ಮಂಗಳೂರು, ಸೆ. 02 (DaijiworldNews/SM): ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿ ಚಿದಾನಂದ ಕೆ.ಆರ್. ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು ಇದ್ದು, ಸದ್ಯ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಚಿದಾನಂದ ತನ್ನ ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು ಇದ್ದು, ಸದ್ಯ ನಾಪತ್ತೆಯಾಗಿದ್ದಾಳೆ. ಈ ಹಿನ್ನೆಲೆ ದ.ಕ. ಜಿಲ್ಲಾ ಎಸ್ಪಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಪತ್ನಿ ರಾಜಿ ರಾಘವನ್ ಗೆ ಉಗ್ರ ಸಂಘಟನೆಯೊಂದಿಗೆ ನಂಟಿದೆ. ಕಳೆದ 11 ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದಾಳೆ. ಮಕ್ಕಳನ್ನು ತನ್ನೊಂದಿಗೆ ದುಬೈಗೆ ಕಳುಹಿಸುವಂತೆ ಪೀಡಿಸುತ್ತಿದ್ದಾಳೆ. ಇಬ್ಬರು ಮಕ್ಕಳನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಪತ್ನಿ ನಿತ್ಯ ತನ್ನನ್ನು ಪೀಡಿಸುತ್ತಿದ್ದಾಳೆ. ತಮ್ಮದೊಂದು ಉಗ್ರ ಸಂಘಟನೆಯಿದೆ, ಅದಕ್ಕೆ ಮಕ್ಕಳನ್ನು ಸೇರಿಸಬೇಕಿದೆ. ಕಳುಹಿಸದಿದ್ದಲ್ಲಿ ಸಂಘಟನೆಯ ಮೂಲಕ ಶಿಕ್ಷೆ ಕೊಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪತ್ನಿ ಮಕ್ಕಳನ್ನು ಕಳುಹಿಸುವಂತೆ ಲಕ್ಷ ದ್ವೀಪದಿಂದ ವ್ಯಕ್ತಿಯೊಬ್ಬ ಚಿದಾನಂದಗೆ ಕರೆ ಮಾಡಿದ್ದಾನೆ. ಇಲ್ಲದಿದ್ದಲ್ಲಿ ನಾವು ಬಂದು ಕರೆದೊಯ್ಯುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ನಿನಗೆ ಎಷ್ಟು ದುಡ್ಡು ಬೇಕು ಕೇರಳಕ್ಕೆ ಬಾ ಕೊಡುತ್ತೇವೆ ಎಂದಿದ್ದಾನೆ. ಈ ಎಲ್ಲಾ ವಿಚಾರಗಳಿಂದ ನೊಂದುಕೊಂಡಿರುವ ಚಿದಾನಂದ ಸದ್ಯ ಪೊಲೀಸ್ ಇಲಾಖೆಯ ಮೊರೆ ಹೋಗಿದ್ದು, ಪತ್ನಿಯಿಂದ ತೊಂದರೆಯಾಗಿದ್ದು, ನನಗೂ ನನ್ನ ಮಕ್ಕಳಿಗೂ ರಕ್ಷಣೆಬೇಕು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಚಿದಾನಂದ ಕೆ.ಆರ್. ಮನವಿ ಸಲ್ಲಿದ್ದಾರೆ.