ಮಂಗಳೂರು, ಆ 30 (DaijiworldNews/PY): "ರಾಷ್ಟ್ರೀಯ ಶಿಕ್ಷಣ ನೀತಿ ಕೇಸರೀಕರಣ ಅನ್ನೋದು ಸುಮ್ಮನೆ, ಈ ವಾದದಲ್ಲಿ ಹುರುಳಿಲ್ಲ" ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎಸ್ ಅಶ್ವತ್ಥ್ ನಾರಾಯಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶಿಕ್ಷಣಕ್ಕೆ ಕೊಡಬೇಕಾದ ಆದ್ಯತೆ ಸಿಗದೇ ಇರುವ ಕಾರಣ ನಾವು ಜಾಗತಿಕವಾಗಿ ಹಿಂದುಳಿಯುವಂತಾಗಿದೆ. ಈ ಕುರಿತು ಸೂಕ್ತ ಕಾಲದಲ್ಲಿ ತೀರ್ಮಾನ ಕೈಗೊಳ್ಳದೇ ಇರುವ ಕಾರಣ ಸಮಾಜಕ್ಕೆ ನಷ್ಟವಾಗಿದೆ" ಎಂದರು.
"ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆತುರದಿಂದ ಮಾಡಲು ಹೊರಟ್ಟಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಈ ಮಾತು ಸರಿಯಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಈ ರೀತಿ ಕೇಸರೀಕರಣ ಎನ್ನುವುದು ಸುಮ್ಮನೆ. ಈ ವಾದದಲ್ಲಿ ಹುರುಳಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯಾವುದೇ ಅಂಶ ವಿದ್ಯಾರ್ಥಿಗಳ ವಿರುದ್ದವಾಗಿಲ್ಲ. ಇದರಲ್ಲಿ ವಿದ್ಯಾರ್ಥಿಗಳಿಗೆ ವಿರುದ್ದವಾದ ಅಂಶಗಳಿದ್ದಲ್ಲಿ ತೋರಿಸಿ" ಎಂದು ತಿಳಿಸಿದರು.
"ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ಈಗಿನ ವಿಷಯಗಳನ್ನೇ ಬಳಸುತ್ತೇವೆ. ಆದರೆ, ವಿದ್ಯಾರ್ಥಿಗಳ ಆಯ್ಕೆಗೆ ಪ್ರತ್ಯೇಕವಾದ ಅವಕಾಶವಿದೆ. ಎನ್ಇಪಿಯನ್ನು ಅನುಷ್ಠಾನ ಮಾಡಲು ಯೋಜನೆ ರೂಪಿಸಲಾಗಿದೆ. ಆತುರದಲ್ಲಿ ಶಿಕ್ಷಣ ನೀತಿ ಅನುಷ್ಠಾನಗೊಳಿಸಿಲ್ಲ. ಶಿಕ್ಷಣದ ಸುಧಾರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ಮೂಲತತ್ವಗಳಲ್ಲಿ ಸುಧಾರಣೆ ಮಾಡಲಾಗುತ್ತಿದೆ" ಎಂದು ಹೇಳಿದರು.
"ಕಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ನೀಡಲಾಗಿದೆ. ಅಂತರ್ ಶಿಸ್ತು ಪಾಲನೆಗೆ ಆದ್ಯತೆ ನೀಡಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಇಲ್ಲ ಎಂದರೆ ನಿಂತ ನೀರಾಗುತ್ತದೆ. ನಮ್ಮ ವಿದ್ಯಾರ್ಥಿಗಳು ವಿಶ್ವಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದೆ" ಎಂದರು.
"ನರ್ಸರಿಯಿಂದ ಉನ್ನತ ಶಿಕ್ಷಣದವರೆಗೆ ಎನ್ಇಪಿ ಸುಧಾರಣೆಯಾಗಲಿದೆ. ಈ ಸುಧಾರಣೆ ವಿಶ್ವ ವ್ಯಾಪ್ತಿಯಲ್ಲಿ ಸಾಬೀತಾಗಿರುವಂತಹದ್ದು. ಯಾವುದೇ ವಿದ್ಯಾರ್ಥಿಗಳ ವಿರುದ್ದವಾಗಿರುವಂತಹದ್ದು ಏನೂ ಇಲ್ಲ. ಕೊರೊನಾ ಹಿನ್ನೆಲೆ ಸ್ವಲ್ಪ ಅಡಚಣೆ ಉಂಟಾಗಿದೆ. ಮುಂದಿನ ವರ್ಷಗಳಲ್ಲಿ ಆಡಳಿತಾತ್ಮಕ ಸುಧಾರಣೆ ಕ್ರಮಗಳಾಗಲಿವೆ. ಈಗ ಶೈಕ್ಷಣಿಕ ಸುಧಾರಣೆಗಳನ್ನು ಮಾತ್ರವೇ ಜಾರಿಗೆ ತರಲಾಗಿದೆ" ಎಂದು ಹೇಳಿದರು.