ವಿಟ್ಲ, ಆ. 27 (DaijiworldNews/SM): ಕಾನೂನು ಬಾಹಿರವಾಗಿ ಹಸುಗೂಸುನ್ನು ಮನೆಯಲ್ಲಿರಿಸಿ ಸಲಹಲು ಮುಂದಾದ ವೇಳೆ ಖಚಿತ ಮಾಹಿತಿ ಮೇಲೆ ಇಲಾಖೆ ದಾಳಿ ನಡೆಸಿ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಹಸ್ತಾಂತರ ಮಾಡಿದ ಘಟನೆ ಇಡ್ಕಿದು ಗ್ರಾ.ಪಂ.ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಇಡ್ಕಿದು ಗ್ರಾ.ಪಂ.ವ್ಯಾಪ್ತಿ ನಿವಾಸಿ ಆಶಾ ಕಾರ್ಯಕರ್ತೆಯೊರ್ವರು ಕಾನೂನು ಬಾಹಿರವಾಗಿ ಏಳು ದಿನದ ಹಸುಗೂಸುವನ್ನು ಸಾಕುವ ಉದ್ದೇಶದಿಂದ ಪುತ್ತೂರಿನಿಂದ ತಂದು ಮನೆಯಲ್ಲಿರಿಸಿದ್ದರು. ಮದುವೆಯಾಗಿ ಹತ್ತು ವರ್ಷವಾದರೂ ಅಶಾಕಾರ್ಯಕರ್ತೆ ಗೆ ಮಕ್ಕಳಾಗಿಲ್ಲ ಎಂಬ ಚಿಂತೆಯಲ್ಲಿದ್ದರು. ಪುತ್ತೂರಿನಲ್ಲಿ ಹುಟ್ಟಿದ ಮಗುವನ್ನು ನಿಯಮಬಾಹಿರವಾಗಿ ಸಾಕುವ ಉದ್ದೇಶದಿಂದ ಮನೆಗೆ ತಂದಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳಿಗೆ ಬಂದ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಮಗುವನ್ನು ರಕ್ಷಿಸಿ ಮಕ್ಕಳ ಪಾಲನ ಸಂಸ್ಥೆಗೆ ಹಸ್ತಾಂತರ ಮಾಡಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದ ಆಶಾ ಕಾರ್ಯಕರ್ತೆ ಕಾವಲು ಸಮಿತಿ ಸದಸ್ಯರು ಹೌದು, ಗ್ರಾಮ ನೈರ್ಮಲ್ಯ ಸಮಿತಿ ಸದಸ್ಯರು ಕೂಡ ಆದರೂ ನಿಯಮ ಮೀರಿ ಮಗುವನ್ನು ಸಾಕುವ ಉದ್ದೇಶದಿಂದ ತಂದಿರುವುದರ ವಿರುದ್ದ ಪ್ರಕರಣ ದಾಖಲಾಗಿದೆ. ಮಗು ದತ್ತು ಪಡೆಯಲು ಸರಕಾರದ ನಿಯಮಗಳು ಇವೆ. ಆಶಾ ಕಾರ್ಯಕರ್ತೆಯರ ಸಹಿತ ಸಮಿತಿಯ ಸದಸ್ಯರುಗಳಿಗೆ ಸರಿಯಾದ ಮಾಹಿತಿ ಇದೆ. ಆದರೂ ಮಗುವನ್ನು ತಂದಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.