ಕಾಸರಗೋಡು, ಆ 31 (DaijiworldNews/PY): ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಬಾಲಕಿಯೋರ್ವಳು ಮೃತಪಟ್ಟ ದಾರುಣ ಘಟನೆ ನಗರ ಹೊರವಲಯದ ಚೆರ್ಕಳದಲ್ಲಿ ನಡೆದಿದೆ.
ಮಧೂರು ಅರಂತ್ತೋಡಿನ ಫಿರೋಜ್ - ತಾಹಿರಾ ದಂಪತಿ ಪುತ್ರ ಫಾತಿಮಾ (11) ಮೃತಪಟ್ಟ ಬಾಲಕಿ. ಚೆರ್ಕಳ ಬಂಬ್ರಾಣಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ.
ಮನೆ ಸಮೀಪ ನಿರ್ಮಾಣ ಹಂತದಲ್ಲಿರುವ ಮನೆ ಪರಿಸರದಲ್ಲಿ ತೆಗೆಯಲಾಗಿದ್ದ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಈ ದುರ್ಘಟನೆ ನಡೆದಿದೆ. ಎರಡು ದಿನಗಳಿಂದ ಮಳೆ ಸುರಿದಿದ್ದರಿಂದ ಈ ಹೊಂಡದಲ್ಲಿ ನೀರು ತುಂಬಿತ್ತು.
ಹೊಂಡಕ್ಕೆ ಬಿದ್ದಿದ್ದ ಫಾತಿಮಾಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಈಕೆ ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲಾ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ವಿದ್ಯಾನಗರ ಠಾಣಾ ಪೊಲೀಸರು ಮಹಜರು ನಡೆಸಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.