ಉಳ್ಳಾಲ, ಆ.28 (DaijiworldNews/HR): ಮೀನುಗಾರಿಕಾ ದೋಣಿಯಿಂದ ಎಸೆಯಲ್ಪಟ್ಟ ಮೀನುಗಾರನನ್ನು ಐವರ ತಂಡ ರಕ್ಷಿಸಿರುವ ಘಟನೆ ಉಳ್ಳಾಲ ಅಳಿವೆಬಾಗಿಲು ಸಮೀಪ ಇಂದು ನಡೆದಿದೆ.
ಸಾಂಧರ್ಭಿಕ ಚಿತ್ರ
ರಕ್ಷಣೆಗೊಳಗಾದವರನ್ನು ಬೆಂಗ್ರೆ ನಿವಾಸಿ ನವಾಝ್ (35) ಎಂದು ಗುರುತಿಸಲಾಗಿದೆ.
ಓಷಿಯನ್ ಬ್ರೀಝ್ ದೋಣಿಯಲ್ಲಿದ್ದ ಉಳಿಯ ನಿವಾಸಿ ಪ್ರೇಮ್ ಪ್ರಕಾಶ್ ಡಿಸೋಜ, ಅನಿಲ್ ಮೊಂತೇರೊ, ಸೂರ್ಯ ಪ್ರಕಾಶ್ ಡಿಸೋಜ ಹಾಗೂ ಬೆಂಗ್ರೆ ನಿವಾಸಿ ರಿತೇಶ್ ಮತ್ತು ಅಜಿತ್ ಎಂಬವರು ರಕ್ಷಿಸಿದವರಾಗಿದ್ದಾರೆ.
ಘಟನೆ ವಿವರ:
ಆ.27 ರಂದು ಬೆಳಿಗ್ಗೆ ನಾಡದೋಣಿ ಮೀನುಗಾರಿಕೆಯವರು ಸಮುದ್ರದಲ್ಲಿ ಬಲೆ ಹಾಕಿ ವಾಪಸ್ಸಾಗಿದ್ದರು. ಏಡಿ ಸಿಗುವ ಸಮಯವಾಗಿದ್ದರಿಂದಾಗಿ ಬಲೆ ಹಾಕಲಾಗಿತ್ತು. ಇಂದು ಬೆಳಿಗ್ಗೆ ಬಹುತೇಕ ದೋಣಿಯವರು ಹಾಕಿರುವ ಬಲೆಯನ್ನು ತೆಗೆಯಲು ಸಮುದ್ರಕ್ಕೆ ತೆರಳಿದ್ದರು. ಆದರೆ ಭಾರೀ ಗಾಳಿ ಬೀಸುತ್ತಿದ್ದ ಹಿನ್ನೆಲೆಯಲ್ಲಿ ಹಲವು ದೋಣಿಗಳು ತೆರಳದೇ ಉಳಿದಿತ್ತು. ಆದರೆ ಹೋದಂತಹ ದೋಣಿಯೊಂದು ಬಲೆ ತೆಗೆದು ವಾಪಸ್ಸಾಗುವಾಗ ಅಳಿವೆಬಾಗಿಲು ಸಮೀಪ ಕಲ್ಲುಗಳ ಮಧ್ಯೆಯಿಂದ ಒಳಬರುವ ಸಂದರ್ಭ ಎಂಜಿನ್ ನಿಷ್ಕ್ರಿಯಗೊಂಡಿದೆ. ಇದೇ ಸಂದರ್ಭ ಭಾರೀ ಗಾಳಿಯೊಂದು ಅಪ್ಪಳಿಸಿದಾಗ ಮೀನುಗಾರಿಕಾ ದೋಣಿಯಲ್ಲಿದ್ದ ನವಾಝ್ ಎಂಬವರು ಸಮುದ್ರಕ್ಕೆ ಬಿದ್ದಿದ್ದಾರೆ. ಆದರೆ ಅಲೆಗಳ ಅಪ್ಪಳಿಸುವಿಕೆಗೆ ದೋಣಿ ನಿಲ್ಲಿಸಲಾಗದೆ ಮೀನುಗಾರರು ಸಮುದ್ರಕ್ಕೆ ಬಿದ್ದವನ ರಕ್ಷಣೆಗೆ ಥರ್ಮಕೋಲನ್ನು ಎಸೆದಿದ್ದಾರೆ. ಅಷ್ಟರಲ್ಲಾಗಲೇ ಸೆರೆಗಳ ಮಧ್ಯೆ ನವಾಝ್ ಸಿಲುಕಿದ್ದು, ನಿಷ್ಕ್ರಿಯಗೊಂಡ ದೋಣಿಯನ್ನು ಬೇರೆ ದೋಣಿ ಸಹಾಯದಿಂದ ದಡಕ್ಕೆ ಸೇರಿಸಲಾಗಿದೆ. ಇದೇ ಸಂದರ್ಭ ಓಷಿಯನ್ ಬ್ರೀಝ್ ಅನ್ನುವ ದೋಣಿಯೂ ಸಮುದ್ರದಿಂದ ಬಲೆ ತೆಗೆದು ವಾಪಸ್ಸಾಗುವ ಸಂದರ್ಭ ಅದರ ಮಾಲೀಕರು ಮೀನುಗಾರನೋರ್ವ ಸಮುದ್ರಕ್ಕೆ ಬಿದ್ದಿರುವುದರ ಮಾಹಿತಿಯನ್ನು ದೂರವಾಣಿ ಮೂಲಕ ನೀಡಿದ್ದರು. ಅದಕ್ಕಾಗಿ ಓಷಿಯನ್ ಬ್ರೀಝ್ ದೋಣಿಯವರು ಅರ್ಧ ಗಂಟೆಯ ಕಾಲ ಸಮುದ್ರದಲ್ಲೇ ಉಳಿದು ನವಾಝ್ ಗಾಗಿ ಹುಡುಕಾಡಿದ್ದಾರೆ. ಈ ವೇಳೆ ತಂಡಕ್ಕೆ ನವಾಝ್ ದೂರದಲ್ಲಿ ಥರ್ಮಕೋಲನ್ನು ಹಿಡಿದು ರಕ್ಷಣೆಗೆ ಮೊರೆ ಹೋಗುವುದನ್ನು ಕಂಡರು. ಆದರೆ ಭಾರೀ ಗಾಳಿಗೆ ನವಾಝ್ ಇದ್ದ ಕಡೆಗೆ ದೋಣಿ ತೆರಳಲು ಸಾಧ್ಯವಾಗಲಿಲ್ಲ. ಆದರೂ ಧೈರ್ಯ ಮಾಡಿ ನವಾಝ್ ಬಳಿಗೆ ತೆರಳಿದ ತಂಡ ರೋಪ್ ಎಸೆದು ನವಾಝ್ ನನ್ನು ದೋಣಿಯೊಳಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.