ಉಡುಪಿ, ಆ 30 (DaijiworldNews/PY): "ಇಲಾಖೆಯಲ್ಲಿರುವ ಸಮಸ್ಯೆಯನ್ನು ಹುಡುಕಿ ಪರಿಹಾರ ಕಂಡು ಹಿಡಿಯುವುದು ಮೊದಲ ಆದ್ಯತೆ. ವಿದ್ಯುತ್ ಉತ್ಪಾದನೆಯನ್ನು ಪರಿಸರ ಸ್ನೇಹಿಯಾಗಿಯೂ, ಆಡಳಿತವನ್ನು ಜನಸ್ನೇಹಿಯಾಗಿ ಮಾಡುವುದು ನಮ್ಮ ಮುಖ್ಯ ಉದ್ದೇಶ. ಗ್ರಾಹಕರನ್ನು, ರೈತರನ್ನು, ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಮಾಡುವ ಚಿಂತನೆಯಿದೆ. ಇಂಧನ ಇಲಾಖೆಯಲ್ಲಿ ಸೆಪ್ಟೆಂಬರ್ 10ರಿಂದ, ಮುಂದಿನ 100 ದಿನದ ಯೋಜನೆ ಹೇಗಿರಬೇಕು ಎಂದು ಗುರಿಯಾಗಿಸಿಕೊಂಡು ಕ್ರಿಯಾಯೋಜನೆಯನ್ನು ಸಿದ್ದಪಡಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಪ್ರಕಟಗೊಳ್ಳಲಿದೆ" ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ತಿಳಿಸಿದರು.
ಅವರು ಸೋಮವಾರದಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಮಾಸಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಾನು ಬದ್ದತೆಯಿಂದ ಕೆಲಸ ಮಾಡುವವನು, ಒತ್ತಡದಿಂದ ಮಾಡುವುದಿಲ್ಲ. ಯಾವುದನ್ನು ಹೇಳಬೇಕೋ ಅದನ್ನು ನೇರವಾಗಿ ಹೇಳಿ ಬಿಡುತ್ತೇನೆ ಅದಕ್ಕಾಗಿ ನಾನು ನಿಷ್ಠುರವಾಗುತ್ತೇನೆ" ಎಂದರು.
"ರಾಜ್ಯೋತ್ಸವ ಪ್ರಶಸ್ತಿಗೆ ಹೊಸ ರೂಪ ಕೊಟ್ಟು ಕೂಡಲೇ ಸಮಿತಿ ರಚಿಸಿ, ಆ ಸಮಿತಿಯೇ ಅರ್ಜಿದಾರರನ್ನು ಹೊರತು ಪಡಿಸಿ ನೇರವಾಗಿ ಅರ್ಹರನ್ನು ಗುರುತಿಸುವ ಯೋಚನೆ ಇದೆ. ಇದರೊಂದಿಗೆ ಆ ವ್ಯಕ್ತಿಯ ಅಭಿಪ್ರಾಯ ಸಂಗ್ರಹ ಕೂಡ ಆಗಬೇಕು. ಜಯಂತಿ ಆಚರಣೆಗಳು ಸರಕಾರದ ಕಾರ್ಯಕ್ರಮ ಆಗಿರದೆ, ಕೇವಲ ಕೆಲವು ಜಾತಿ ಸಮುದಾಯಗಳಿಗೆ ಸಿಮಿತವಾಗಿರಬಾರದು, ಸಾರ್ವಜನಿಕರ ಸಹಭಾಗಿತ್ವಬೇಕು" ಎಂದರು.
"ವಿದ್ಯುತ್ ಉತ್ಪಾದನೆಯಲ್ಲಿ ಸಾಕಷ್ಟು ಸೋರಿಕೆಯಾಗುತ್ತಿರುವುದು ಕಂಡು ಬರುತ್ತಿದೆ. ಅಧಿವೇಶನದ ಮೊದಲು ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಬೇಟಿ ನೀಡಲಿದ್ದು, ಪರಿಶೀಲನೆ ನಡೆಸಿ, ಸದ್ಬಳಕೆ ಆಗುವಂತೆ ನೋಡಿಕೊಳ್ಳುವೆ. ಉತ್ಪಾದನೆ, ಪೂರೈಕೆ ಮತ್ತು ಹಂಚಿಕೆಯಲ್ಲಿರುವ ಲೋಪಗಳನ್ನು ಸರಿಪಡಿಸಿ, ಮೆಸ್ಕಾಂಗೆ ಕೆಲಸ ಮಾಡಲು ಒಂದು ನಿರ್ದಿಷ್ಟವಾದ ಗುರಿ ಕೊಡುತ್ತೇವೆ. ಇನ್ನು ಟ್ರಾನ್ಸ್ಫಾರ್ಮ್ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಟ್ರಾನ್ಸ್ಫಾರ್ಮ್ಗೆ ಹೊಸ ರೀತಿಯ ಯೋಜನೆಯ ಅನುಷ್ಠಾನಕ್ಕೆ ಚಿಂತನೆ ನಡೆಸಲಾಗುತ್ತಿದೆ" ಎಂದರು.
"ಇಂಧನ ಇಲಾಖೆಯಲ್ಲಿ ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆಯಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನೇಮಕಾತಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ಭ್ರಷ್ಟತೆ ಕಂಡು ಬಂದರೆ ಅಂತಹ ಅಧಿಕಾರಿಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇನೆ" ಎಂದರು.
"ಇನ್ನು ಗಡಿ ಭಾಗದ ಗ್ರಾಮಗಳ ಹೆಸರು ಬದಲಾಯಿಸುವ ಚಿಂತನೆ ಇರುವ ಬಗ್ಗೆ ಮಾತನಾಡಿದ ಅವರು, ಕನ್ನಡದ ಶಬ್ದಗಳನ್ನು ಸರ್ಕಾರಗಳು ಬದಲಾಯಿಸಬಾರದು. ಕನ್ನಡಿಗರ ಭಾವನೆಗೆ ಧಕ್ಕೆ ಆಗಬಾರದು ಎಂದರು. ರಾಜ್ಯದಲ್ಲಿ ಪುಸ್ತಕ ಸಂಸ್ಕೃತಿ ಪ್ರಾರಂಭ ಆಗಿದೆ. ಸೆಪ್ಟೆಂಬರ್ 5ರಂದು ಕಾರ್ಕಳದಲ್ಲಿ ತನಗೆ ಕೊಟ್ಟ ಪುಸ್ತಕದ ಪ್ರದರ್ಶನ ನಡೆಯಲಿದೆ. ಈಗಾಗಲೇ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ನಾಲ್ಕು ಜಂಟಿ ನಿರ್ದೇಶಕರಿದ್ದು, ಕಂದಾಯ ಇಲಾಖೆಯಲ್ಲಿ ಸೇರಿ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು" ಎಂದು ತಿಳಿಸಿದರು.