ಕಾರ್ಕಳ, ಆ 26 (DaijiworldNews/PY): ಸಾಲ ಮರುಪಾವತಿಸದ ಸಾಲಗಾರನೊಬ್ಬ ತನ್ನ ಸಂಗಡಿಗರ ಜೊತೆಗೂಡಿ ಬ್ಯಾಂಕ್ವೊಂದರ ಸೀನಿಯರ್ ಸೂಪರ್ ವೈಸರ್ಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆಗೈದು, ಜೀವಬೆದರಿಕೆಯೊಡ್ಡಿರುವ ಘಟನೆ ಬೈಲೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಪ್ರಸ್ತುತ ಬೆಳುವಾಯಿ ಡಿಸಿಸಿ ಬ್ಯಾಂಕ್ನಲ್ಲಿ ಸೀನಿಯರ್ ಸೂಪರ್ ವೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶೇಖರ್ ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ.
ಡಿಸಿಸಿ ಬ್ಯಾಂಕ್ ಬೈಲೂರು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪರಿಚಯಸ್ಥರಾಗಿರುವ ಸುಕೀರ್ತಿ ಎಂಬವರಿಗೆ 25 ರೂ. ಸಾವಿರ ಸಾಲ ಮಂಜೂರು ಮಾಡಿದ್ದರು. ಸಾಲ ಮರುಪಾವತಿಸದೇ ಇದ್ದ ಸುಕೀರ್ತಿ ಆ.24ರಂದು ಶೇಖರ್ ಅವರಿಗೆ ಕರೆ ಮಾಡಿ ಸಾಲ ಪಾವತಿಯ ಮಾಹಿತಿ ಪಡೆದಿದ್ದರು.
ಪರಿಚಯಸ್ಥನ ನೆಲೆಯಲ್ಲಿ ಅದೇ ದಿನ ಸಂಜೆ ಸುಮಾರು 5.20ರ ವೇಳೆಗೆ ಶೇಖರ ಅವರು ಸುಕೀರ್ತಿ ಫೋನ್ ಕರೆ ಮಾಡಿ ಸಾಲ ಪಾವತಿಸಿದ್ದೀರಾ? ಎಂದು ಪ್ರಶ್ನಿಸಿದರು. ಇದರಿಂದ ಕುಪಿತಗೊಂಡ ಸುಕೀರ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ.
ಕೆಲಸ ಮುಗಿಸಿದ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಶೇಖರ್ ಅವರು ಸಂಜೆ 6.50ರ ವೇಳೆಗೆ ಬೈಲೂರು ರಿಕ್ಷಾ ನಿಲ್ದಾಣ ಬಳಿಯಲ್ಲಿ ತನ್ನ ಸ್ನೇಹಿತರಾದ ಪ್ರದೀಪ ಹಾಗೂ ತನ್ನ ತಮ್ಮ ಗಿರೀಶ ಅವರೊಂದಿಗೆ ಮಾತನಾಡುತ್ತಿದ್ದರು. ಅದೇ ವೇಳೆಗೆ ಬಿಳಿ ಬಣ್ಣದ ಕಾರೊಂದು ಸಮೀಪಕ್ಕೆ ಬಂದು ಶೇಖರ್ ಅವರ ಕಾರಿಗೆ ಅಡ್ಡವಾಗಿ ನಿಂತುಕೊಂಡಿತು. ಕಾರಿನಿಂದ ಹೊರ ಬಂದ ಸುಕೀರ್ತಿ, ಸುಕೇಶ, ಜಗದೀಶ ಪೂಜಾರಿ ಅಲಿಯಾಸ್ ಜಗ್ಗು ಮತ್ತು ಇತರರು ಶೇಖರ್ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆಗೈದು, ಜೀವಬೆದರಿಕೆಯೊಡ್ಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.