ಮಂಗಳೂರು, ಸೆ 3 (DaijiworldNews/MS): ಕೋವಿಡ್ ಆತಂಕದ ನಡುವೆಯೂ, ದೇಶ- ವಿದೇಶಗಳಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಯಾನ ಸೇವೆ ಏರಿಕೆಯಾಗಿದ್ದು, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗಿದೆ.
ದೇಶದ ವಿವಿಧ ರಾಜ್ಯಗಳಿಗೆ ಆಗಸ್ಟ್ ತಿಂಗಳಲ್ಲಿ 26,067 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಕಳೆದ ಜುಲೈನಲ್ಲಿ ಈ ಸಂಖ್ಯೆ 18,557 ಆಗಿದ್ದು, ಈ ಮೂಲಕ ವಿಮಾನ ಯಾನ ಪ್ರಯಾಣಿಕರ ನಿರ್ಗಮನ ಪ್ರಮಾಣದಲ್ಲಿ ಶೇ.40ರಷ್ಟು ಏರಿಕೆ ಕಂಡು ಬಂದಿದೆ. ಇದೇ ವೇಳೆ ಆಗಸ್ಟ್ನಲ್ಲಿ ವಿವಿಧ ರಾಜ್ಯಗಳಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 26732 ಪ್ರಯಾಣಿಕರು ಬಂದಿಳಿದಿದ್ದರೆ, ಜುಲೈನಲ್ಲಿ ಈ ಸಂಖ್ಯೆ 19744 ಆಗಿತ್ತು.
ಭಾರತದೊಳಗೆ ಮತ್ತು ವಿದೇಶಗಳ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿರುವುದರಿಂದ ವಿವಿಧ ವಿಮಾನ ಯಾನ ಸಂಸ್ಥೆಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ ವಿಮಾನಯಾನವನ್ನು ಪುನರಾರಂಭಿಸಿರುವುದು ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.
ಯುಎಇ ಸರಕಾರವು ತನ್ನ ದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಿದ ಬಳಿಕ ಇಂಡಿಗೋ ಸಂಸ್ಥೆ ಶಾರ್ಜಾಗೆ ತನ್ನ ವಿಮಾನಯಾನ ಪುನರಾರಂಭಿಸಿದೆ. ಇದೇ ವೇಳೆ ಭಾರತಾದ್ಯಂತ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಇಂಡಿಗೋ ಹೈದಾರಾಬಾದ್ಗೆ ಹೆಚ್ಚುವರಿ ವಿಮಾನ ಹಾರಾಟ ಆರಂಭಿಸಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರ ಸಂಖ್ಯೆ ಸುಧಾರಣೆಯಾದ ಕಾರಣ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಬುಧಾಬಿಗೆ ತನ್ನ ವಿಮಾನ ಹಾರಾಟವನ್ನು ಪುನರಾರಂಭಿಸಿದೆ. ಆಗಸ್ಟ್ನಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಬುಧಾಬಿ, ದುಬೈ, ತಿರುವನಂತಪುರಕ್ಕೆ ವಿಮಾನ ಯಾನ ನಡೆಸಿದೆ. ಇಂಡಿಗೋ ಹೈದರಾಬಾದ್ ಮತ್ತು ಶಾರ್ಜಾ, ಏರ್ ಇಂಡಿಯಾ ಮುಂಬೈ ಮತ್ತು ಕೊಯಮತ್ತೂರಿಗೆ ಪ್ರತಿನಿತ್ಯದ ಯಾನ ಆರಂಭಿಸಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.