ಮಂಗಳೂರು, ಸೆ. 01 (DaijiworldNews/PY): ಕಾರಿನ ನಂಬರ್ ಪ್ಲೇಟ್ನಲ್ಲಿ ಅಂಟಿಸಿರುವ ದೇವರ ಹೆಸರಿರುವ ಸ್ಟಿಕ್ಕರ್ ಕಂಡು ಸಂಚಾರಿ ಠಾಣೆ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿದ ಘಟನೆ ತೊಕ್ಕೊಟ್ಟು ಜಂಕ್ಷನ್ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಎಎಸ್ಐ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಬಬೀಶ್ ಪೂಜಾರಿ ಎಂಬವರು ತನ್ನ ಕಾರಿನಲ್ಲಿ ತೊಕ್ಕೊಟ್ಟು ಫ್ಲೈಓವರ್ ಕೆಳಗಿನಿಂದ ಹೋಗುತ್ತಿದ್ದ ವೇಳೆ ನಾಗುರಿ ಸಂಚಾರಿ ಠಾಣಾ ಎಎಸ್ಐ ಆಲ್ಬರ್ಟ್ ಲಸ್ರಾದೊ ಅವರು ಪರಿಶೀಲನೆಗಾಗಿ ನಿಲ್ಲಿಸಿದ್ದಾರೆ. ಈ ವೇಳೆ ದಾಖಲೆಗಳನ್ನು ಪರಿಶೀಲಿಸಿದ ಅವರು ಕಾರಿನ ನಂಬರ್ ಪ್ಲೇಟ್ನಲ್ಲಿ ಸ್ಟಿಕ್ಕರ್ ಅಂಟಿಸಿರುವುದು ಕಾನೂನಿಗೆ ವಿರುದ್ದವಾಗಿದೆ ಎಂದು ಹೇಳಿದ್ದಾರೆ.
ಈ ವೇಳೆ ಮತಿನ ಚಕಮಕಿ ನಡೆದಿದ್ದು, ಕಾರಿನಲ್ಲಿ ಟೀಂ ಪರಶುರಾಮ ಹಾಗೂ ಧರ್ಮೋ ರಕ್ಷತಿ ರಕ್ಷಿತಾಃ ಎನ್ನುವ ಸ್ಟಿಕ್ಕರ್ ಹಾಗೂ ಗಾಜಿನಲ್ಲಿ ಅಳವಡಿಸಲಾಗಿದ್ದ ಓಂಸಾಯಿ ಹಾಗೂ ಸ್ವಾಮಿ ಕೊರಗಜ್ಜ ಸ್ಟಿಕ್ಕರ್ ವಿಚಾರದ ಬಗ್ಗೆಯೂ ತಗಾದೆ ಪ್ರಾರಂಭವಾಗಿತ್ತು.
ಹಿಂದೂ ಸಂಘಟನೆಯ ಕಾರ್ಯಕರ್ತರು ಎಎಸ್ಐ ವಿರುದ್ದ ಕ್ರಮಕ್ಕೆ ಆಗ್ರಹಿದ್ಧಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಹಾಗೂ ಉಳ್ಳಾಲ ಪೊಲೀಸರು ಘಟನೆ ತಿಳಿಗೊಳಿಸಿದ್ದಾರೆ. ಘಟನೆಯ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.