ಕಾರ್ಕಳ, ಆ 25 (DaijiworldNews/MS): ಕಟ್ಟಡ ಕಾರ್ಮಿಕರಿಗೆ ಸಹಾಯವಾಗಲೆಂದು ಕಾರ್ಮಿಕ ಇಲಾಖೆ ನೀಡಿರುವ ಆಹಾರ ಕಿಟ್ ಸಮರ್ಪಕವಾಗಿ ವಿರತಣೆ ಆಗದೆ ಗೋಡಾನಿನಲ್ಲೇ ಹಾಳಾಗುತ್ತಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಆರೋಪಿಸಿದ್ದಾರೆ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸಹಾಯವಾಗಲೆಂದು ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ಟ್ ಬಿಡುಗಡೆಯಾಗಿದೆ. ಕಾರ್ಕಳದಲ್ಲಿ ಸಮರ್ಪಕವಾಗಿ ಕಿಟ್ಟ್ ವಿತರಣೆಯಾಗದೆ ಗೋಡಾನ್ನಲ್ಲಿ ರಾಶಿ ಬಿದ್ದು, ಅದರ ಆಹಾರ ಪದಾರ್ಥಗಳು ಹಾಳಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ಬಂದ ಕೆಲವು ಕಾರ್ಮಿಕರಿಗೆ ಗಂಟೆಗಟ್ಟಲೆ ನಿಲ್ಲಿಸಿ ಸತಾಯಿಸುವ ಪ್ರವೃತ್ತಿ ಮುಂದುವರಿದಿದೆ. ಕಿಟ್ ಹಂಚಬೇಕಾಗಿದ್ದ ಕ್ಷೇತ್ರದ ಜನಪ್ರತಿನಿಧಿಯಾಗಿರುವ ಸಚಿವ ಸುನೀಲ್ ಕುಮಾರ್ ಅವರು ಸನ್ಮಾನ, ಅಬಿನಂದನೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಆರ್ಹ ಫಲಾನುಭವಿಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಬೇಕೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಕಳೆದ ವಾರ್ಷಿಕವಧಿಯಲ್ಲಿ ಬಿಡುಗಡೆಯಾಗಿದ್ದ 5000 ಆಹಾರ ಕಿಟ್ ಗಳಲ್ಲಿ ಒಂದನ್ನೂ ವಿತರಿಸದೆ ಭ್ರಷ್ಟಾಚಾರ ನಡೆಸಲಾಗಿದೆ. ಈ ಕುರಿತು ಈಗಾಗಲೇ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.