ಮಂಗಳೂರು, ಆ 30 (DaijiworldNews/PY): ಶ್ರೀಕೃಷ್ಣ ಮಠ ಸಹಿತ ಕರಾವಳಿಯಾದ್ಯಂತ ಸೋಮವಾರ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ಮಂಗಳವಾರ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಆಚರಣೆ ಸಾಂಪ್ರದಾಯಿಕವಾಗಿ ನಡೆಯಲಿದೆ.
ದ.ಕ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಶ್ರೀಕೃಷ್ಣಾಷ್ಟಮಿ ಆಚರಣೆಗೆ ಅವಕಾಶವಿಲ್ಲ. ಈ ಹಿನ್ನೆಲೆ ಶ್ರೀ ಕೃಷ್ಣ ದೇವಾಲಯಗಳಲ್ಲಿ ದೇವರಿಗೆ ಸರಳವಾಗಿ ವಿಶೇಷ ಪೂಜೆ ನೆರವೇರಲಿದೆ. ಮನೆಗಳಲ್ಲಿ ಶ್ರೀಕೃಷ್ಣಾಷ್ಟಮಿಯನ್ನು ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಆ.30ರ ಸೋಮವಾರ ಮಠದಲ್ಲಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ನಡೆದರೆ, ಆ.31ರಂದು ಅಪರಾಹ್ನ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಸಾರ್ವಜನಿಕರಿಗೆ ಅವಕಾಶವಿಲ್ಲದೇ ಸಾಂಪ್ರದಾಯಿಕವಾಗಿ ರಥಬೀದಿಯಲ್ಲಿ ನಡೆಯಲಿದೆ.
ಬೆಳಗ್ಗೆ ಮಹಾಪೂಜೆಯ ಬಳಿಕ ರಾತ್ರಿ ಪೂಜೆಯ ನಿವೇದನೆಗೆ ಉಂಟೆ ಕಟ್ಟುವುದಕ್ಕೆ ಸ್ವಾಮೀಜಿ ಮುಹೂರ್ತ ಮಾಡುವರು. ಹಗಲು ಏಕಾದಶಿಯಂತೆ ನಿರ್ಜಲ ಉಪವಾಸವಿರುವ ಕಾರಣ ರಾತ್ರಿಯ ಮಹಾಪೂಜೆ ನಡೆಸಿ ಮಧ್ಯರಾತ್ರಿ 12.15ಕ್ಕೆ ಸ್ವಾಮೀಜಿಯವರು ಇತರ ಸ್ವಾಮೀಜಿಯವರೊಂದಿಗೆ ಅರ್ಘ್ಯಪ್ರದಾನ ಮಾಡಲಿದ್ದಾರೆ. ನಂತರ ಕನಕನ ಕಿಂಡಿ ಎದುರು ಹಾಗೂ ವಸಂತ ಮಂಟಪದಲ್ಲಿ ಅರ್ಘ್ಯವನ್ನು ಬಿಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಇಂದು ಬೆಳಗ್ಗೆ 8ರಿಂದ ಸಂಜೆ 6ರವರೆಗೆ, ಆ.31ರ ಬೆಳಗ್ಗೆ 7.30ರಿಂದ ಮಧ್ಯಾಹ್ನ 1ರವರೆಗೆ ರಥೋತ್ಸವದ ಬಳಿಕ 5 ಗಂಟೆಯಿಂದ ದರ್ಶನಕ್ಕೆ ಅವಕಾಶವಿದೆ. ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ದರ್ಶನ ಪಡೆಯಬೇಕು. ಯಾತ್ರಾರ್ಥಿಗಳು ವಿಶ್ವಪಥದ ಮೂಲಕ ಸುದರ್ಶನ ಪ್ರವೇಶ ಪತ್ರ ಹೊಂದಿದ ಸ್ಥಳೀಯರು ಉತ್ತರ ಹಾಗೂ ದಕ್ಷಿಣ ದ್ವಾರದಿಂದ ದರ್ಶನ ಪಡೆಯಬಹುದಾಗಿದೆ.