ಪುತ್ತೂರು, ಆ 27 (DaijiworldNews/PY): ಚಿನ್ನಾಭರಣಕ್ಕೆ ಹೊಳಪು ನೀಡುವುದಾಗಿ ಹೇಳಿ 2 ಪವನ್ನ ಚಿನ್ನಾಭರಣವನ್ನು ಕಳೆದುಕೊಂಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಸದಸ್ಯೆಯಾಗಿರುವ ಪೆರ್ನಾಜೆ ನಿವಾಸಿ ಇಂದಿರಾ ಅವರು ವಂಚನೆ ಒಳಗಾದವರು.
ಚಿನ್ನಾಭರಣವನ್ನು ಹೊಳೆಯುವಂತೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ಪಡೆದುಕೊಂಡ ಆರೋಪಿ ಮಾಂಗಲ್ಯ ಸರ ಸೇರಿದಂತೆ ಸುಮಾರು ಐದೂವರೆ ಪವನ್ ಚಿನ್ನಾಭರಣವನ್ನು ಅನುಮಾನ ಬಾರದಂತೆ ಆಕೆಯ ಕಣ್ಣೆದುರೇ ವಂಚಿಸಿ ಪರಾರಿಯಾಗಿದ್ದಾನೆ.
ಬೆಳ್ಳಿ, ಬಂಗಾರದ ಆಭರಣಗಳು ಸೇರಿದಂತೆ ಮನೆಯ ಶೋಕೇಸ್, ಟಿವಿ ಹಾಗೂ ಹಲವು ವಸ್ತುಗಳನ್ನು ಸ್ವಚ್ಛಗೊಳಿಸಿ ಹೊಳಪು ನೀಡುವ ಪೌಡರ್ ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಂಡು ಇಂದಿರಾ ಅವರ ಮನೆಗೆ ಬಂದ ಅಪರಿಚಿತ ವ್ಯಕ್ತಿ, ಬೆಳ್ಳಿ, ಬಂಗಾರದ ಆಭರಣಗಳನ್ನು ಈಗಲೇ ಪಾಲಿಶ್ ಮಾಡಿಕೊಡುವ ಮೂಲಕ ಮಾದರಿ ತೋರಿಸುವುದಾಗಿ ಹೇಳಿದ್ದ. ಆತನ ಮಾತನ್ನು ನಂಬಿದ ಇಂದಿರಾ ಅವರು ತಮ್ಮ ಬಳಿ ಇದ್ದ ಕಾಲಿನ ಗೆಜ್ಜೆ ತೆಗೆದುಕೊಟ್ಟಿದ್ದರು. ಅದನ್ನು ಆ ವ್ಯಕ್ತಿ ಹಳದಿ ಪೌಡರ್ ಬಳಸಿ ಫಳಫಳ ಹೊಳೆಯುವಂತೆ ಮಾಡಿಕೊಟ್ಟಿದ್ದ. ನಂತರ ಚಿನ್ನಾಭರಣ ಇದ್ದರೆ ಅವುಗಳನ್ನು ಹೊಳೆಯುಂತೆ ಮಾಡಿಕೊಡುತ್ತೇನೆ ಎಂದು ವಂಚಕ ನಂಬಿಸಿದ್ದ. ಆತನ ಮಾತನ್ನು ನಂಬಿದ ಇಂದಿರಾ ತಮ್ಮ ಮಾಂಗಲ್ಯ ಸರ ಸೇರಿದಂತೆ ಚೈನು, ಎರಡು ಬಳೆಗಳನ್ನು ನೀಡಿದ್ದಾರೆ.
ಆಭರಣಗಳನ್ನು ತೆಗೆದುಕೊಂಡ ವ್ಯಕ್ತಿ ಅದರ ಮೇಲೆ ಹಳದಿ ಪೌಡರ್ ಸುರಿದು, ಲಿಕ್ವಿಡ್ ಹಾಗು ಜೆಲ್ ಹಾಕಿ ಬ್ರಷ್ ಬಳಸಿ ತೊಳೆಯುವಂತೆ ನಟಿಸಿ ನಂತರ ಬ್ಯಾಟರಿ ಚಾಲಿತ ಬೆಂಕಿ ನೀರಿನಲ್ಲಿ ಕುದಿಸಿದ್ದಾನೆ. ಬಳಿಕ ನೀರಿನಿಂದ ತೊಳೆದು ಅದಕ್ಕೆ ಅರಶಿನ ಪುಡಿ ಹಾಕಿ, ಪೇಪರ್ನಲ್ಲಿ ಪೊಟ್ಟಣ ಕಟ್ಟಿ, ಅರ್ಧ ಗಂಟೆಯ ಬಳಿಕ ಪೊಟ್ಟಣ ತೆರೆಯುವಂತೆ ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.
ವ್ಯಕ್ತಿಯ ವರ್ತನೆ ಬಗ್ಗೆ ಅನುಮಾನಪಟ್ಟ ಇಂದಿರಾ 5 ನಿಮಿಷದಲ್ಲಿ ಪೊಟ್ಟಣ ತೆರೆದು ನೋಡಿದ ವೇಳೆ ಮಾಂಗಲ್ಯ ಸರ ಸೇರಿದಂತೆ ಚಿನ್ನಾಭರಣಗಳು ತುಂಡು ತುಂಡಾಗಿರುವುದು ಕಂಡು ಬಂದಿದೆ. ವಂಚಕ ಚಿನ್ನದ ಅಂಶವನ್ನು ದ್ರವ ಮಾದರಿಯಲ್ಲಿ ಸಂಗ್ರಹಿಸಿ ಪಡೆದು ಕಾಲ್ಕಿತ್ತಿದ್ದಾನೆ.
ಘಟನೆಯ ಬಗ್ಗೆ ಇಂದಿರಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಅಟೋ ರಿಕ್ಷಾದಲ್ಲಿ ಬಂದಿದ್ದ ವಂಚಕ ಇಂದಿರಾ ಅವರ ಸಮೀಪದ ಮನೆಯಲ್ಲಿಯೂ ಇದೇ ರೀತಿ ವಂಚನೆ ಮಾಡಲು ಯತ್ನಿಸಿದ್ದ. ಆದರೆ, ಆ ಮನೆಯಲ್ಲಿ ಅವರು ನಮಗೆ ಯಾವುದೂ ಬೇಡ ಎಂದಿದ್ದರಿಂದ ವಂಚಕ ಇಂದಿರಾ ಅವರ ಮನೆಗೆ ಬಂದಿದ್ದ.