ಮಂಗಳೂರು ಆ 28 (DaijiworldNews/MS): ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಅನುಷ್ಟಾನಗೊಳ್ಳುತ್ತಿರುವ ಕಾಮಗಾರಿಗಳನ್ನು ಸಹಾಯಕ ಆಯುಕ್ತರು ಪ್ರತಿ ವಾರ ಪ್ರಗತಿ ಪರಿಶೀಲನೆ ನಡೆಸಿ ಕಾಮಗಾರಿಗಳಿಗೆ ಚುರುಕು ಮುಟ್ಟಿಸಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿರ್ದೇಶನ ನೀಡಿದರು.
ಅವರು ನಗರದ ಸಕ್ರ್ಯೂಟ್ ಹೌಸ್ನಲ್ಲಿ ಆಗಸ್ಟ್ 27ರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ ಮಂಜೂರಾತಿ ಹಾಗೂ ಅವುಗಳ ಪ್ರಗತಿ ಪರಿಶೀಲನೆ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ಶಾಸಕರಿಗೆ ಅವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ದಿಗಾಗಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲು 2 ಕೋಟಿ ರೂ.ಗಳ ಅನುದಾನ ನೀಡಲಾಗುತ್ತಿದೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅತಿಯಾದ ಕಾರ್ಯಬಾಹುಳ್ಯದ ಕಾರಣ ಈ ಕಾಮಗಾರಿಗಳ ಮೇಲ್ವಿಚಾರಣೆಯನ್ನು ಕಳೆದ ವರ್ಷದಿಂದ ಸಹಾಯಕ ಆಯುಕ್ತರಿಗೆ ವಹಿಸಲಾಯಿತು. ಆದಾಗ್ಯೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗುತ್ತಿಲ್ಲ. ಹಾಗಾಗಿ ತಳಮಟ್ಟದಿಂದ ಸಮಸ್ಯೆಗಳನ್ನು ಅರಿತು ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಕಾಮಗಾರಿಗಳು ವಿಳಂಬವಾಗಬಾರದು. ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿಗಳ ಅನುಷ್ಠಾನ ಗಂಭೀರ ವಿಷಯವಾಗಿದ್ದು, ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮವಹಿಸಬೇಕು ಎಂದರು.
ಒಂದೇ ಏಜೆನ್ಸಿಯ ಬದಲು ಹಲವು ಏಜನ್ಸಿಗಳ ಮೂಲಕ ನಿರ್ವಹಿಸುವುದು ಉತ್ತಮ, ಕಾಮಗಾರಿ ಪೂರ್ಣಗೊಂಡ ನಂತರ ಮೂರನೇ ವ್ಯಕ್ತಿ ತಪಾಸಣೆ ಅತೀ ಶೀಘ್ರವಾಗಿ ಆಗಬೇಕು. ನಿರ್ವಹಿಸಲಾದ ಕಾಮಗಾರಿಗಳು, ಅದಕ್ಕೆ ಬಿಡುಗಡೆಯಾದ ವೆಚ್ಚ, ಭರಿಸಲಾದ ಮೊತ್ತದ ವಿವರವನ್ನು ಕಾಲಕಾಲಕ್ಕೆ ಸಾಪ್ಟ್ವೇರ್ನಲ್ಲಿ ಅಪ್ಡೇಟ್ ಮಾಡಬೇಕು. ನಿರ್ವಹಿಸುವ ಏಜೆನ್ಸಿಗಳು ಚಟುವಟಿಕೆಗಳಿಂದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಮೂಲಕ ನಿರ್ವಹಿಸಲಾಗುತ್ತಿರುವ ಕಾಮಗಾರಿಗಳಲ್ಲಿ ಅಲ್ಲಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳು ವಹಿಸುತ್ತಿರುವ ಕ್ರಮಗಳನ್ನು ಸಹಾಯಕ ಆಯುಕ್ತರು ನೇರವಾಗಿಯೇ ಮೇಲ್ವಿಚಾರಣೆ ಮಾಡಬಹುದಾಗಿದೆ, ಕಾಮಗಾರಿಗಳನ್ನು ಎಂಟ್ರಿ ಮಾಡುವ ಸಾಪ್ಟ್ವೇರ್ನಲ್ಲಿ ಸಮಸ್ಯೆ ಎದುರಾದಲ್ಲಿ ಕೂಡಲೇ ಗಮನಕ್ಕೆ ತರಬೇಕು, ಸಹಾಯಕ ಆಯುಕ್ತರುಗಳು ಉತ್ಸಾಹದಿಂದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಂದಾಗಬೇಕು ಎಂದು ತಿಳಿಸಿದರು.
ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿ ಅಗತ್ಯ ಕಾಮಗಾರಿಗಳನ್ನು ನಿರ್ವಹಿಸಲು ಎಲ್ಲಾ ಶಾಸಕರು ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ಜವಬ್ದಾರರಾಗಿರುತ್ತಾರೆ, ರಾಜ್ಯದಲ್ಲಿ ಅಂದಾಜು ಒಂದು ಸಾವಿರ ಕೋಟಿ ರೂ.ಗಳು ಈ ರೀತಿಯ ಕಾಮಗಾರಿಗಳಿಂದಾಗಿ ಬಾಕಿ ಉಳಿದಿದ್ದು, ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಸೇರಿದ ವಿವಿಧ ಪಿಡಿ ಖಾತೆಗಳಲ್ಲಿವೆ ಎಂದು ಹೇಳಿದರು.
ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು ಸೂಚನೆ:
ಮುಂಬರುವ ಸೆಪ್ಟೆಂಬರ್ 13 ರಿಂದ 24 ರವರೆಗೆ ರಾಜ್ಯ ವಿಧಾನ ಸಭಾ ಅಧಿವೇಶನ ನಡೆಸಲು ಆದೇಶ ಹೊರಡಿಸಲಾಗಿದೆ. 6 ತಿಂಗಳ ನಂತರ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದ 10 ದಿನಗಳ ಕಾಲ ಯಶಸ್ವಿಯಾಗಿ ನಿರ್ವಹಿಸುವ ಉದ್ದೇಶವಿದೆ. ಈ ಅಧಿವೇಶನದಲ್ಲಿ ಎಲ್ಲಾ ಸಚಿವರು ಹಾಗೂ ಶಾಸಕರುಗಳು ಕಡ್ಡಾಯವಾಗಿ ಹಾಜರಿರಬೇಕು. ಯಾರೂ ಕೂಡ ಈ ಅವಧಿಯಲ್ಲಿ ರಜೆ ಕೇಳಬಾರದು. ಎಲ್ಲರೂ ಪೂರ್ಣಪ್ರಮಾಣದಲ್ಲಿ ಭಾಗವಹಿಸಬೇಕು. ಇದನ್ನು ಈಗಾಗಲೇ ಪತ್ರ ಮುಖೇನವೂ ಸಂಬಂಧಿಸಿದವರಿಗೆಲ್ಲಾ ತಿಳಿಸಿಲಾಗಿದೆ. ಅದರಂತೆ ಅಧಿಕಾರಿ ವರ್ಗದವರು ಕಡ್ಡಾಯವಾಗಿ ಹಾಜರಿರಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.
ಅವರು ನಗರದ ಸಕ್ರ್ಯೂಟ್ ಹೌಸ್ನಲ್ಲಿ ಆಗಸ್ಟ್ 27ರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ ಮಂಜೂರಾತಿ ಹಾಗೂ ಅವುಗಳ ಪ್ರಗತಿ ಪರಿಶೀಲನೆ ಕುರಿತ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ, ಸಹಾಯಕ ಆಯುಕ್ತರಾದ ಮದನ್ ಮೋಹನ್, ಡಿಯುಡಿಸಿ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಲೋಕೋಪಯೋಗಿ, ಪಂಚಾಯತ್ ರಾಜ್ ಹಾಗೂ ಎಂಜಿನಿಯರಿಂಗ್ ವಿಭಾಗ, ನಿರ್ಮಿತಿ ಕೇಂದ್ರ, ಮೂಡಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.