ಮಂಗಳೂರು, ಆ 27 (DaijiworldNews/MS): ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ್ದು ಇವರ ನೇತೃತ್ವದಲ್ಲಿ ಚುನಾವಣೆ ಎದುರಿಸುವ ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೇ ಇವರ ನಾಯಕತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಎದುರಿಸಿದ್ದು ಚುನಾವಣೆ, ಉಪಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ನಳಿನ್ ಅವರ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಮಾಡುವಲ್ಲಿ ಯಶಸ್ವಿಯಾಗಿದೆ.
ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ನಿರಂತರವಾಗಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷ ಸಂಘಟನೆ, ಹಾಗೂ ತಳಮಟ್ಟದಿಂದಲೇ ಕಾರ್ಯಕರ್ತರನ್ನು ಸಂಘಟಿಸಿ ಉತ್ಸಾಹ ಮೂಡಿಸಿದ ಕೆಲಸ ಮಾಡಿ ಅವಿರತವಾಗಿ ಶ್ರಮಿಸಿದ ಜನಸ್ನೇಹಿ ಅಧ್ಯಕ್ಷ ಎಂಬ ಹೆಸರುಗಳಿಸಿದರು.
ವಿವಾದವಿಲ್ಲದ ನಾಯಕ, ಸರ್ಕಾರದ - ಪಕ್ಷದ ಸಮನ್ವಕಾರ, ಜನಸ್ನೇಹಿ ಕೆಲಸಗಾರ
ಯಡಿಯೂರಪ್ಪ ಸಿಎಂ ಆದ ನಂತರ ಬಿಜೆಪಿ ರಾಜ್ಯಧ್ಯಕ್ಷ ಸ್ಥಾನ ನಳಿನ್ ಅವರಿಗೆ ಒಲಿದು ಬಂದಾಗ ಅವರ ಸಂಘಟನಾ ಸಾಮರ್ಥ್ಯದ ಬಗ್ಗೆ ಸಂಶಯಪಟ್ಟವರೇ ಹೆಚ್ಚು. ಆದರೇ ಅದ್ಯಾವುದರ ಬಗ್ಗೆ ಚಿಂತಿಸದೇ , ಯಾರೊಂದಿಗೂ ಸಂಘರ್ಷಕ್ಕೆ ಇಳಿಯದೇ ಸಾಮಾನ್ಯರಲ್ಲಿ ಸಾಮಾನ್ಯರಾಗಿ ತಳಮಟ್ಟದಿಂದಲೇ ಪಕ್ಷ ಸಂಘಟನೆಗೆ ಒತ್ತು ನೀಡಿ ಕಾರ್ಯಪ್ರವೃತ್ತರಾದರು.
ನಳಿನ್ ಅಧ್ಯಕ್ಷರಾದ ಸಂದರ್ಭದಲ್ಲಿ ಬಿಜೆಪಿಯಲ್ಲಿ ವಲಸಿಗರು ಮತ್ತು ಮೂಲ ಕಾರ್ಯಕರ್ತರು ಎಂಬ ಮಾತು ಕೇಳಿಬರುತ್ತಿತ್ತು. ಆದರೆ ನಳಿನ್ ಎಲ್ಲರನ್ನೂ ಸಮಾನ್ವಾಗಿ ಪರಿಗಣಿಸಿ ವಲಸಿಗರಿಗೆ ತಾವು ಹೊರಗಿ ನವರು ಎನ್ನುವ ಭಾವ ಮೂಡ ದಂತೆ ನಿರ್ವಹಿಸಿರುವುದು ಪಕ್ಷ ಒಗ್ಗಟ್ಟಾಗಿರಲು ಕಾರಣವಾಗಿದೆ. ಸರ್ಕಾರದ ಮತ್ತು ಪಕ್ಷದ ನಡುವೆ ನಿರಂತರ ಸಮನ್ವಯತೆ ಕಾಪಾಡಿಕೊಂಡು ಪಕ್ಷದ ತತ್ವ ಮತ್ತು ಸಿದ್ದಾಂತ ಸಿದ್ದಾಂತಕ್ಕೆ ಧಕ್ಕೆಯಾಗದಂತಹ ಸಲಹೆ ಪಕ್ಷವನ್ನು ಬಲಪಡಿಸಲು ಕಾರಣವಾಯಿತು. ಅವರ ಸರಳ ಮತ್ತು ಸೂಕ್ಷ್ಮ ನಡೆಯೂ ಪಕ್ಷದ ವರ್ಚಸ್ಸು ವೃದ್ಧಿಗೆ ಕಾರಣ ಎಂಬ ಅಭಿಪ್ರಾಯ ಕಾರ್ಯಕರ್ತರ ವಲಯದಲ್ಲಿದೆ.
