ಉಡುಪಿ, ಸೆ 01(DaijiworldNews/MS): ಉಡುಪಿ ಜಿಲ್ಲೆಗೆ ನೂತನವಾಗಿ ನೇಮಕವಾದ ಜಿಲ್ಲಾಧಿಕಾರಿ ಕುರ್ಮಾ ರಾವ್ ಇವರು ಇಂದು ಅಧಿಕಾರ ಸ್ವೀಕರಿಸಿದರು. ಜಿಲ್ಲಾಧಿಕಾರಿಯಾದ ದಿನವೇ ಉಡುಪಿ ಜಿಲ್ಲೆಯಲ್ಲಿ ಶಾಲಾ - ಕಾಲೇಜುಗಳು ಕೂಡಾ ಆರಂಭವಾಗಿರುವ ಹಿನ್ನಲೆಯಲ್ಲಿ ನೂತನ ಜಿಲ್ಲಾಧಿಕಾರಿಗಳು ಉಡುಪಿಯ ಸರಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹುರಿದುಂಬಿಸಿ, ಪಠ್ಯಪುಸ್ತಕಗಳನ್ನು ಕೂಡಾ ವಿತರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ನೂತನ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು "ಮಕ್ಕಳೊಂದಿಗೆ ನೆರವಾಗಿ ಬೆರೆತು ಅವರೊಂದಿಗೆ ಸಂವಾದ ನಡೆಸುವ ದೊಡ್ಡ ಅವಕಾಶ ನನಗೆ ಇಂದು ಸಿಕ್ಕಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಎಲ್ಲರೂ ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರವನ್ನು ಪಾಲಿಸಿ ತರಗತಿಯಲ್ಲಿ ಪಾಲ್ಗೊಳುತ್ತಾ ಇದ್ದಾರೆ. ಮೊದಲನೇ ದಿನವೇ ಹೆಚ್ಚಿನ ಮಕ್ಕಳು ವಿಶ್ವಾಸದಿಂದ ಶಾಲೆಗಳಿಗೆ ಬಂದಿದ್ದಾರೆ" ಎಂದರು.