ಕಾರ್ಕಳ, ಆ 25 (DaijiworldNews/PY): "ಅತ್ಯಪರೂಪದ ಭಾಷಾಸಂಪತ್ತು, ಶುದ್ಧ ವ್ಯಾಕರಣ, ಸಾಹಿತ್ಯ, ಪುರಾಣ, ನೀತಿಸೂಕ್ತ, ಸುಭಾಷಿತ, ವಿಜ್ಞಾನ, ರಾಜನೀತಿಗಳನ್ನೊಳಗೊಂಡ ಸಂಸ್ಕೃತ ಭಾಷೆಯು ಜಗತ್ತಿನ ಉಳಿದೆಲ್ಲಾ ಭಾಷೆಗಳಿಗೆ ತಾಯಿಯ ಸ್ಥಾನದಲ್ಲಿದ್ದು ಪ್ರತಿಯೊಬ್ಬ ಭಾರತೀಯನೂ ಸಂಸ್ಕೃತ ಕಲಿಕೆಗೆ ಮುಂದಾಗಬೇಕು. ಅಪೂರ್ವ ಜ್ಞಾನನಿಧಿ ದೇವವಾಣಿಯ ಅಧ್ಯಯನದಿಂದ ಭಾರತವು ತನ್ನ ಸಾಂಸ್ಕೃತಿಕ ಉತ್ಕೃಷ್ಟ ದಿನಗಳತ್ತ ಹೊರಳಲಿದೆ" ಎಂದು ಸಂಸ್ಕೃತ ಭಾರತಿಯ ಉಡುಪಿ ಜಿಲ್ಲಾಧ್ಯಕ್ಷ ಪಿ. ಶ್ರೀಧರ ಆಚಾರ್ ಹೇಳಿದ್ದಾರೆ.
ಶ್ರೀಮದ್ಭುವನೇಂದ್ರ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸಂಸ್ಕೃತ ಭಾರತಿಯ ಕಾರ್ಕಳ ಘಟಕದ ಉದ್ಘಾಟನೆ ಹಾಗೂ ಸಂಸ್ಕೃತೋತ್ಸವ ಸಮಾರಂಭದಲ್ಲಿ ಶಿಖರೋಪನ್ಯಾಸಗೈದು, "ಭಾಷಾಸಾಮರಸ್ಯತೆ ಹಾಗೂ ರಾಷ್ಟ್ರೀಯ ಏಕತೆಯ ಸಾಧನೆಗೆ ಸಂಸ್ಕೃತವೊಂದೇ ಪರಿಹಾರ" ಎಂದು ಹೇಳಿದರು.
ರಾಷ್ಟೀಯ ಸ್ವಯಂಸೇವಕ ಸಂಘದ ತಾಲೂಕು ಸಂಘಚಾಲಕ ಉದಯಕುಮಾರ ಶೆಣೈ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, "ವಿದೇಶದ ಅನೇಕ ಕಡೆಯ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕೃತದ ಮೂಲಕ ಜೀವನಶಿಕ್ಷಣ ಕಲಿಸಲು ಹಾತೊರೆಯುತ್ತಿದ್ದರೆ ನಾವು ಭಾಷೆಯ ಸೊಗಡನ್ನರಿಯದೆ ಕಲಿಕೆಯಿಂದ ಹಿಂದುಳಿಯುವುದು ಸರಿಯಲ್ಲ. ಪ್ರತಿ ವಿದ್ಯಾಸಂಸ್ಥೆಯಲ್ಲೂಸಂಸ್ಕೃತದ ಕಲಿಕೆಗೆ ಅವಕಾಶ ಲಭ್ಯವಾಗಬೇಕು" ಎಂದರು.
ನಿಟ್ಟೆ ಗಾಜ್ರಿಯಾ ವೈದ್ಯಕೀಯ ಸಂಸ್ಥೆಯ ಡಾ. ಕಾರ್ತಿಕ್ ರಾವ್ ಮಾತನಾಡಿ, "ಆಧುನಿಕ ಕಾಲಘಟ್ಟದ ಅನೇಕ ಕ್ಲಿಷ್ಟಕರ ಪ್ರಶ್ನೆಗಳಿಗೆ ಹಾಗೂ ಒತ್ತಡಮಯ ಬದುಕಿನ ನಿವಾರಣೆಗೆ ವೇದೋಪನಿಷತ್ತುಗಳಲ್ಲಿ ಇದಮಿತ್ಥಂ ಉತ್ತರ ಲಭ್ಯವಿದೆ" ಎಂದರು.
ನೂತನ ಸಮಿತಿಯ ಅಧ್ಯಕ್ಷ ಕೆ. ಗೋಪಾಲಕೃಷ್ಣ ಭಟ್, ಉಪಾಧ್ಯಕ್ಷ ಡಾ. ಕಾರ್ತಿಕ್ ರಾವ್, ಸಂಯೋಜಕ ಡಾ. ಸುಮಂತ್ ಜೋಶಿ, ಸಹ ಸಂಯೋಜಕ ಪೂರ್ಣಿಮಾ ಶೆಣೈ, ಕೋಶ ಪ್ರಮುಖ ಗಜಾನನ ಮರಾಠೆ, ಶಿಕ್ಷಣ ಪ್ರಮುಖ ಡಾ. ಪದ್ಮನಾಭ ಮರಾಠೆ ಹಾಗೂ ಕಾರ್ಯಕಾರಿಣಿ ಸದಸ್ಯ ಆರ್. ಸುರೇಂದ್ರ ಶೆಣೈ ಹಾಗೂ ನಿವೃತ್ತ ಎವಿಎಂ ರಮೇಶ ಕಾರ್ಣಿಕ್ ನಿಯೋಜಿತರಾದರು.
ಸಾಮಾಜಿಕ ಕಾರ್ಯಕರ್ತೆ ಶೈಲಜಾ ಸ್ವಾಗತಿಸಿ ನಿರೂಪಿಸಿದರು. ಪೂರ್ಣಿಮಾ ಶೆಣೈ ವಂದಿಸಿದರು.