ಉಡುಪಿ, ಆ 26 (DaijiworldNews/PY): ಸ್ಟೇಟ್ ಬ್ಯಾಂಕ್ನಿಂದ ಸುಮಾರು 5,00,000 ರೂ ಹಣ ವರ್ಗಾವಣೆ ವಂಚನೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, "ಪ್ರಕರಣ ದಾಖಲಾದ 16 ತಿಂಗಳ ಬಳಿಕ ಹೈಕೋರ್ಟ್ನಲ್ಲಿ ವಾದ ಪ್ರತಿವಾದ ನಡೆದು ಕೊನೆಗೂ ಕೇಸ್ನಲ್ಲಿ ಜಯ ಗಳಿಸಿ, ಸ್ಟೇಟ್ ಬ್ಯಾಂಕ್ನವರು ಸೇವಾ ನ್ಯೂನತೆ ಮತ್ತು ಅಮಾಯಕ ಬಳಕೆದಾರ ಕಳೆದುಕೊಂಡ 5 ಲಕ್ಷ ರೂ.ಗಳನ್ನು ಹಿಂದಿರುಗಿಸಬೇಕೆಂದು ಕೋರ್ಟ್ ತೀರ್ಪು ನೀಡಿದೆ. ಅದರೊಂದಿಗೆ 50 ಸಾವಿರ ರೂ. ಪರಿಹಾರ ಹಾಗೂ ಕೋರ್ಟ್ ವೆಚ್ಚಗಳಿಗಾಗಿ 10 ಸಾವಿರ ನೀಡುವಂತೆಯೂ ಆದೇಶಿಸಿದ್ದಾರೆ. ಆದರೆ, ಆದೇಶ ಬಂದು 40 ದಿನ ಕಳೆದರೂ ಇದುವರೆಗೆ ಯಾವುದೇ ಹಣ ಪಾವತಿಯಾಗಿಲ್ಲ" ಎಂದು ಎಸ್ಬಿಐ ಬಳಕೆದಾರ ಹರೀಶ್ ಆರೋಪಿಸಿದ್ದಾರೆ.
ವೈಕುಂಟ ಬಾಳಿಗ ಲಾ ಕಾಲೇಜಿನಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಉಪ್ಪೂರಿನ ಹರೀಶ್ ಗುಡಿಗಾರ್ ಹರೀಶ್, "ಬ್ಯಾಂಕ್ನ ಈ ರೀತಿಯ ಪ್ರತಿಕ್ರಿಯೆಯಿಂದ ಮಾನಸಿಕವಾಗಿ ನೊಂದಿದ್ದೇನೆ. ಇನ್ನು ನನ್ನ ಮಗಳಿಗೂ ಉನ್ನತ ಶಿಕ್ಷಣ, ಮನೆ ಕಟ್ಟು ಕನಸನ್ನು ಕಂಡಿದ್ದೇನೆ. ಈಗಾಗಲೇ ಕೊರೊನಾದಿಂದ ಆರ್ಥಿಕ ನಷ್ಟವಾಗಿದೆ. ಕೋರ್ಟ್ ಮೆಟ್ಟಿಲೇರಿದರೆ, ಇನ್ನಷ್ಟು ವಿಳಂಬವಾಗುತ್ತದೆ. ಸಂತೆಕಟ್ಟೆಯ ಬ್ಯಾಂಕ್ ಮ್ಯಾನೇಜರ್ ಸಿಗುವ ಭರವಸೆ ಕೊಟ್ಟರೂ ಆ ನಿಟ್ಟಿನಲ್ಲಿ ಸ್ಪಂದಿಸುತ್ತಿಲ್ಲ. ನಿನ್ನೆ ಬ್ಯಾಂಕ್ನ ಮೇಲೆ ವಕೀಲರ ಮುಖಾಂತರ ಕೇಸು ದಾಖಲಿಸಲಾಗಿದೆ. ಕಷ್ಟಪಟ್ಟು ದುಡಿದು ಉಳಿತಾಯ ಮಾಡಿದ ಹಣಕ್ಕೆ ಬ್ಯಾಂಕ್ ಸಿಬ್ಬಂದಿಗಳ ವಿಳಂಬ ಪ್ರತಿಕ್ರಿಯೆಗೆ ಹಣ ವಂಚಿತವಾಗಿದೆ. ಸದ್ಯ ನನಗೆ ಕೋರ್ಟ್ನ ಆದೇಶದಂತೆ ತೀರ್ಪು ಸಿಗಬೇಕಿದೆ. ನಿರೀಕ್ಷೆಯಲ್ಲಿದ್ದೇನೆ" ಎಂದರು.
