ಬಂಟ್ವಾಳ, ಆ 26 (DaijiworldNews/PY): ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಹಿರಿಯ ಪತ್ರಕರ್ತ, ಸಂಘಟಕ, ಸಾಮಾಜಿಕ ಕಾರ್ಯಕರ್ತ ಡಿ.ಎಂ.ಕುಲಾಲ್ (54) (ದೈಪಲ ಮಾಧವ ಕುಲಾಲ್) ಅವರು ಸುಧೀರ್ಘ ಕಾಲದ ಅಸೌಖ್ಯದಿಂದ ಗುರುವಾರ ಮಧ್ಯಾಹ್ನ ದೈಪಲದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮುಂಗಾರು, ಮಂಗಳೂರು ಮಿತ್ರ, ನೇತ್ರಾವತಿ ವಾರ್ತೆ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದ ಅವರು ಬಳಿಕ ವಿವಿಧ ಪತ್ರಿಕೆಗಳಿಗೆ ಲೇಖನವನ್ನು ಬರೆಯುತ್ತಿದ್ದರು. ಅವರ ಬಂಧುವಾಗಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಡಾ.ಅಮ್ಮೆಂಬಳ ಬಾಳಪ್ಪ ಅವರ ಜೀವನಚರಿತ್ರೆಯ ಪುಸ್ತಕ ಸೇರಿದಂತೆ ಒಟ್ಟು 4 ಕೃತಿಗಳನ್ನು ಬರೆದಿದ್ದರು. ಲೇಖರಲ್ಲದೆ ಉತ್ತಮ ಭಾಷಣಕಾರರು ಆಗಿದ್ದರು.
ಉಜಿರೆಯಲ್ಲಿ ನಡೆದ ವಿಶ್ವ ತುಳು ಸಾಹಿತ್ಯ ಸಮ್ಮೇಳನದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಅವರನ್ನು ಡಾ.ಹೆಗ್ಗಡೆಯವರು ಪುರಸ್ಕರಿಸಿದ್ದಲ್ಲದೆ ಹಲವಾರು ಸನ್ಮಾನಕ್ಕೂ ಪಾತ್ರರಾಗಿದ್ದರು. ಇತ್ತೀಚೆಗಷ್ಟೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಅವರ ನಿವಾಸದಲ್ಲಿಯೇ "ಚಾವಡಿ ಪುರಸ್ಕಾರ" ನೀಡಿ ಗೌರವಿಸಲಾಗಿತ್ತು.
ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಬಂಟ್ವಾಳ ತಾಲೂಕು ಕುಲಾಲ ಸಮಾಜ ಸುಧಾರಕ ಸಂಘದಲ್ಲಿಯು ಸಕ್ರೀಯ ಸದಸ್ಯ, ಪದಾಧಿಕಾರಿಯಾಗಿಯು ಕಾರ್ಯನಿರ್ವಹಿಸಿದ್ದು, ಮಾಣಿಲ ಶ್ರೀಧಾಮದ ಸೇವಾ ಸಮಿತಿಯಲ್ಲೂ ಸಕ್ರೀಯವಾಗಿದ್ದರು. ಕುಲಾಲ ಮಠ ಕುಂಭೋಧರಿ ದೇವಿ ಟ್ರಸ್ಟ್ ನ ಸ್ಥಾಪಕರು ಆಗಿದ್ದರಲ್ಲದೆ, ಕಾಂಗ್ರೆಸ್ ಪಕ್ಷದಲ್ಲೂ ಕಾರ್ಯಕರ್ತರಾಗಿ ಕೆಲ ಸಮಯಗಳ ಕಾಲ ಗುರುತಿಸಿದ್ದರು.
ಮೃತರು ತಾಯಿ, ಪತ್ನಿ, ಓರ್ವ ಪುತ್ರಿ, ಪುತ್ರ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಡಿ.ಎಂ.ಕುಲಾಲ್ ಅವರ ನಿಧನಕ್ಕೆ ಶಾಸಕ ರಾಜೇಶ್ ನಾಯಕ್ ಉಳಿಪಾಡಿ, ಮಾಜಿ ಸಚಿವ ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ತುಳುಕೂಟ ಅಧ್ಯಕ್ಷ ಸುದರ್ಶನ್ ಜೈನ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೆ.ಕೆ.ಪೂಂಜಾ, ಬಂಟ್ವಾಳ ತಾಲೂಕು ಕುಲಾಲ ಸಮಾಜ ಸುಧಾರಕ ಸಂಘ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ.