ಬಂಟ್ವಾಳ, ಆ 31 (DaijiworldNews/PY): "ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೃಷಿಗೆ ಪೂರಕವಾದ ತಂತ್ರಜ್ಞಾನದ ವಿಚಾರಗಳನ್ನು ರೈತ ಮೋರ್ಚಾದ ಮೂಲಕ ಕಾರ್ಯಾಗಾರಗಳನ್ನು ನಡೆಸಲು ಚಿಂತನೆ ನಡೆಸಿದರೆ ಕೃಷಿಕರಿಗೆ ಸಹಾಯವಾಗುತ್ತದೆ. ಜೊತೆಗೆ ಬಿಜೆಪಿ ಸಂಘಟನಾತ್ಮಕವಾಗಿ ಬೆಳೆಯಬಹುದು" ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಬಿ.ಸಿ.ರೋಡ್ನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಜಿಲ್ಲಾ ರೈತ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
"ಭಾರತದ ಕೃಷಿಕರ ಆರ್ಥಿಕತೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಪ್ರಧಾನಿ ಮೋದಿಯವರು ಕೃಷಿಗೆ ಸಹಕಾರಿಯಾಗುವ ಅನೇಕ ಯೋಜನೆಗಳನ್ನು ಜಾರಿಮಾಡಿದ್ದಾರೆ. ಪಂಚಾಯತ್ನಿಂದ ಸಂಸದರರವರೆಗೆ ಬಿಜೆಪಿ ಪಕ್ಷ ಸಂಘಟನಾತ್ಮಕ ವಾಗಿ ಬೆಳೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗ ವಿರೋಧ ಪಕ್ಷಗಳು ದೇಶ ದ್ರೋಹಿಗಳು ಸರಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ. ಕೊರೊನಾ ಸೊಂಕು ನಿಯಂತ್ರಣ ಹಾಗೂ ದೇಶದ ಅರ್ಥಿಕ ವ್ಯವಸ್ಥೆಯಲ್ಲಿ ಉತ್ತಮ ಸ್ಥಿತಿಯಲ್ಲಿ ಭಾರತ ಇದೆ ಎಂಬುದರ ಬಗ್ಗೆ ನಾವು ಹೆಮ್ಮೆಪಡಬೇಕಾಗಿದೆ" ಎಂದರು.
"ಬಲಿಷ್ಠ ನಾಯಕತ್ವದ ಅಡಿಯಲ್ಲಿ ಭಾರತ ದೇಶ ಉತ್ತಮ ಹಾದಿಯಲ್ಲಿ ಹೋಗುತ್ತಿರುವುದು ನಮಗೆಲ್ಲ ಸಂತಸದ ವಿಚಾರ" ಎಂದು ಹೇಳಿದರು.
"ಕೇರಳಕ್ಕೆ ವಿದ್ಯುತ್ ಹೈ ಪವರ್ ತಂತಿಗಳು ಹಾದು ಹೋಗುವ ರೈತರ ಜಮೀನಿನ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದ್ದು, ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಪರಿಹಾರವನ್ನು ಒದಗಿಸುವ ಕೆಲಸ ರೈತ ಮೋರ್ಚಾದ ಮೂಲಕ ಮಾಡಲಾಗುತ್ತದೆ" ಎಂದು ಭರವಸೆ ನೀಡಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, "ಬಿಜೆಪಿ ಪಕ್ಷದ ಜೊತೆಜೊತೆಯಲ್ಲಿ ಸಂಘಟನೆಗೆ ಪೂರಕವಾಗಿ ಕೆಲಸ ಕಾರ್ಯಗಳನ್ನು ಮಾಡಲು ರೈತ ಮೋರ್ಚಾ ರಚನೆಯಾಗಿದೆ" ಎಂದರು.
ಜಿಲ್ಲಾ ಮೋರ್ಚಾದ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ, "ಕೃಷಿಯಲ್ಲಿ ಹೊಸಹೊಸ ಮೂಲಕ ಸಾಧನೆ ಮಾಡಿದ ಜಿಲ್ಲೆಯ ಹೆಮ್ಮೆಯ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು" ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ತೀರ್ಥರಾಮ್, ಜಿಲ್ಲಾ ರೈತ ಮೋರ್ಚಾದ ಪ್ರಭಾರಿ ಮುಳಿಯ ಕೇಶವ ಭಟ್ , ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಸಂಜೀವ ಪೂಜಾರಿ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ವಿಜಯ ರೈ ವಂದಿಸಿದರು. ಪ್ರಧಾನ ಕಾರ್ಯದರ್ಶಿ ವಸಂತ ಅಣ್ಣಳಿಕೆ ಕಾರ್ಯಕ್ರಮ ನಿರೂಪಿದರು.