ಉಡುಪಿ, ಸೆ. 03 (DaijiworldNews/SM): ಸಕ್ರಿಯ ಕೋವಿಡ್ -19 ಪ್ರಕರಣಗಳಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯು ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಂತರ 3ನೇ ಸ್ಥಾನದಲ್ಲಿದೆ.
ಎರಡು ಜಿಲ್ಲೆಯ ಪಾಸಿಟಿವಿಟಿ ದರವು ನಿಧಾನವಾಗಿ ಇಳಿಮುಖವಾಗುತ್ತಿದ್ದು, ಕಳೆದ 14 ದಿನಗಳಲ್ಲಿ ಸರಾಸರಿ ಪಾಸಿಟಿವಿಟಿ ದರವು 1.54% ಇದ್ದು ಕಳೆದ 7 ದಿನಗಳಲ್ಲಿ 1.27% ಇದೆ ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ಶುಕ್ರವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಸ್ಥಳೀಯವಾಗಿ ಹರಡುವುದನ್ನು ನಿಯಂತ್ರಿಸಲು ಜಿಲ್ಲಾಡಳಿತವು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ದಿನ ಒಂದಕ್ಕೆ ಸರಾಸರಿ 9056 ನಂತೆ 63,398 ಕೋವಿಡ್ ಶಂಕಿತರ ಪರೀಕ್ಷೆ ನಡೆಸಲಾಗಿದೆ. ಇದು ಪ್ರತೀ ದಿನ ಪ್ರತೀ ಮಿಲಿಯನ್ ಜನಸಂಖ್ಯೆಗೆ 6907 ಪರೀಕ್ಷೆಗಳನ್ನು ನಡೆಸುವುದಕ್ಕೆ ಸಮನಾಗಿದ್ದು, ಇದು ರಾಜ್ಯದಲ್ಲೇ ಗರಿಷ್ಠ ಪ್ರಮಾಣವಾಗಿದೆ. ಮಹಾರಾಷ್ಟ್ರದಿಂದ ಬರುವವರಿಗೆ ಪ್ರಯಾಣ ಪ್ರಾರಂಭಿಸಿದ 72 ಗಂಟೆಯೊಳಗಿನ ಕೊವಿಡ್-19 ನೆಗೆಟಿವ್ ವರದಿ ಇದ್ದರೆ ಮಾತ್ರ ಜಿಲ್ಲೆಯನ್ನು ಪ್ರವೇಶಿಸಲು ಅನುಮತಿಸಲಾಗುತ್ತಿದೆ.
ಹೊಸದಾಗಿ ಪತ್ತೆಯಾದ ಎಲ್ಲಾ ಕೋವಿಡ್-19 ಸೋಂಕಿತರನ್ನು ಸಾಂಸ್ಥಿಕ ಪ್ರತ್ಯೇಕತೆ (ಆಸ್ಪತ್ರೆ ಅಥವಾ ಕೋವಿಡ್ ಆರೈಕೆ ಕೇಂದ್ರಕ್ಕೆ ಒಳಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಮೂಲಕ ಸೋಂಕು ವೇಗವಾಗಿ ಹರಡುವ ಸಾಧ್ಯತೆಯನ್ನು ತಪ್ಪಿಸಿದಂತಾಗುತ್ತದೆ.
ಜಿಲ್ಲಾಡಳಿತವು ಕಳೆದ 1 ವಾರದಲ್ಲಿ ಲಸಿಕಾ ಮಹಾ ಮೇಳಗಳನ್ನು ನಡೆಸಿ 1,20,000 ಕ್ಕೂ ಹೆಚ್ಚು ಡೋಸ್ ಲಸಿಕೆಯನ್ನು ನೀಡಿ ಕೋವಿಡ್ ಲಸಿಕಾಕರಣವನ್ನು ತೀವ್ರಗೊಳಿಸಿದೆ.