ಮಂಗಳೂರು, ಆ 31 (DaijiworldNews/PY): ಮಂಗಳೂರು ನಗರದ ಅಭಿವೃದ್ಧಿಯ ಕುರಿತು, ತೆರಿಗೆ ಸಂಗ್ರಹಣೆ, ಕಟ್ಟಡ ಪರವಾನಿಗೆ, ಏಕಗವಾಕ್ಷಿ ಯೋಜನೆ, ಕಸ ನಿರ್ವಹಣೆ, ಎಸ್.ಟಿ.ಪಿ ಅಳವಡಿಕೆ ಮತ್ತು ನಿರ್ವಹಣೆ, ಒಳಚರಂಡಿ ಜಾಲಕ್ಕೆ ಮಳೆನೀರು ಬಿಡುವ ಸಮಸ್ಯೆ, ಒಳಚರಂಡಿ ಜೋಡಣೆ ಹಾಗೂ ಇನ್ನಿತರ ವಿಷಯಗಳ ಕುರಿತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸುಧಾರಣೆ ತರುವ ನಿಟ್ಟಿನಲ್ಲಿ ಆ.30ರಂದು ನಡೆದ ಆಯುಕ್ತರ ಅಧ್ಯಕ್ಷತೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಸಮಿತಿ ಸಭಾಂಗಣದಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್ಮೆಂಟ್, ವಾಣಿಜ್ಯ ಕಟ್ಟಡಗಳ ಮಾಹಿತಿಯನ್ನೊಳಗೊಂಡ ಆಸ್ತಿ ಡಾಟಾಬೇಸ್ ಅಭಿವೃದ್ದಿಪಡಿಸುವ ಸಂಬಂಧ ಪಾಲಿಕೆಯಿಂದ ನಿಗಧಿಪಡಿಸಿದ ನಮೂನೆಯಲ್ಲಿ ಭರ್ತಿ ಮಾಡಿ ನಿಗದಿತ ಸಮಯದೊಳಗೆ ಸಂಪೂರ್ಣ ಮಾಹಿತಿಯನ್ನು, ಕಟ್ಟಡ ಅಭಿವೃದ್ಧಿದಾರರು/ಕಟ್ಟಡದ ಮಾಲೀಕರು ನೀಡುವ ಬಗ್ಗೆ ಕ್ರಮವಹಿಸಲು ನಿರ್ಣಯಿಸಲಾಯಿತು.
ಘನತ್ಯಾಜ್ಯ ಸಮರ್ಪಕ ನಿರ್ವಹಣೆಯ ಕುರಿತು ಇರುವ ವಿವಿಧ ಮಾದರಿಯ ತಂತ್ರಜ್ಞಾನದ ಬಗ್ಗೆ ಕಾರ್ಯಾಗಾರ ಪ್ರದರ್ಶನ ನಡೆಸಿಕೊಂಡು, ಆಸಕ್ತದಾರರಿಗೆ ಸೂಕ್ತ ಮಾಹಿತಿ ನೀಡಲು ಆರೋಗ್ಯ ವಿಭಾಗದಿಂದ ಕ್ರಮವಹಿಸುವ ಬಗ್ಗೆ ತೀರ್ಮಾನಿಸಲಾಯಿತು.
ಕಟ್ಟಡ ಪರವಾನಿಗೆಗೆ ಸಂಬಂಧಪಟ್ಟಂತೆ ಏಕಗವಾಕ್ಷಿ ಯೋಜನೆಯ ನಿರ್ಮಾಣ (II) ರ ತಂತ್ರಾಂಶದ ಮೂಲಕ ಪರವಾನಿಗೆ ನೀಡುವ ಪ್ರಕ್ರಿಯೆಯಲ್ಲಿ ಪ್ರಸ್ತುತ ಇರುವ ಅಡಚಣೆಗಳ ಕುರಿತು ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯ ಸುಸೂತ್ರ ನಿರ್ವಹಣೆಯ ಬಗ್ಗೆ ತಜ್ಞ-ಆರ್ಕಿಟೆಕ್ಟ್-ಇಂಜಿನಿಯರರು ಅವರ ಸಹಭಾಗಿತ್ವದೊಂದಿಗೆ ಸೂಕ್ತ ಪರಿಹಾರ ಕಂಡುಹುಡುಕಲು ನಿರ್ಣಯಿಸಲಾಯಿತು.
ಪಾಲಿಕೆ ವ್ಯಾಪ್ತಿಯ ವಸತಿ/ಬಹುಮಹಡಿ/ವಾಣಿಜ್ಯ/ಕೈಗಾರಿಕೆ/ಇತರೆ ಕಟ್ಟಡಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಪಾಲಿಕೆಯ ಒಳಚರಂಡಿ ಜಾಲಕ್ಕೆ ಸಂಪರ್ಕಿಸುತ್ತಿರುವುದರಿಂದ ಪಾಲಿಕೆಯ ಒಳಚರಂಡಿ ಜಾಲದ ನಿರ್ವಹಣೆ ಮಾಡಲು ತೊಂದರೆಯಾಗುತ್ತಿರುವುದರಿಂದ ಕಟ್ಟಡಗಳಲ್ಲಿ ತಪಾಸಣಾ ಚೇಂಬರ್ನಲ್ಲಿ ಗ್ರೇಟಿಂಗ್ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸೂಕ್ತ ನಿರ್ವಹಣೆ ಮಾಡುವ ಅಗತ್ಯತೆ ಬಗ್ಗೆ ಚರ್ಚಿಸಲಾಯಿತು. ಕಟ್ಟಡದಿಂದ ಒಳಚರಂಡಿ ಜಾಲಕ್ಕೆ ಮಳೆನೀರು ಸಂಪರ್ಕ ನೀಡುತ್ತಿರುವುದರಿಂದ ಆಳುಗುಂಡಿ ಉಕ್ಕಿ ಹರಿಯುವ ಸಮಸ್ಯೆಯ ಕುರಿತು ಚರ್ಚಿಸಲಾಯಿತು. ಮಳೆ ನೀರನ್ನು ಒಳಚರಂಡಿಗೆ ಬಿಡದೆ ರಸ್ತೆ ಬದಿಯ ಚರಂಡಿಗೆ ನೀಡುವಂತೆ ಸೂಚಿಸಲಾಯಿತು.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪಾರ್ಕ್, ವೃತ್ತ, ಮೀಡಿಯನ್ ಮತ್ತು ಕೆರೆಗಳ ಅಭಿವೃದ್ಧಿಗೊಳಿಸಿ ಸುಂದರೀಕರಣಗೊಳಿಸುವುದು ಮತ್ತು ಅದರ ನಿರ್ವಹಣೆ ವಹಿಸಿಕೊಳ್ಳುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಇಂತಹ ಪ್ರಸ್ತಾವನೆಗಳ ಕುರಿತು ವಿನ್ಯಾಸ, ಅಂದಾಜು ವೆಚ್ಚ, ವಾರ್ಷಿಕ ನಿರ್ವಹಣೆ ವೆಚ್ಚಗಳ ವಿವರವನ್ನು ತಯಾರಿಸಿಕೊಂಡು ನೀಡಿದ್ದಲ್ಲಿ ಈ ಬಗ್ಗೆ ಬಿಲ್ಡರ್ಸ್ ಎಸೋಶಿಯೇಶನ್ನವರು ನಿರ್ವಹಣೆ ಮಾಡುವ ಕ್ರಮವಹಿಸುವುದಾಗಿ ತಿಳಿಸಿದರು.