ಹಿಂಬಾಲಕರಿಗಿಂತ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಮುನ್ನಲೆಗೆ ತಂದರು.!
ಕಾರ್ಯಕರ್ತರ ಬಲವೇ ಪಕ್ಷದ ಶಕ್ತಿ . ಹೀಗಾಗಿ ಸಂಘಟನೆಯ ಮೂಲಕ ಪಕ್ಷವನ್ನು ಮತ್ತಷ್ಟು ಸಧೃಢ ಗೊಳಿಸುವ ಉದ್ದೇಶದಿಂದ ಹುದ್ದೆಯ ವಹಿಸಿಕೊಂಡ ನಂತರ ರಾಜ್ಯವನ್ನು ೧೮ ಬಾರಿ ಸುತ್ತಿದವರು ಕ್ಯಾಪ್ಟನ್ ಕಟೀಲ್... ಕೊರೊನಾ ಮಹಾಮಾರಿ ದೇಶದಲ್ಲಿ ಸಂಕಷ್ಟದ ಪರಿಸ್ಥಿತಿ ತಂದೊಡ್ಡಿರುವಾಗಲೂ ಕೋವಿಡ್ ಸೇವಾ ಕಾರ್ಯ, ಆರೋಗ್ಯ ಸ್ವಯಂ ಸೇವಕರ ಅಭಿಯಾನದ ಮೂಲಕ ಸೇವಾಕಾರ್ಯಕರ್ತರ ಹುಟ್ಟು ಹಾಕಿದ್ದು ಇವರ ನಾಯಕತ್ವಕ್ಕೆ ಹಿಡಿದ ಕೈಕನ್ನಡಿ.
ಜಿಲ್ಲಾ ಮಟ್ಟದ ನಿರಂತರ ಕಾರ್ಯಕಾರಿಣಿ, 290 ಮಂಡಲ ಮಟ್ಟದ ಕಾರ್ಯಕಾರಿಣಿ ಮತ್ತು 3 ತಿಂಗಳು ಗಳಿಗೊಮ್ಮೆ ರಾಜ್ಯ ಮಟ್ಟದ ಕಾರ್ಯ ಕಾರಿಣಿಗಳನ್ನು ನಿರಂತರವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಿದ್ದು, ಮತ್ತೊಂದು ಗಮನಾರ್ಹ ಸಾಧನೆಯಾಗಿದೆ.
