Karavali
ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಿಂದ ಪುರಸಭೆ ವ್ಯಾಪ್ತಿಗೆ ಪ್ರವೇಶ ನೀಡದೇ ಇದ್ದರೆ ಪ್ರತಿಭಟನೆ - ಪುರಸಭೆ ಎಚ್ಚರಿಕೆ
- Tue, Aug 31 2021 10:00:14 PM
-
ಕುಂದಾಪುರ, ಆ 31 (DaijiworldNews/PY): ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ಪುರಸಭೆ ವ್ಯಾಪ್ತಿಗೆ ಪ್ರವೇಶ ನೀಡಲು ಯೋಜನಾ ನಿರ್ದೇಶಕರು ಒಪ್ಪದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಪುರಸಭೆ ಸದಸ್ಯರು ಹೆದ್ದಾರಿಯಿಂದ ಪುರಸಭಾ ಪರಿಮಿತಿಯೊಳಗೆ ಪ್ರವೇಶ ನೀಡುವಂತೆ ಸರ್ವಾನುಮತದ ನಿರ್ಣಯ ಮಾಡಿದ್ದಾರೆ. ಪ್ರವೇಶ ನೀಡದೇ ಇದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಪುರಸಭೆ ಎಚ್ಚರಿಸಿದೆ.
ಮಂಗಳವಾರ ಕುಂದಾಪುರ ಪುರಸಭೆಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ಪುರಸಭಾ ವ್ಯಾಪ್ತಿಗೆ ಆಗುತ್ತಿರುವ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಸದಸ್ಯರು ಕೆಂಡ ಕಾರಿದರು. ಬೊಬ್ಬರ್ಯ ಕಟ್ಟೆಯ ಹತ್ತಿರ ಪ್ರವೇಶ ನೀಡಲು ಹೆದ್ದಾರಿ ಯೋಜನಾ ನಿರ್ದೇಶಕರು ಖಡಾಖಂಡಿತವಾಗಿ ನಿರಾಕರಿಸಿರುವುದನ್ನು ಖಂಡಿಸಲಾಯಿತು.
ಹಿರಿಯ ಸದಸ್ಯ ಮೋಹನದಾಸ ಶೆಣೈ ಮಾತನಾಡಿ, "ಕುಂದಾಪುರದಲ್ಲಿ ಚತುಷ್ಪಥ ಹಾದು ಹೋಗುತ್ತಿದೆಯಾದರೂ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶವಿಲ್ಲ. ಕುಂದಾಪುರ ಪಟ್ಟಣವನ್ನು ಪ್ರವೇಶಸಿಸುವುದು ಗೊಂದಲವಾಗಿದೆ. ಮೇಲಾಗಿ ಕುಂದಾಪುರದ ಬೊಬ್ಬರ್ಯಕಟ್ಟೆ ಭಾಗದಲ್ಲಿ 10-15 ಸರ್ಕಾರಿ ಕಛೇರಿ ಶಾಲಾ ಕಾಲೇಜು ಗಳಿವೆ. ಅಲ್ಲಿ ಪ್ರವೇಶ ಕೊಡಲು ಒಂದು ಹಂತದಲ್ಲಿ ಒಪ್ಪಿ ಈಗ ಆಗುವುದಿಲ್ಲ ಅಂದರೆ ಏನು?" ಎಂದು ಖಾರವಾಗಿ ಪ್ರಶ್ನಿಸಿದರು.
ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, "ಇವತ್ತು ಕುಂದಾಪುರ ನಗರಕ್ಕೆ ದಾರಿ ಯಾವುದಯ್ಯ ಎನ್ನುವ ಪ್ರಶ್ನೆ ಕಾಡುತ್ತಿದೆ. ಬಸ್ರೂರು ಅಂಡಾರ್ಪಾಸ್ನಲ್ಲಿ ನೀರು ನಿಲ್ಲುತ್ತಿದೆ. ಸರ್ವೀಸ್ ರಸ್ತೆ ಸಮರ್ಪಕವಾಗಿಲ್ಲ, ದಾರಿದೀಪ, ಹೈಮಾಸ್ಕ್ ದೀಪಗಳ ಅಳವಡಿಕೆಯಾಗಿಲ್ಲ ಇತ್ಯಾದಿ ಸಮಸ್ಯೆಗಳು ಇವೆ" ಎಂದರು.
