ಕಾರ್ಕಳ, ಸ.03 (DaijiworldNews/HR): ಬೈಲೂರು-ಹಿರ್ಗಾನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರೂ.9.65ಕೋಟಿ ಮೊತ್ತ ಮಂಜೂರು ಆಗಿದೆ.
8 ಕಿ.ಮೀ ಉದ್ದದ ಈ ರಸ್ತೆ ನಿರ್ಮಾಣ ಕಾರ್ಯದಲ್ಲಿ 2 ನೂತನ ಸೇತುವೆ ಒಳಗೊಂಡಿವೆ. ತನ್ಮೂಲಕ ಬೈಲೂರು-ಯರ್ಲಪ್ಪಾಡಿ-ಹಿಗಾನ ಸಂಪರ್ಕಿಸಲು ಸುಗಮ ರಸ್ತೆಯಾಗಲಿದ್ದು, ಲೋಕೋಪಯೋಗಿ ಇಲಾಖೆ ಕಾರ್ಕಳ ವಿಭಾಗ ಇದರ ಅಧೀನದಲ್ಲಿ ಇದ್ದ ಈ ರಸ್ತೆಯು ಕಳೆದ ಹಲವು ವರ್ಷಗಳಿಂದ ದುರಸ್ಥಿಯಾಗದೇ ಹೊಂಡ ಗುಂಡಿಗಳಿಂದ ವಾಹನ ಸಂಚಾರಕ್ಕೆ ಅಡೆತಡೆಗಳಾಗುತ್ತಿತ್ತು.
ಇನ್ನು ತಿರುವು ಮುರುವಿನಿಂದ ಕೂಡಿದ ಇಕ್ಕಟಾಗಿದ್ದ ಬೈಲೂರು-ಹಿರ್ಗಾನ ಈ ರಸ್ತೆಯು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಇದೀಗ ಅಗಲೀಕರಣಗೊಳ್ಳುತ್ತಿದ್ದು, ಕಾಮಗಾರಿ ಭರದಿಂದ ಸಾಗುತ್ತಿದ್ದು, ಹಳೆಯದಾಗಿದ್ದ ಇದೇ ರಸ್ತೆಯಲ್ಲಿ ಎರಡು ಹಳೆಯದಾಗಿದ್ದ ಕಿರು ಸೇತುವೆಗಳಿದ್ದು, ಸಮೀಪದಲ್ಲಿಯೇ ನೂತನ ಸೇತುವೆಗಳು ನಿರ್ಮಾಣಗೊಳ್ಳಲಿದೆ.
ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದ ಹಿರ್ಗಾನ-ಬೈಲೂರು ರಸ್ತೆಯ ಅಭಿವೃದ್ಧಿ ಕಾಮಗಾರಿ ಇಗೀಗ ಪೂರ್ಣಗೊಂಡ ಬಳಿಕ ಐದು ವರ್ಷಗಳ ಕಾಲ ಅದರ ನಿರ್ವಹಣೆಯನ್ನು ಪಂಚಾಯತ್ ರಾಜ್ ಇಲಾಖೆಯ ನಿರ್ವಹಿಸಲಿದೆ. ಆ ಬಳಿಕವಷ್ಟೇ ಅದರ ನಿರ್ವಹಣೆಯನ್ನು ಮತ್ತೇ ಲೋಕೋಪಯೋಗಿ ಇಲಾಖೆಗೆ ವರ್ಗಾಹಿಸಲಿದೆ.
ಗೋವಿಂದೂರು ನಿವಾಸಿಗಳಾದ ದಾಮೋದರ ಆಚಾರ್ಯ ಹಾಗೂ ಅವರ ಪತ್ನಿ ಪುಷ್ಪಾವತಿ ಆಚಾರ್ಯ ಅವರು ಪ್ರತಿವಷ ಇದೇ ರಸ್ತೆಯಲ್ಲಿ ಕರಸೇವೆ ನಡೆಸುತ್ತಿದ್ದರು. ರಸ್ತೆಯಲ್ಲಿದ್ದ ಹೊಂಡಗುಂಡಿಗಳಿಗೆ ಕಲ್ಲು ತುಂಬಿಸಿ ಮುಚ್ಚುತ್ತಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತು. ದಂಪತಿಯ ಸತ್ಕಾರ್ಯಕ್ಕೆ ನಾಗರಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತಗೊಂಡಿತು.
ಇನ್ನು ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಕನಸ್ಸು ನನಸ್ಸು ಮಾಡುವಲ್ಲಿ ಸ್ಥಳೀಯ ಶಾಸಕ ಹಾಗೂ ಇಂಧನ, ಕನ್ನಡ ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ಕುಮಾರ್ ಪಾತ್ರ ಮಹತ್ವದಾಗಿದೆ. ಅವುಗಳಲ್ಲಿ ಪೈಕಿ ಬೈಲೂರು-ಹಿರ್ಗಾನ ಸಂಪರ್ಕಿಸುವ ರಸ್ತೆ ಒಂದಾಗಿದೆ.