ಉಳ್ಳಾಲ, ಆ.28 (DaijiworldNews/HR): ಡಬ್ಬದಲ್ಲಿ ಹಣವನ್ನು ಕೂಡಿಟ್ಟು , ಸಮಾಜಕ್ಕೆ ಸೌಹಾರ್ದದ ಸಂದೇಶ ಹಾಗೂ ಸಾಯುವ ಮುನ್ನ ಅನಿಸಿದ್ದನ್ನು ಸಾಧಿಸು ಅನ್ನುವ ಉದ್ದೇಶವನ್ನು ಮುಂದಿಟ್ಟು ಕೇರಳದ ಹವ್ಯಾಸಿ ಬೈಕ್ ರೈಡರ್ಗಳ ಒಂಭತ್ತು ಮಂದಿಯ ತಂಡ ಕಲ್ಲಿಕೋಟೆಯಿಂದ - ನೇಪಾಳ ಪ್ರವಾಸವನ್ನು ಆರಂಭಿಸಿದೆ. ಆ.27 ರಂದು ಪ್ರವಾಸವನ್ನು ಆರಂಭಿಸಿದ ತಂಡ ಇಂದು ದೇರಳಕಟ್ಟೆಯನ್ನು ತಲುಪಿದೆ.
ಕೋಝಿಕ್ಕೋಡ್, ಮಲಪ್ಪುರಂ, ತಿರುವನಂತಪುರಂ ನಿವಾಸಿಗಳಾದ ಸಂಶುದ್ದೀನ್, ಬಾಷಿತ್, ಪ್ರಷೀಬ್, ಸಾಹಿರ್ ಬಾಬು, ಮುನವ್ವಿರ್, ಶಫೀಖ್, ಸುಹೈಬ್ ಅಖ್ತರ್, ಜ್ಯಾಕ್ಸನ್ ಥಾಮಸ್, ಫೈಝಲ್ ದೇರಳಕಟ್ಟೆ ಎಂಬವರ ತಂಡ ಪ್ರಯಾಣ ಆರಂಭಿಸಿದೆ.
ಕಾಲೇಜು ಜೀವನದಲ್ಲಿ ಇತರರು ಬೈಕಿನಲ್ಲಿ ಪ್ರಯಾಣಿಸುವುದನ್ನು ಕಂಡು ಪ್ರೇರಣೆಗೊಂಡು ತಾವು ಕೂಡಾ ಬೈಕ್ ಮೂಲಕ ದೇಶ ಸುತ್ತಬೇಕೆಂಬ ಕನಸನ್ನು ಸಾಕಾರಗೊಳಿಸಲು ಪ್ರಯಾಣ ಆರಂಭಿಸಿದ್ದಾರೆ.
ಕೊರೊನಾ ನಿರ್ಭಂಧನೆಗಳು ಇರುವುದರಿಂದ 73ಗಂಟೆಗಳ ಆರ್ ಟಿಪಿಸಿಆರ್ ವರದಿ ಹಾಗೂ ಎರಡು ವ್ಯಾಕ್ಸಿನ್ ಪಡೆದುಕೊಂಡೇ ಯುವಕರ ತಂಡ ಕಾಶ್ಮೀರ ಹೊರಟಿದೆ.
ಇನ್ನು ಹಿಂದಿನಿಂದಲೂ ಯೋಜನೆ ರೂಪಿಸಿದ್ದ ತಂಡದ ಸದಸ್ಯರಲ್ಲಿ ಹಲವರು ಪ್ರವಾಸಕ್ಕೆ ರೂ.1 ಲಕ್ಷದಷ್ಟು ವೆಚ್ಛ ಸಾಧ್ಯತೆ ಇರುವುದರಿಂದ ಹಣವನ್ನು ಕೂಡಿಟ್ಟಿದ್ದರು. ಅದನ್ನು ಬಳಸಿಕೊಂಡು ಪ್ರಯಾಣ ಮುಂದುವರಿಸಿರುವರು. ಸುರಕ್ಷತಾ ಕ್ರಮಕ್ಕಾಗಿ ವೈದ್ಯಕೀಯ ಕಿಟ್, ಉಳಿದುಕೊಳ್ಳಲು ಟೆಂಟ್ ವ್ಯವಸ್ಥೆ, ಬಟ್ಟೆ ಹಾಗೂ ಬೈಕ್ ಟೂಲ್ಸ್ ಗಳನ್ನು ಜತೆಯಲ್ಲಿಟ್ಟುಕೊಂಡಿದೆ.
ದಿನವೊಂದಕ್ಕೆ 300ಕಿಮೀ ಸಾಗಬೇಕು, ಉಳಿದುಕೊಳ್ಳುವ ಹಾಗೂ ದಾರಿಯ ಕುರಿತು ಈಗಾಗಲೇ ಹೋಗಿ ಬಂದವರ ಜತೆಗೆ ಅನುಭವವನ್ನು ಹಂಚಿಕೊಂಡಿದ್ದೇವೆ. ದಾರಿಯುದ್ದಕ್ಕೂ ಆಗುವ ಅನುಭವಗಳನ್ನು ಗೋಪ್ರೋ ಕ್ಯಾಮರಾ ಮೂಲಕ ಸೆರೆಹಿಡಿದು, ತಮ್ಮ ಯುಟ್ಯೂಬ್ ಛಾನೆಲ್ ನಲ್ಲಿ ಪ್ರಸಾರ ಮಾಡಲಿದ್ದಾರೆ. ಎಫ್-ಝೀ, ಜಾವಾ, ಸುಝುಕಿ, ಪಲ್ಸಾರ್, ರಾಯಲ್ ಎನ್ಫೀಲ್ಡ್ ಬೈಕುಗಳಲ್ಲಿ ಪ್ರವಾಸ ಕೈಗೊಂಡಿರುವ ತಂಡದಲ್ಲಿ ಅಧ್ಯಾಪಕ, ಬ್ಯಾಂಕ್ ಸಿಬ್ಬಂದಿ, ವಿದ್ಯಾರ್ಥಿ, ಪೈಟಿಂಗ್ ಗುತ್ತಿಗೆದಾರ, ಇಬ್ಬರು ವ್ಯಾಪರಸ್ಥರು ಇದ್ದಾರೆ.