ಉಡುಪಿ, ಸೆ 3 (DaijiworldNews/MS): ಕೊರೊನಾ ನಿಯಂತ್ರಿಸಲು ಜಿಲೆಯಾದ್ಯಂತ ಮಾರ್ಗಸೂಚಿ, ನಿಬಂಧನೆಗಳನ್ನು ಸೆ.13 ರವರೆಗೆ ಮುಂದುವರಿಸುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶಿದ ಹಿನ್ನಲೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಚರ್ಚ್ಗಳಲ್ಲಿ ಸೆ.13 ರವರೆಗೆ ಶನಿವಾರ - ಭಾನುವಾರದ ಸಾಮೂಹಿಕ ಪ್ರಾರ್ಥನೆಯನ್ನು ರದ್ದು ಮಾಡಲಾಗಿದೆ.
ಈ ಬಗ್ಗೆ ಉಡುಪಿ ಧರ್ಮಪ್ರಾಂತ್ಯ ಪ್ರಕಟನೆ ಹೊರಡಿಸಿದ್ದು, ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ಜನರ ಓಡಾಟವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿರುವುದರಿಂದ, ಶನಿವಾರ ಮತ್ತು ಭಾನುವಾರದಂದು ಚರ್ಚ್ನಲ್ಲಿ ಸಾಮೂಹಿಕ ಮತ್ತು ಸಾರ್ವಜನಿಕ ಪ್ರಾರ್ಥನಾ ಚಟುವಟಿಕೆಗಳು ಇರುವುದಿಲ್ಲ. ಭಾನುವಾರದ ಪ್ರಾರ್ಥನೆಯನ್ನು ಶುಕ್ರವಾರ ಸಲ್ಲಿಸಬಹುದಾಗಿದೆ ಎಂದು ಹೇಳಿದ್ದಾರೆ
ಇನ್ನು ಮೊಂತಿ ಹಬ್ಬದ ದಿನ, ಮೇರಿ ಮಾತೆಗೆ ಹೂ ಅರ್ಪಿಸುವುದು, ಹೊಸ ಭತ್ತದ ತೆನೆಗಳಿಗಾಗಿ ಆಶೀರ್ವಚನ ಇತ್ಯಾದಿ ಆಚರಣೆಗಳ ಸಂದರ್ಭದಲ್ಲಿ ಚರ್ಚ್ ಗಳ ಒಳಗೆ ಎಲ್ಲಾ ಕೋವಿಡ್ -19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದರೆ ಯಾವುದೇ ಮೆರವಣಿಗೆ, ಸಭೆ, ಆಚರಣೆ ಇತ್ಯಾದಿಗಳಿಗೆ ಅವಕಾಶ ಇಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.