ಉಡುಪಿ, ಆ 31 (DaijiworldNews/PY): ಉಡುಪಿ ಎಂದರೆ ಕೃಷ್ಣನ ನೆಲೆವೀಡು. ಶ್ರೀ ಕೃಷ್ಣಮಠದಲ್ಲಿ ಎರಡು ದಿನ ವಿಜೃಂಭಣೆಯಿಂದ ಆಚರಿಸುವ ಕೃಷ್ಣ ಲೀಲೋತ್ಸವವು ಇಂದು ವಿಟ್ಲಪಿಂಡಿಯ ದಿನ ಮೊಸರು ಕುಡಿಕೆ, ಚಿನ್ನದ ರಥದ ಮೇಲೆ ಕೃಷ್ಣನ ತೇರನ್ನು ಭಕ್ತಾಧಿಗಳು ಎಳೆಯುವ ಮೂಲಕ ಅಷ್ಟಮಿ ಸಂಪನ್ನಗೊಂಡಿತು.
ಕೊರೊನಾ ಮಾರ್ಗಸೂಚಿಯನ್ನು ಅನುಸರಿಸಿಕೊಂಡು ಕೃಷ್ಣ ಮಠದ ಆಡಳಿತ ಮಂಡಳಿಯು ಆಯೋಜನೆ ಮಾಡಿದೆ. ಕಳೆದ ವರ್ಷ ಅಷ್ಟಮಿ ಕೊರೊನಾ ಕಾರಣದಿಂದ ನಡೆಯಲು ಸಾದ್ಯವಾಗಲಿಲ್ಲ. ಈ ಬಾರಿಯೂ ಕೂಡ ಧಾರ್ಮಿಕ ಆಚರಣೆಗೆ ಧಕ್ಕೆಯಾಗದಂತೆ, ಹೆಚ್ಚೇನು ಆಡಂಬರವಿಲ್ಲದಂತೆ ಆಚರಣೆ ಮಾಡಲಾಯಿತು.
ಸೋಮವಾರ ಮತ್ತು ಮಂಗಳವಾರ ಮಧ್ಯಾಹ್ನದವರೆಗೆ ಭಕ್ತರಿಗೆ ಶ್ರೀ ಕೃಷ್ಣ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿ ವರ್ಷವೂ ನಡೆಯುತ್ತಿದ್ದ್ ಮಹಾ ಅನ್ನಸಂತರ್ಪಣೆ ಈ ಬಾರಿ ನಡೆಯಲಿಲ್ಲ, ಗಾಯನ-ಗೀತೆಗಳಿಗೆ ಮದ್ವ ಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ನಂತರ ರಥಬೀದಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂದಿಸಲಾಗಿತ್ತು. ಬೀದಿಯ ಸುತ್ತಲೂ ಹೆಚ್ಚಿನ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿತ್ತು. ಹುಲಿವೇಷ ತಂಡಕ್ಕೆ, ಬೇರೆ ವೇಷಗಳಿಗೆ ಅವಕಾಶ ಇಲ್ಲದಿದ್ದರೂ ಅಲ್ಲಲ್ಲಿ ವೇಷಧಾರಿಗಳು ಜನರನ್ನು ಮನರಂಜಿಸುತ್ತಿದ್ದುದು ಕಂಡು ಬಂತು. ಬಡ ಮಗುವಿನ ಚಿಕಿತ್ಸೆಗೆ ಧನ ಸಹಾಯ ಮಾಡುವ ರವಿ ಕಟಪಾಡಿಯವರಿಗೆ ವೇಷಹಾಕಲು ಜಿಲ್ಲಾಡಳಿತ ವಿಶೇಷವಾಗಿ ಅನುಮತಿ ನೀಡಿತ್ತು.
ಕಳೆದ ವರ್ಷಗಳಿಂದ ಉಡುಪಿ ಮಠಕ್ಕೆ ಬಾರದ ಭಕ್ತರು ಈ ಬಾರಿ ಉತ್ಸುಕತೆಯಿಂದ ಆಗಮಿಸಿದ್ದು, ಸುವರ್ಣರಥವನ್ನೇರಿದ ಮುದ್ದಾದ ಕೃಷ್ಣನ ಮೂರ್ತಿಯನ್ನು ನೋಡಲು ಜನರು ಅಲ್ಲಲ್ಲಿ ಮಠದ ಆವರಣದ ನಿಂತು ವೀಕ್ಷಿಸಿದರು.
ರಥಬೀದಿಯ ಸುತ್ತಲೂ ಸಕಲ ವಾದ್ಯಘೋಷದಿಂದ ಶ್ರೀಕೃಷ್ಣನ ತೇರು ಆರಂಭವಾಯಿತು. ಗೊಲ್ಲ ವೇಷ ತೊಟ್ಟ ಮಠದ ಯುವಕರು ರಥಬೀದಿಯ ಮಧ್ಯ ಮಧ್ಯ ನೆಟ್ಟ ಗುರ್ಜಿಗಳಿಗೆ ನೇತು ಹಾಕುವ ಮೊಸರು ಕುಡಿಕೆಯನ್ನ ಒಡೆಯುವ ಮೂಲಕ ಮೊಸರು ಕುಡಿಯ ಆಚರಿಸಿ ಸಂಬ್ರಮಿಸಿದರು. ಅದೇ ರೀತಿ, ರಥಬೀದಿ ಒಂದು ಸುತ್ತು ಪ್ರದಕ್ಷಿಣೆ ಬಂದ ನಂತರ ಪರ್ಯಾಯ ಪೀಠಾಧೀಶ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಕೊನೆಯ ಆರತಿ ಮಾಡಿ, ಮಧ್ವಸರೋವರದಲ್ಲಿ ವಿಸರ್ಜಿಸಿದರು.
ಪರ್ಯಾಯ ಅದಮಾರು ಹಿರಿಯ ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಹಿರಿಯ ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.