ಕಾರ್ಕಳ, ಆ 27 (DaijiworldNews/MS): ಸಚಿವನಾಗಿದ್ದರೂ ಯಾವುದೇ ಹಿಂಜರಿಕೆ ಇಲ್ಲದೆ ಈ ಹಿಂದಿನಂತೆಯೇ ತಮ್ಮ ಸಮಸ್ಯೆಗಳನ್ನು ನೇರವಾಗಿ ನನ್ನನ್ನು ಸಂಪರ್ಕಿಸಿ ಹೇಳಿಕೊಳ್ಳಬಹುದು. ಜನರ ಸಮಸ್ಯೆ ಬಗೆಹರಿಸಲು ತನ್ನ ಕಚೇರಿಯು ಸದಾ ಮುಕ್ತವಾಗಿ ತೆರೆದಿರುತ್ತದೆ ಎಂದು ಇಂಧನ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಹಿರ್ಗಾನ ಸಹಕಾರಿ ಸೌಧದ ಸಭಾಂಗಣದಲ್ಲಿ ಆಯೋಜಿಸಿದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನಸ್ಪಂದನ ಕಾರ್ಯಕ್ರಮವು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಂಡಾಗ ನಾಗರಿಕ ಅಹವಾಲಿನೊಂದಿಗೆ ದೂರು-ದುಮ್ಮಾನಗಳಲ್ಲಿ ಆಲಿಸಿ ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಂದ ಸಮಸ್ಸೆಗೆ ಪರಿಹಾರ ಕಂಡು ಕೊಳ್ಳಲು ಸಹಕಾರಿಯಾಗುತ್ತದೆ. ಕಚೇರಿ ಕಚೇರಿ ಅಲೆದಾಟಕ್ಕೆ ಕಡಿವಾಣ ಬೀಳುತ್ತದೆ. ಆ ಮೂಲಕ ನೆನೆಗುದ್ದಿಗೆ ಬಿದ್ದ ಸಮಸ್ಸೆಗಳಿಗೆ ಶೀಘ್ರು ಪರಿಹಾರ ದೊರಕುತ್ತದೆ ಎಂಬ ವಿಶ್ವಾಸ ವನ್ನು ಸಚಿವ ವಿ.ಸುನೀಲ್ ಕುಮಾರ್ ವ್ಯಕ್ತಪಡಿಸಿದರು.
ಹಿರ್ಗಾನ ಗ್ರಾಮ ಪಂಚಾಯತಿನ ವತಿಯಿಂದ ಸಚಿವ ವಿ.ಸುನೀಲ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರ್ಗಾನ ಗ್ರಾಮ ಪಂಚಾಯತಿನ ಅಧ್ಯಕ್ಷ ಸಂತೊಷ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಭವ್ಯ ಮಡಿವಾಳ, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಜಿಲ್ಲಾ ಪಂಚಾಯತಿನ ನಿಕಟಪೂರ್ವ ಉದಯ ಎಸ್ ಕೋಟ್ಯಾನ್, ತಾಲೂಕು ಪಂಚಾಯತಿನ ಕಾರ್ಯನಿರ್ವಹಣಾಧಿಕಾರಿ ಗುರುದತ್ , ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಉಪಸ್ಥಿತರಿದ್ದರು.