ಉಡುಪಿ, ಆ.28 (DaijiworldNews/HR): ಸರಕಾರಿ ಸ್ವಾಮ್ಯದ ಆಸ್ತಿಗಳನ್ನು ಮಾರಾಟ ಮಾಡುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಇಂದು ಉಡುಪಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಇಂದ್ರಾಳಿ ರೈಲ್ವೇ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಾಗ್ಮಿ ಸುಧೀರ್ ಕುಮಾರ್ ಮರೋಳಿ, 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಮಾಡುತಿದ್ದಾರೆ. ನಾವು ಪ್ರಚಾರ ಮಾಡದೇ ವ್ಯಾಕ್ಸಿನೇಶನ್ ನೀಡಿದ್ದೇವೆ. ನಿಮ್ಮ ಹಾಗೆ ಲಸಿಕೋತ್ಸವ ಎಂದು ಬ್ಯಾನರ್ ಹಾಕದೇ ಪ್ರತಿ ಗುರುವಾರ ಒಬ್ಬನೇ ಒಬ್ಬ ಪ್ರಧಾನಿಯ ಫೋಟೋ ಹಾಕದೇ ಲಸಿಕೆ ನೀಡಿದ್ದು ಕಾಂಗ್ರೆಸ್ ಕೀರ್ತಿ. ನಿರ್ಮಲಾ ಸೀತಾರಾಮನ್ ಅವರನ್ನು ವಿತ್ತ ಮಂತ್ರ ಸ್ಥಾನದಿಂದ ತೆಗೆಯಬೇಕು ಎಂಬ ಬೇಡಿಕೆ ಕೆಲವರಲ್ಲಿ ಇದೆ. ತಪ್ಪು ನಿರ್ಮಲಾ ಸೀತಾರಾಮನ್ ಅವರದ್ದು ಅಲ್ಲ. ನಿರ್ಮಲಾ ಸೀತಾರಾಮನ್ ಕೇವಲ ಮುಖವಾಡ ಅಷ್ಟೇ ಅವರ ಹೆಸರಿನಲ್ಲಿ ಇಂದು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಆರ್.ಎಸ್.ಎಸ್. ವ್ಯಾಪರ ಮಾಡಲು ಹೊರಟಿದೆ. ಕಾಂಗ್ರೆಸ್ ಕಟ್ಟಿಕೊಟ್ಟ ಸಂವಿಧಾನವನ್ನು ನಾಶ ಮಾಡುವ ಪ್ರಕ್ರಿಯೆಯ ಭಾಗವೇ ಖಾಸಗೀಕರಣ. ದೇಶದ ಸೊತ್ತುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಸರಕಾರಿ ನೌಕರರನ್ನು ಖಾಸಗಿಯವರ ಜೀತದಾಳಾಗುವ ಷಡ್ಯಂತ್ಯ ಇದರ ಹಿಂದಿದೆ" ಎಂದರು.
ಇನ್ನು ವಿವೇಕಶೂನ್ಯ ವ್ಯಕ್ತಿಗಳ ಕೈಯಲ್ಲಿ ಈ ದೇಶದ ಆಡಳಿತವನ್ನು ನೀಡಲಾಗಿದೆ. ಸ್ವಾತ್ರಂತ್ಯ ಹೋರಾಟದ ಜಾಗೃತಿಗಾಗಿ ತಿಲಕರು ಕಂಡುಕೊಂಡ ಮಾರ್ಗವೇ ಗಣೇಶೋತ್ಸವ. ಇದನ್ನು ಈ ಬಾರಿ ವೈಜ್ಞಾನಿಕ ಕಾರಣಗಳಿಗಾಗಿ ನಿಷೇಧ ಮಾಡಿದರೆ ಸರಕಾರದ ಆದೇಶಕ್ಕೆ ಬದ್ದವಾಗಿರುತ್ತೇವೆ. ಆದರೆ ಇಂತಹದೇ ನಿರ್ಧಾರವನ್ನು ಸಿದ್ದರಾಮಯ್ಯ ಸರಕಾರ ಮಾಡಿದ್ದರೇ ಇವತ್ತು ಶೋಭಾ
ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ರಘುಪತಿ ಭಟ್ ರಸ್ತೆಯಲ್ಲಿ ಉರುಳು ಸೇವೆ ಮಾಡುತಿದ್ದರು. ರಾಜ್ಯದ ಎಲ್ಲಾ ಎಸ್ಕಾಂ ಕಂಪನಿಗಳನ್ನು ಖಾಸಗೀಕರಣ ಮಾಡುವ ಎಲ್ಲಾ ಪ್ರಕ್ರಿಯೆಗಳು ಈಗಾಗಲೇ ಮುಗಿದಿವೆ" ಎಂದಿದ್ದಾರೆ.
ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರುˌಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ˌಕಿಶನ್ ಹೆಗ್ಡೆ ಕೊಳ್ಕೆಬೈಲ್, ಅಣ್ಣಯ್ಯ ಶೇರಿಗಾರ್, ಡಾ. ಸುನಿತಾ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ನೀರೆ ಕೃಷ್ಣ ಶೆಟ್ಟಿ, ಅಜಿತ್ ಶೆಟ್ಟಿ, ರಮೇಶ್ ಕಾಂಚನ್, ಸತೀಶ್ ಅಮೀನ್ ಪಡುಕೆರೆ, ಕೀರ್ತಿ ಶೆಟ್ಟಿ, ರೋಷನ್ ಶೆಟ್ಟಿ, ಗಣೇಶ್ ನೆರ್ಗಿ ಉಪಸ್ಥಿತರಿದ್ದರು.