ಪಕ್ಷಕಾಗಿ ದುಡಿದ ಎಲೆಮರೆಯ ಕಾಯಿಯಂತಿದ್ದ ಕಾರ್ಯಕರ್ತರನ್ನು ಮುನ್ನಲೆಗೆ ತಂದು ಜನಪ್ರತಿನಿಧಿಗಳಾಗಿ ರೂಪುಗೊಳಿಸುವಲ್ಲಿ ಹಿನ್ನಲೆಯಲ್ಲಿ ನಿಂತು ಕೆಲಸ ಮಾಡಿದವರು ನಳಿನ್. ಬುಡಕಟ್ಟು ಸಮುದಾಯದ ಶಾಂತಾರಾಮ ಸಿದ್ದು , ಕೋಳಿ ಸಮುದಾಯದ ಸಾಯಬಣ್ಣ ತಳವಾರ ಅವರನ್ನು ವಿಧಾನಪರಿಷತ್ತಿಗೆ ಸದಸ್ಯರನ್ನಾಗಿ ನೇಮಿಸಿದ್ದು ರಾಜ್ಯಸಭೆಗೆ ಈರಣ್ಣ ಕಡಾಡಿ, ಮತ್ತು ರಾಯಚೂರಿನ ದಿ. ಆಶೋಕ ಗಸ್ತಿ ಅವರ ಹೆಸರನ್ನು ಶಿಫಾರಸ್ಸು ಸೇರಿದಂತೆ ಪ್ರಜಾಪ್ರಭುತ್ವದ ಸೊಬಗು ರಾಜಕೀಯ ನಡೆ ಕಾರ್ಯಕರ್ತರಿಗೆ ಖುಷಿ ನೀಡಿದೆ.
ಚುಣಾವನೆಯಲ್ಲಿ ಗೆಲುವು ತಂದುಕೊಟ್ಟ ತಂತ್ರಗಾರ:
ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆ, ಉಪಚುನಾವಣೆಗಳಲ್ಲಿ ಪಕ್ಷವು 'ಅಭೂತಪೂರ್ವ' ಗೆಲುವು ಸಾಧಿಸಿದೆ.
ಸಮ್ಮಿಶ್ರ ಸರ್ಕಾರ ಪತನದ ಬಳಿಕ ನಡೆದ ಉಪಚುನಾವಣೆಯಲ್ಲಿ 15 ವಿಧಾನಸಭಾ ಕ್ಷೇತ್ರದ ಪೈಕಿ 12ರಲ್ಲಿ ಬಿಜೆಪಿ ಜಯಭೇರಿ, ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಜಯಗಳಿಸಿತು. ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿಯೂ ಬಿಜೆಪಿ ತನ್ನದೇ ಆದ ಛಾಪು ಮೂಡಿಸುವಲ್ಲಿ ಬಹಳಷ್ಟು ಸ್ಥಾನಗಳನ್ನು ಬಿಜೆಪಿ ಗೆಲ್ಲುವುದರಲ್ಲಿ ಕಟೀಲ್ ಪಾತ್ರ ಮಹತ್ವದಾಗಿದೆ.
ಗ್ರಾ.ಪಂ. ಚುನಾವಣೆಗಳಲ್ಲಿ ಜಯ ಗಳಿಸಿದ ಕಾರ್ಯಕರ್ತರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡಿದ್ದು, ವಿಧಾನಸಭಾ ಕ್ಷೇತ್ರವಾರು ಗ್ರಾ.ಪಂ. ಸದಸ್ಯರ ಸಮಾವೇಶ ನಡೆಸಿ, ಅವರಲ್ಲಿ ಉತ್ಸಾಹ ತುಂಬಲಾಗಿತ್ತು. ಒಟ್ಟಾರೆ ನಳಿನ್ ಅವರ ರಾಜ್ಯಾದ್ಯಂತ ಪಕ್ಷ ಬಲವರ್ಧನೆಗೆ ಸಹಾಯಕವಾಗಿದೆ ಇನ್ನು ರಾಜ್ಯದಲ್ಲಿ ಮಾತ್ರವಲ್ಲದೇ ತಮಿಳುನಾಡು, ಕೇರಳ ಸೇರಿದಂತೆ ರಾಜ್ಯದ ಬೇರೆ ಬೇರೆ ಚುನಾವಣೆಗಳಲ್ಲಿ ಉಸ್ತುವಾರಿ ವಹಿಸಿ ಅಲ್ಲಿಯೂ ಪಕ್ಷದ ಗೆಲುವಿಗಾಗಿ ದುಡಿದಿದ್ದಾರೆ.