತೆ ತಿಳಿಸಿದರೂ ಕಿವಿಗೊಡಲಿಲ್ಲ. ಕೊನೆಗೆ ಬೇರೆ ದಾರಿಕಾಣದೆ ಮಹಿಳಾ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಲು ಮಂದಾದೆವು. ಆ ಮೇಲೆ ಹುಡುಗಿಗೆ ನಿಶ್ಚಿತಾರ್ಥವಾಯ್ತು, ಅವಳೂ ಖುಷಿಯಲ್ಲಿದ್ದಳು.
ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಮತ್ತು ಅವರಿಬ್ಬರ ನಡುವಿನ ಒಡನಾಟವನ್ನು ತುಂಬಾ ತಪ್ಪಾಗಿ ಜನರಿಗೆ ತೋರಿಸುತ್ತಿದ್ದಾರೆ. ಮೂರು ತಿಂಗಳಿನಿಂದ ಆತನನ್ನು ಭೇಟಿಯಾಗಲೇ ಇಲ್ಲ. ಭೇಟಿಯಾಗುವುದಾದರೂ ಅಪ್ಪನ ಜೊತೆ ಹೋಗಿ ಬರುತ್ತಿದ್ದರು. ಕಳೆದ ಐದು ವರ್ಷದಿಂದ ಅವಳ ಮದುವೆಯಾಗುವುದಕ್ಕೆ ಕಾದದ್ದೇ ತಪ್ಪಾಯ್ತಾ? ಇಷ್ಟಾಗಿಯೂ ಆತನ ಕಿರುಕುಳವನ್ನು ತಡೆದು ಕೊಂಡೇ ಬಂದಿದ್ದರು ಸೌಮ್ಯ ಶ್ರೀ. ಮನೆಯವರ ಸಂತೋಷಕ್ಕೆ ಬೇರೆಯವರನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಸೌಮ್ಯಳ ಯಾವ ತಪ್ಪೂ ಇಲ್ಲ.
ಮುಂದಿನ ತಿಂಗಳು ಮದುವೆ ನಿಶ್ಚಯವಾಗಿತ್ತು. ಆ ಕಾರಣಕ್ಕಾಗಿನೇ ಕೆಲಸಕ್ಕೆ ರಿಸೈನ್ ಕೂಡ ಕೊಟ್ಟಿದ್ದು, ಆಕೆಗೆ ಬ್ಯಾಂಕ್ನಿಂದ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮ ಮುಗಿಸಿದ ಬರುವಾಗಲೇ ಘಟನೆ ನಡೆದಿತ್ತು. ಆತ ಮಾದಕ ವ್ಯಸನವನ್ನು ಮಾಡುತ್ತಿದ್ದ ಎನ್ನುವ ಬಗ್ಗೆ ಸೌಮ್ಯಳಿಗೂ ಗೊತ್ತಿತ್ತು ಎಂದು ಅತ್ತಿಗೆ ನಿಕ್ಷಿತಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೌಮ್ಯಳ ತಾಯಿ ಸುಶೀಲ ಮಾತನಾಡಿ, "ನನ್ನ ಮಗಳು ಸಂದೇಶನಿಗೆ ಕಾಲ್ ಮಾಡಿ ತನ್ನನ್ನು ಬಿಟ್ಟು ಬಿಡುವಂತೆ ಅಥವಾ ಆದಷ್ಟು ಬೇಗ ಮದುವೇಯಾಗುವಂತೆ ಗೋಗರೆದಿದ್ದಳು. ಸಂದೇಶ್ ಈಗ ಮದುವೆಯಾಗಲು ತನ್ನಲ್ಲಿ ಈಗ ಹಣವಿಲ್ಲ ಎಂದು ಹೇಳಿದ್ದರು. ಮನೆಯವರಿಗಾಗಿ ನನ್ನ ಜೀವವನ್ನೇ ಕೊಡುತ್ತೇನೆ ಎಂದು ಹೇಳಿದ್ದರು ಸೌಮ್ಯಶ್ರೀ. ತಂದೆಯ ಮನಸ್ಸಿಗೆ ನೆಮ್ಮದಿ ಕೊಡಲು ಬೇರೆ ಮದುವೆಗೆ ಒಪ್ಪಿಕೊಂಡಿದ್ದಳು. ಆದರೆ ಸಂದೇಶ್ ಈ ರೀತಿ ಮಾಡುತ್ತಾನೆಂಬ ಸಣ್ಣ ಊಹೆಯೂ ಇರಲಿಲ್ಲ.
ಸೌಮ್ಯಳ ಅಣ್ಣ ಸುನಿಲ್ ಮಾತನಾಡಿ, "ಸಂದೇಶ್ ಸಹಜ ವ್ಯಕ್ತಿಯೇ ಅಲ್ಲ. ಆತನಿಗೆ ಪ್ರೀತಿಸುವ ಹುಡುಗಿಯನ್ನು ಹೇಗೆ ನಡೆಸಿಕೊಳ್ಳಬೇಕೆಂದು ಗೊತ್ತಿಲ್ಲ. ಮದುವೆ ಮುಂದೂಡಲು ನೆಪ ಹುಡುಕುತ್ತಿದ್ದ. ಘಟನೆ ನಡೆದು ಹೋಗಿದೆ. ಇಷ್ಟಾಗಿಯೂ ಹುಡುಗನ ಮನೆಯವರೂ ಯವುದೇ ಕಾಳಜಿ ತೋರಿಸಿಲ್ಲ. ಜಾತಿ ವಿಷಯದ ಆಕ್ಷೇಪ ಮನೆಯಲ್ಲಿದ್ದರೂ ಮತ್ತೆ ಹೊಂದಾಣಿಕೆಯಾಗಿತ್ತು. ಸಂದೇಶ್ ಇದೇ ಮದುವೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ, ಈಗ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ವಿಧಿ ಬೇರೆಯಾಗಿತ್ತು. ಇನ್ನಾದರೂ ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸೋಮಶೇಖರ್ ಭಂಢಾರಿ, ಸಮುದಾಯದ ಮುಖಂಡರು, ಅಶೋಕ್ ಕುಮಾರ್ ಉಪಸ್ಥಿತರಿದ್ದರು.