ಗಿರೀಶ್ ಜಿ.ಕೆ ಮಾತನಾಡಿ, "ಪ್ರವೇಶ ನೀಡಲು ಏಕೆ ಆಗುವುದಿಲ್ಲ. ಕೋಟೇಶ್ವರ, ಕೋಟ, ತೆಕ್ಕಟ್ಟೆ, ಸಾಸ್ತಾನ, ಸಾಲಿಗ್ರಾಮ ಮೊದಲಾದ ಕಡೆ ನಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕುಂದಾಪುರ ಪುರಸಭಾ ಪರಿಮಿತಿಯೊಳಗೆ ಪ್ರವೇಶ ನೀಡದೇ ಇದ್ದರೆ ಕುಂದಾಪುರದ ಜನತೆ ಒಟ್ಟಾಗಿ ರಸ್ತೆಯನ್ನು ತುಂಡರಿಸಿ ಪ್ರವೇಶ ಪಡೆಯುತ್ತೇವೆ. ಮೊಕದ್ದಮೆ ದಾಖಲಿಸುವುದಾದರೆ ದಾಖಲಿಸಿ, ನಾವೇನು ನಿಮ್ಮಲ್ಲಿ ಭಿಕ್ಷೆ ಬೇಡುವುದಿಲ್ಲ" ಎಂದು ಕಟುವಾಗಿ ಹೇಳಿದರು.
ಚಂದ್ರಶೇಖರ ಖಾರ್ವಿ ಮಾತನಾಡಿ, "ರಾಷ್ಟ್ರೀಯ ಹೆದ್ದಾರಿ ಅಧಿಕೃತವಾಗಿ ಉದ್ಘಾಟನೆಗೊಂಡಿಲ್ಲ, ಸರ್ವಿಸ್ ರಸ್ತೆಗಳು ಎಲ್ಲಿವೆ? ಎಷ್ಟು ಕಡೆ ಚರಂಡಿ ಸರಿಯಾಗಿದೆ? ಸಂಪೂರ್ಣ ಅವೈಜ್ಞಾನಿಕ ಕಾಮಗಾರಿ ನಡೆಸಿರುವ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಮೇಲೆಯೇ ಮೊಕದ್ದಮೆ ದಾಖಲಿಸಬೇಕು ಎಂದ ಅವರು ಹೈಮಾಸ್ಕ್ ದೀಪ ಅಳವಡಿಸಿಲ್ಲ, ದಾರಿದೀಪ ಅಳವಡಿಸಿಲ್ಲ, ಯದ್ವಾತದ್ವಾ ಕಾಮಗಾರಿ ನಡೆಸಿದ್ದಾರೆ" ಎಂದರು.
ಸಂತೋಷ ಕುಮಾರ್ ಶೆಟ್ಟಿ ಮಾತನಾಡಿ, "ಸರ್ಜನ್ ಆಸ್ಪತ್ರೆ, ದುರ್ಗಾಂಬಾ ಆಫೀಸ್ ಹತ್ತಿರ ಪ್ರವೇಶಾವಕಾಶ ನೀಡಲಾಗಿದೆ. ಕುಂದಾಪುರದಲ್ಲಿ ಏಕಿಲ್ಲ? ಎಂದು ಪ್ರಶ್ನಿಸಿದರು. ಕುಂದಾಪುರದಲ್ಲಿ ನವಯುಗ ಮತ್ತು ಐಆರ್ಬಿ ಕಂಪೆನಿಗಳಿಂದಾಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹತ್ತಿರ 80 ಮೀಟರ್ ಬಿಟ್ಟಿದ್ದಾರೆ. ಇಲ್ಲಿ ನೀರು ನಿಲ್ಲುತ್ತದೆ. ಚರಂಡಿ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವುದು ಯಾರು? ಎಂದು ಪ್ರಶ್ನಿಸಿದರು. ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ ಟೆಂಡರ್ ಕೊಡುವ ಸಂದರ್ಭ 80 ಮೀಟರ್ ಬಾಕಿ ಉಳಿಸಿಕೊಂಡಿದ್ದರಿಂದ ಈಗ ಸಮಸ್ಯೆಯಾಗಿದೆ. ಇಲ್ಲಿ ಮೂಲಭೂತ ಸಮಸ್ಯೆಗಳನ್ನು ಹೆದ್ದಾರಿ ಅಧಿಕಾರಿಗಳು ಪರಿಹರಿಸಬೇಕು" ಎಂದು ಸೂಚಿಸಿದರು.
ಸಭೆಯ ನಿರ್ಣಯದ ಪ್ರತಿಯನ್ನು ಅಧಿಕಾರಿಗಳಿಗೆ ಮಾತ್ರವಲ್ಲ ಸಂಸದರು, ಶಾಸಕರಿಗೂ ತಲುಪಿಸಬೇಕು, ತಳಮಟ್ಟದಿಂದಲೇ ಕೆಲಸ ಆಗಬೇಕು ಎಂದರು. ಈ ವಿಷಯದ ಕುರಿತ ಚರ್ಚೆಯಲ್ಲಿ ಪ್ರಭಾಕರ, ಅಬು ಮಹಮ್ಮದ್, ನಾಗರಾಜ್ ಕಾಂಚನ್, ರತ್ನಾಕರ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಧ್ವನಿಗೂಡಿಸಿದರು.
ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಟ್ರಾಫಿಕ್ ಠಾಣೆಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಪಾರ್ಕಿಂಗ್ಗೆ ಸ್ಥಳ ನಿಗಧಿಗೊಳಿಸುವ ಕುರಿತ ಸದಸ್ಯರೊಂದಿಗೆ ಸ್ಥಳ ಪರಿಶೀಲನೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುವ ಬಗ್ಗೆ ನಿರ್ಣಯಿಸಲಾಯಿತು.
ಕಟ್ಟಡ ನಿರ್ಮಾಣ ಮಾಡುವ ಸಂದರ್ಭ ಪಾರ್ಕಿಂಗ್ ಸ್ಥಳ ನೀಡುವುದು ಕಡ್ಡಾಯ ಪಾಲಿಸಬೇಕು. ಕೆಲವೆಡೆ ರಸ್ತೆಗೆ ತಾಗಿಕೊಂಡೇ ಕಟ್ಟಡಗಳಿವೆ. ರಸ್ತೆಯ ಸ್ಥಳವನ್ನು ಆಕ್ರಮಿಸಿಕೊಂಡು ಕಟ್ಟಡಗಳು ತಲೆ ಎತ್ತುತ್ತಿವೆ. ಇಂಥಹ ಅಕ್ರಮ ಕಟ್ಟಡಗಳನ್ನು ತೆರವು ಮಾಡಬೇಕು. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ಸರ್ಕಾರಿ ಸ್ಥಳಗಳ ಬಗ್ಗೆ ಶ್ರೀಧರ ಶೇರಿಗಾರ್ ಪ್ರಶ್ನಿಸಿದರು.
ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, "ಈ ಸಂಬಂಧ ಈಗಾಗಲೇ 7 ನೋಟಿಸ್ ನೀಡಲಾಗಿದೆ. 2 ಹೈಕೋರ್ಟ್ಗೆ ಹೋಗಿದೆ. ಇಂದು ಎಸಿಬಿಯಲ್ಲಿ ತನಿಖೆ ನಡೆಯುತ್ತಿದೆ. 2016ರಲ್ಲಿ ಪುರಸಭಾ ವ್ಯಾಪ್ತಿಯ ಸರ್ಕಾರಿ ಸ್ಥಳಗಳ 200 ಆರ್ಟಿಸಿ ಗಳನ್ನು ತಗೆಯಲಾಗಿದೆ. ಅದು 1959ರ ಪ್ರಕಾರ ಪಟ್ಟಣ ಪಂಚಾಯತ್ ಎಂದಿದೆ. ಅದನ್ನು ಪುರಸಭೆ ಯಾಗಿ ಬದಲಾವಣೆ ಇಲಾಖಾ ಮಟ್ಟದಲ್ಲಿ ಆಗಬೇಕು" ಎಂದರು.
ಚಂದ್ರಶೇಖರ ಖಾರ್ವಿ ಮಾತನಾಡಿ ಬಸ್ಗಳ ಕರ್ಕಶ ಹಾರ್ನ್ಗೆ ಕಡಿವಾಣ ಹಾಕುವಂತೆ ವಿನಂತಿಸಿದರು.
ಅಶ್ವಿನಿ ಪ್ರದೀಪ್ ಮಾತನಾಡಿ, "ರಸ್ತೆ ನಿಯಮ ಉಲ್ಲಂಘಿಸುವ ಮೇಲೆ ಸ್ಥಳದಲ್ಲಿ ದಂಡ ವಿಧಿಸಿ ಅವರನ್ನು ಸಮಸ್ಯೆಗಿಡು ಮಾಡುವ ಬದಲು ಆಪ್ ಮೂಲಕ ನೊಟೀಸ್ ನೀಡುವ ವಿಧಾನ ಅನುಸರಿಸುವುದು ಸೂಕ್ತ" ಎಂದರು.
ಪ್ರಕಾಶ ಖಾರ್ವಿ ಮಾತನಾಡಿ, "ಬಸ್ ನಿಲ್ದಾಣದಲ್ಲಿ ಕೆಲವು ಬಸ್ ಚಾಲಕರು ನಿರ್ಲಕ್ಷ್ಯದ ಚಾಲನೆ ಮಾಡುತ್ತಿದ್ದು ಈ ಬಗ್ಗೆ ಎಚ್ಚರಿಸುವ ಕೆಲಸ ಆಗಬೇಕು" ಎಂದರು.
ರತ್ನಾಕರ ಕುಂದಾಪುರ, ಪ್ರಭಾಕರ, ಪುಷ್ಪಾಶೇಟ್ ಧ್ವನಿಗೂಡಿಸಿದರು. ಯುಜಿಡಿ ಸಮಸ್ಯೆ, ಮೆಸ್ಕಾಂ ಸಮಸ್ಯೆಯ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.