ಬಂಟ್ವಾಳ, ಆ 29 (DaijiworldNews/PY): ಬಂಟ್ವಾಳ ತಾಲೂಕಿನ ಬಂಟ್ವಾಳ ಧರ್ಮಸ್ಥಳ ರಸ್ತೆಯ ಭಂಡಾರಿಬೆಟ್ಟು ಎಸ್ಕೇಪ್ ರಸ್ತೆಯ ತಿರುವುನಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ ನಡೆದಿದ್ದು, ಅಪಘಾತದ ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ.
ಅಪಘಾತದಲ್ಲಿ ಕಕ್ಯೆಪದವು ನಿವಾಸಿ ಕೃಷ್ಣಮಯ್ಯ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಜೊತೆ ಸಹ ಸವಾರ ಸಹೋದರ ಸೂರ್ಯನಾರಾಯಣ ಮಯ್ಯ ಅಪಾಯವಿಲ್ಲದೆ ಪಾರಾಗಿದ್ದಾರೆ.
ಬಂಟ್ವಾಳ ಬೈಪಾಸ್ ರಸ್ತೆಯಿಂದ ಬಂಟ್ವಾಳ ಪೇಟೆಗೆ ಭಂಡಾರಿ ಬೆಟ್ಟು ಎಂಬಲ್ಲಿಂದ ಎಸ್ಕೇಪ್ ರೋಡ್ಗೆ ಕ್ರಾಸ್ ಮಾಡುವ ವೇಳೆ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಆಲ್ಟೋ ಕಾರು ಹಿಂಬದಿಯಿಂದ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರಿಬ್ವರು ರಸ್ತೆಯ ಮೇಲೆ ಎಸೆಯಲ್ಪಟ್ಟಿದ್ದಾರೆ. ಅದೃಷ್ಟವಶಾತ್ ಬೈಕ್ ಸವಾರ ಕೃಷ್ಣ ಮಯ್ಯ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಜೊತೆಗೆ ಸಹಸವಾರ ಸಹೋದರ ಸೂರ್ಯನಾರಾಯಣ ಮಯ್ಯ ಅವರಿಗೆ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.
ಮೆಲ್ಕಾರ್ ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.