ಇನ್ನು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷಡಾ. ರವೀಂದ್ರ ಶಾನುಭಾಗ್ ಮಾತನಾಡಿ, "ಹರೀಶ್ ಈಗಾಗಲೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಪ್ರತಿಷ್ಠಿತ ಬ್ಯಾಂಕ್ ಆ ಜವಾಬ್ಧಾರಿಯನ್ನು ಹೊತ್ತು ಒಟ್ಟು ಮೊತ್ತ 5,50,000(ಬಡ್ಡಿ ದರ ಸೇರಿ) ಕೊಡಬೇಕು. ಸಂವಿಧಾನದಲ್ಲಿ ವ್ಯವಸ್ಥೆಗಳು ಹಾಗೆಯೇ ಇವೆ. ಕಾನೂನಿನಲ್ಲಿ ತಿದ್ದುಪಡಿ ಬರಬೇಕು. ಯಾವುದೇ ಬ್ಯಾಂಕ್ ಸಿಬ್ಬಂದಿಗಳಿಂದ ತಪ್ಪಾಗಿದ್ದು ಅವರ ಕೋರ್ಟ್ ಶುಲ್ಕ ಆ ಬ್ಯಾಂಕ್ ಭರಿಸುತ್ತದೆ. ಇದು ಬದಲಾಗಬೇಕು (ಪಾಲಿಸಿ ಚೇಂಜ್) ಆದರೆ ದೂರುದಾರ ಲಕ್ಷಾಂತರ ಖರ್ಚು ಮಾಡಬೇಕು. ಯಾರಿಗೆ ನ್ಯಾಯ ಸಿಗಬೇಕೋ, ಅವರೇ ಕಾನೂನು ವ್ಯವಸ್ಥೆಯಡಿ ನಲುಗುವಂತಾಗಿದೆ. ಮುಂದಿನ ಹೆಜ್ಜೆಯನ್ನು ಬ್ಯಾಂಕ್ ಇಡಬೇಕು, ಇಲ್ಲದಿದ್ದರೆ ಈ ಪ್ರಕರಣವನ್ನು ಇಲ್ಲಿಗೆ ಬಿಡುವ ಮಾತಿಲ್ಲ. ಹರೀಶ್ಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ" ಎಂದು ಹೇಳಿದರು.
ಹರೀಶ್ ಹಿಂದೆ ಬೆಂಗಳೂರಿನಲ್ಲಿರುವ ನೌಕರಿ ಮಾಡಿಕೊಂಡಿದ್ದಾಗ, ಮಲ್ಲೇಶ್ವರಂನಲ್ಲಿ ಎಸ್ಬಿಐನಲ್ಲಿ ಖಾತೆ ತೆರೆದಿದ್ದು, ತಮ್ಮ ಉಳಿತಾಯದ ಹಣವನ್ನು ಕೂಡಿಸಿಟ್ಟಿದ್ದರು. 2019ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗ ವಾಪಾಸ್ಸಾಗಿದ್ದು, ಸಂತೆಕಟ್ಟೆಯಲ್ಲಿ ಎಸ್ಬಿಐ ಶಾಖೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದರು.
2019ರಂದು ಬೆಳಗ್ಗೆ ತಮ್ಮ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಬಗ್ಗೆ ಮೆಸೇಜ್ ಬಂದಿತ್ತು. ಮತ್ತೆ ಕೆಲವು ನಿಮಿಷದಲ್ಲಿ ಹಣ ಖಡಿತಗೊಂಡ ಮೇಸೇಜ್ ಬಂದಿತ್ತು. ಕೂಡಲೇ ಶಾಖೆಗೆ ಹೋಗಿ ದೂರು ನೀಡಿದರೂ ಮೂರು ದಿನವರೆಗೂ ಖಾತೆಯನ್ನು ಬ್ಲಾಕ್ ಮಾಡಿರಲಿಲ್ಲ. ಆದರೆ ಖಾತೆಯಲ್ಲಿದ್ದ ಎಫ್ಡಿ ಮತ್ತು ಸೇವಿಂಗ್ಸ್ ಒಟ್ಟು ಸೇರಿ 5 ಲಕ್ಷದ 10ರೂ ದೆಹಲಿಯ ಎಸ್ಬಿಐ ಖಾತೆಗೆ ವರ್ಗಾಯಿಸಲಾಗಿತ್ತು. ಕೂಡಲೇ ಆ ಮ್ಯಾನೇಜರ್ ಅನ್ನು ಸಂಪರ್ಕಿಸಿದರೂ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಬ್ಯಾಂಕ್ ಅಧಿಕಾರಿಗಳ ಈ ಪ್ರತಿಕ್ರಿಯೆ ಗಮನಿಸಿ ಕೂಡಲೇ ಸೆನ್ ಸ್ಟೇಷನ್ ನಲ್ಲಿ ದೂರು ದಾಖಲಾದ ಮೇಲೆ ಮರುದಿನವೇ ಎಫ್ಐ ಆರ್ ಕೋರ್ಟ್ಗೆ ಸಲ್ಲಿಸಲಾಗಿತ್ತು. ಬಳಕೆದಾರನ ಪರವಾಗಿ, ವಕೀಲರಾದ ವಿದ್ಯಾ ಭಟ್ ವಾದಿಸಿದ್ದರು. ಇದೇ ವರ್ಷ ಜುಲೈ 14ರಂದು ಹೈ ಕೋರ್ಟ್ ಬ್ಯಾಂಕ್ಗೆ 30 ದಿನದ ಗಡುವು ಕೊಟ್ಟು ತೀರ್ಪು ನೀಡಿತ್ತು.