ಉಡುಪಿ, ಆ.31 (DaijiworldNews/HR): ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗಿದ್ದು, ಎಲ್ಲಾ ಗಣ್ಯರ ಸಮ್ಮುಖದಲ್ಲಿ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಂಗಳವಾರ ಮುಂಜಾನೆ ಭಗವಂತನಿಗೆ ಅರ್ಘ್ಯ ಪ್ರಧಾನ ಮಾಡಿದರು.
ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ರಾತ್ರಿ ಕೃಷ್ಣ ದೇವರಿಗೆ ತುಳಸಿ ಅರ್ಚನೆ, ಮಹಾಪೂಜೆಯನ್ನು ನೆರವೇರಿಸಿ ನಂತರ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಗರ್ಭಗುಡಿಯೊಳಗೆ ಕೃಷ್ಣ ದೇವರಿಗೆ ಅರ್ಘ್ಯ ನೀಡಿ ಚಂದ್ರೋದಯ ಸಮಯದಲ್ಲಿ ತುಳಸೀಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ನೀಡಿದರು. ನಂತರ ಭಕ್ತಾದಿಗಳಿಂದ ಅರ್ಘ್ಯಪ್ರಧಾನ ನಡೆಯಿತು.
ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಸುರಕ್ಷತಾ ಮುನ್ನೆಚ್ಚರಿಕೆಗಳ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾರ್ವಜನಿಕರಿಗೆ ರಥಭೀಧಿಯ ಎರಡು ಕಡೆಗಳಲ್ಲಿ ಅರ್ಘ್ಯ ಪ್ರಧಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಶ್ರೀ ಕೃಷ್ಣ ಬಾಲ್ಯದಲ್ಲಿ ತೊಡಗಿಸಿಕೊಂಡ ದೈವಿಕ ಕ್ರೀಡೆಯ ಪ್ರತೀಕ ವಿಟ್ಲಪಿಂಡಿ ಮಂಗಳವಾರ ಆಚರಿಸಲಾಗುತ್ತಿದೆ.
ವಿಟ್ಲಪಿಂಡಿಯ ದಿನ ಮಧ್ಯಾಹ್ನ ರಥಬೀದಿನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಿದ್ದು ಈ ಆಚರಣೆ ಸಂದರ್ಭದಲ್ಲಿ, ಜನರಿಗೆ ರಥಬೀದಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮಠದ ಜನರು ಹಾಗೂ ಸೀಮಿತ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ, ವಿಟ್ಲಪಿಂಡಿ ಆಚರಣೆಗಳು ನಡೆಯಲಿದೆ.
ಇನ್ನು ಅಷ್ಟಮಿಯ ಅಂಗವಾಗಿ ಸೋಮವಾರ ದಿನವೀಡಿ ಕೃಷ್ಣ ಮಠದಲ್ಲಿ ವಿವಿಧ ಕಾರ್ಯಕ್ರಮ ಗಳು ನಡೆದವು.