ಬೆಳ್ತಂಗಡಿ, ಸೆ. 04 (DaijiworldNews/PY): ಬೆಳ್ತಂಗಡಿ ತಾಲೂಕಿನ ಕಟ್ಟದಬೈಲು ಶಾಲಾ ಶಿಕ್ಷಕ ಎಡ್ವರ್ಡ್ ಡಿಸೋಜಾ ಅವರಿಗೆ 2021ರ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎಡ್ವರ್ಡ್ ಡಿಸೋಜಾ ಅವರು ಶಿಕ್ಷಕರ ಕೊರತೆ, ಕುಸಿಯುವ ಭೀತಿಯಲ್ಲಿದ್ದ ಕಟ್ಟಡದ ಛಾವಣಿ ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದ್ದ ಶಾಲೆಗೆ ಸ್ವಚ್ಛೆಯಿಂದ ವರ್ಗಾವಣೆ ಬಯಸಿ 2003ರ ಜುಲೈ 17ರಂದು ಸೇರ್ಪಡೆಗೊಂಡಿದ್ದಾರೆ.
ಮನೆ ಮನೆಗೆ ಕಾಣಿಕೆ ಡಬ್ಬಿ ನೀಡಿ ಶಾಲೆಗಾಗಿ ದಿನಕ್ಕೊಂದು ರೂ. ನೀಡುವಂತೆ ಮನವಿ ಮಾಡಿ, ತಾವೂ ಒಂದು ಡಬ್ಬಿ ಇಟ್ಟು ಉಳಿತಾಯ ಮಾಡಿ ಶಾಲೆಯ ಅಭಿವೃದ್ದಿಗೆ ಶ್ರಮಿಸಿದ ಎಡ್ವರ್ಡ್ ಡಿಸೋಜಾ ಅವರು ಕಾಣಿಕೆ ಡಬ್ಬಿ ಮೇಷ್ಟ್ರು ಎಂದೇ ಜನಪ್ರೀತಿ ಗಳಿಸಿದ್ದಾರೆ.
ಶಾಲೆಯ ಅಭಿವೃದ್ದಿಗಾಗಿ ಊರ ಪರವೂರ ದಾನಿಗಳು ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ, ಇಲಾಖೆ ಸಹೋದ್ಯೋಗಿಗಳು, ಜನಪ್ರತಿನಿಧಿಗಳು ಹಾಗೂ ಮಿತ್ರರ ಸಹಕಾರದಿಂದ 1 ಕೋಟಿ ರೂ. ಗಳಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿ, ಶಾಲೆಯನ್ನು ಅಭಿವೃದ್ದಿ ಪಡಿಸಿದ್ದಾರೆ.
ದಿನಕ್ಕೊಂದು ರೂ. ಎನ್ನುವ ಯೋಜನೆಯನ್ನು ಆರಂಭಿಸಿ 1,071 ದಿನಗಳಲ್ಲಿ 3,33,333 ರೂ. ಸಂಗ್ರಹಿಸಿ. ಈ ಹಣವನ್ನು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ, ಭಾವೈಕ್ಯತಾ ಹೊರ ಸಂಚಾರ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ.
ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಗೌರವ ಶಿಕ್ಷಕರನ್ನು ನೇಮಿಸಿ ಇವರಿಗೆ ವೇತನ ನೀಡುವ ಉದ್ದೇಶದಿಂದ ವಜ್ರ ನಿಧಿ ಎನ್ನುವ ಯೋಜನೆಯನ್ನು ಹಾಕಿಕೊಂಡರು. ಈ ನಿಧಿಯಿಂದ 15 ವರ್ಷಗಳಲ್ಲಿ ಗೌರವ ಶಿಕ್ಷಕರಿಗೆ ಸಂಭಾವನೆ ನೀಡಲಾಗುತ್ತಿದೆ.
ಮಿತ್ರರೋರ್ವರ ತಾಯಿಯ ಸವಿನೆನಪಿಗಾಗಿ 20,000 ರೂ. ಮೊತ್ತದ ದಿ. ನೀಲಮ್ಮ ಸ್ಮಾರಕ ಶಿಕ್ಷಣ ನಿಧಿಯನ್ನು ಸ್ಥಾಪಿಸಿದ್ದು, ಪ್ರತಿ ವರ್ಷ ಏಳನೇ ತರಗತಿಯಲ್ಲಿ ಪ್ರಥಮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗುತ್ತಿದೆ.
ಮಕ್ಕಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ 2000 ರೂ. ವೆಚ್ಚದಲ್ಲಿ ಅಕ್ವಾಗಾರ್ಡ್ ಸ್ಥಾಪಿಸಲಾಗಿದೆ.
ಶಾಲೆಯ 4 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ 200 ಕುಟುಂಬಗಳಲ್ಲಿ ಹೆಚ್ಚಿನ ಮಂದಿಗೆ ಪ್ಲಾಸ್ಟಿಕ್ ಸುಡದಂತೆ, ಕಸ ಎಸೆಯದಂತೆ ಮನವರಿಗೆ ಮಾಡಿದ್ದು, ನೂರಾರು ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ಗಳನ್ನು ಗ್ರಾ.ಪಂ.ಗೆ ಹಸ್ತಾಂತರಿಸುವ ಮುಖೇನ ಸ್ವಚ್ಛ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ.
ತಮ್ಮ ಮರಣದ ಬಳಿಕ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ 2008ರಲ್ಲಿ ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡುವ ಕರಾರಿಗೆ ಸಹಿ ಹಾಕಿದ್ದಾರೆ. ಅಲ್ಲದೇ, ಅಂಗಾಗ ದಾನ, ರಕ್ತದಾನ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಚಾರ ಬಯಸದೇ ದುಡಿದ, ತಾನು ಮಾಡಿದ ಕಾರ್ಯವನ್ನು ಎಲ್ಲಿಯೂ ಹೇಳಿಕೊಳ್ಳದ ಅಪರೂಪದ ಶಿಕ್ಷಕನನ್ನು ಇಲಾಖೆ ಗುರುತಿಸಿದೆ.