ಮಂಗಳೂರು, ಸೆ 04(DaijiworldNews/MS): ಕೇಂದ್ರ ಆದಾಯ ಇಲಾಖೆಯ ಜಾರಿ ನಿರ್ದೇಶನಾಲಯ (ಇ.ಡಿ.)ದ ಉಪ ವಲಯ ಕಚೇರಿಯು ನಗರದಲ್ಲಿ ಆರಂಭಗೊಂಡಿದೆ. ಸೆಪ್ಟೆಂಬರ್ 3 ಶುಕ್ರವಾರದಿಂದ ಕಂಕನಾಡಿಯಲ್ಲಿರುವ ನೂತನ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದೆ. ಇದು ಮಂಗಳೂರಿನ ಉಪ ವಲಯ ಕಚೇರಿಯೂ ಬೆಂಗಳೂರು ವಲಯ ಕಚೇರಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.
ಇ.ಡಿ. ವಲಯ ಕಚೇರಿ ಬೆಂಗಳೂರಿನಲ್ಲಿದ್ದು ಇದು ಬಿಟ್ಟರೆ ರಾಜ್ಯದಲ್ಲಿ ಇ.ಡಿ.ಯ ಮತ್ತೊಂದು ಪ್ರಮುಖ ಮತ್ತು ಏಕೈಕ ಕಚೇರಿ ಮಂಗಳೂರಿನದು. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಒಟ್ಟು 15 ಜಿಲ್ಲೆಗಳು ಈ ಉಪ ವಲಯ ಕಚೇರಿಯ ವ್ಯಾಪ್ತಿಗೆ ಬರುತ್ತವೆ.
ದೇಶೀಯ – ಅಂತಾರಾಷ್ಟ್ರೀಯ ಅಕ್ರಮ ಹಣ ವರ್ಗಾವಣೆ, ಅವ್ಯವಹಾರ ಪ್ರಕರಣಗಳ ತನಿಖೆಯನ್ನು ಕೇಂದ್ರ ಆದಾಯ ಇಲಾಖೆಯ ಜಾರಿ ನಿರ್ದೇಶನಾಲಯ ನಡೆಸುತ್ತದೆ. ವಿದೇಶಿ ವಿನಿಮಯ ನಿರ್ವಹಣ ಕಾಯಿದೆ ಮತ್ತು ಕಪ್ಪುಹಣ ನಿಯಂತ್ರಣ ಕಾಯಿದೆಯಡಿ ಪ್ರಕರಣಗಳನ್ನು ನಿರ್ವಹಿಸಲಿದೆ.
ಮಂಗಳೂರಿನ ಉಪ ವಲಯ ಕಚೇರಿಯು ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಗದಗ, ಹಾವೇರಿ, ದಾವಣಗೆರೆ, ಧಾರವಾಡ, ಗುಲ್ಬರ್ಗ, ಉತ್ತರ ಕನ್ನಡ, ಕೊಪ್ಪಳ, ಉಡುಪಿ ಮತ್ತು ರಾಯಚೂರಿನ 15 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುತ್ತದೆ.
ಕಂಕನಾಡಿಯ “ಸೆಂಟ್ರಲ್ ಎಕ್ಸೆ„ಸ್ ಸ್ಟಾಫ್ ಕ್ವಾರ್ಟರ್ ಇ-7′ ವಿಳಾಸದಲ್ಲಿ ಕಚೇರಿ ಆರಂಭಗೊಂಡಿದ್ದು, ಬೆಂಗಳೂರು ವಲಯ ಕಚೇರಿ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ.
ಮಂಗಳೂರು ಉಪ ವಲಯ ಕಚೇರಿಯ ನೇತೃತ್ವವನ್ನು ಉಪನಿರ್ದೇಶಕರು ವಹಿಸಿಕೊಳ್ಳಲಿದ್ದಾರೆ.