ಉಡುಪಿ, ಆ 29 (DaijiworldNews/PY): ಶ್ರೀಕೃಷ್ಣ ಜನ್ಮಾಷ್ಟಮಿ ತಯಾರಿ ಭರದಿಂದ ನಡೆಯುತ್ತಿದೆ. ಕೊರೊನಾ ಮಾರ್ಗಸೂಚಿಗಳೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲು ಸಿದ್ದತೆಗಳನ್ನು ಆರಂಭಿಸಿದೆ.
ಶ್ರೀಕೃಷ್ಣ ಜಯಂತಿ ಹಾಗೂ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಹಿನ್ನೆಲೆ ಮಠದ ಆಡಳಿತವು ಅದ್ದೂರಿಯಾದ ಆಚರಣೆಗಳನ್ನು ಮಾಡದೇ ಇರಲು ನಿರ್ಧರಿಸಿದೆ.
ಆ.30ರಂದು ಬೆಳಗ್ಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸಲಿದ್ದಾರೆ. ಮಧ್ಯರಾತ್ರಿ 12.30ರ ಬಳಿಕ ಅರ್ಘ್ಯ ಪ್ರದಾನ ನಡೆಯಲಿದೆ.
ಅರ್ಘ್ಯ ಪ್ರದಾನದ ಸಂದರ್ಭ ಭಕ್ತರಿಗೆ ಕನಕನ ಕಿಂಡಿ ಎದುರು ಹಾಗೂ ವಸಂತ ಮಂಟಪದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕೃಷ್ಣಾಷ್ಟಮಿ ಹಾಗೂ ಲೀಲೋತ್ಸವ (ವಿಟ್ಲಪಿಂಡಿ) ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆ.30ರಂದು ಬೆಳಗ್ಗೆ 8ರಿಂದ ಸಂಜೆ 6ರವರೆಗೆ, ಆ.31ರ ಬೆಳಗ್ಗೆ 7.30ರಿಂದ ಮಧ್ಯಾಹ್ನ 1ರವರೆಗೆ, ರಥೋತ್ಸವ ಬಳಿಕ ಸುಮಾರು 5 ಗಂಟೆಯಿಂದ ದರ್ಶನಕ್ಕೆ ಅವಕಾಶವಿದೆ.
ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಆಡಳಿತ ಮನವಿ ಮಾಡಿದೆ.