ಮಂಗಳೂರು, ಆ 26 (DaijiworldNews/MS): ಕುಲಶೇಖರ ಮತ್ತು ಪಡೀಲ್ ನಡುವಿನ ರೈಲ್ವೆ ಹಳಿಗಳಲ್ಲಿ ಬಿರುಕುಗಳು ಕಂಡುಬಂದಿದ್ದರಿಂದ, ಆಗಸ್ಟ್ 25 ಬುಧವಾರದಂದು ಒಂದು ರೈಲು ಸಂಚಾರವನ್ನು ರದ್ದುಗೊಳಿಸಬೇಕಾಯಿತು ಮತ್ತು ಇತರ ಆರು ರೈಲುಗಳು ವಿಳಂಬವಾಗಿ ಸಂಚರಿಸಿವೆ.
ತೋಕೂರು - ಮಂಗಳೂರು ವಿಭಾಗದ ಕುಲಶೇಖರ ಮತ್ತು ಪಡೀಲ್ ನಡುವಣ ರೈಲು ಹಳಿಯ ಕೆಲವು ಕ್ಲಿಪ್ ಗಳನ್ನು ತುಂಡಾಗಿ ಅಪಾಯದ ಸಿಗ್ನಲ್ ತೋರಿಸುತ್ತಿರುವ ಟ್ರ್ಯಾಕ್ ನಿರ್ವಾಹಕ ಚಂದನ್ ಕುಮಾರ್ ಅವರು ಗಮನಿಸಿ ಮಂಗಳವಾರ ತಡರಾತ್ರಿ 1.10 ಗಂಟೆಗೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಈ ಸಂದರ್ಭ ಕೇರಳ ಕಡೆಗೆ ಸಂಚರಿಸುತ್ತಿದ್ದ ಯೋಗ ನಗರಿ ಹೃಷಿಕೇಶ್ - ಕೊಚುವೇಲಿ ರೈಲನ್ನು ತಡೆಹಿಡಿಯಲಾಯಿತು. ಬೆಳಿಗ್ಗೆ 6.13 ಕ್ಕೆ ದುರಸ್ತಿ ಪೂರ್ಣಗೊಂಡ ನಂತರ, ರೈಲು ಬೆಳಿಗ್ಗೆ 7 ಗಂಟೆಗೆ ಮಂಗಳೂರು ಜಂಕ್ಷನ್ಗೆ ತಲುಪಿ ತನ್ನ ಪ್ರಯಾಣವನ್ನು ಮುಂದುವರಿಸಿತು. ರೈಲು ಆರು ಗಂಟೆಗೂ ಹೆಚ್ಚು ವಿಳಂಬವಾಯಿತು. ಇದಲ್ಲದೆ ತಿರುವನಂತಪುರಂ ನಿಜಾಮುದ್ದೀನ್ ರಾಜಧಾನಿ ಎಕ್ಸ್ಪ್ರೆಸ್, ಬೆಂಗಳೂರು - ಕಾರವಾರ ಎಕ್ಸ್ಪ್ರೆಸ್ ಮುಂತಾದ ಆರು ರೈಲು ತಡವಾಗಿ ಸಂಚರಿಸಿದೆ. ಮಂಗಳೂರು ಸೆಂಟ್ರಲ್ - ಮಡಂಗಾವ್ ಇಂಟರ್ ಸಿಟಿ ವಿಶೇಷ ರೈಲಿನ ಯಾನವನ್ನು ರದ್ದುಪಡಿಸಲಾಯಿತು.