ಕುಂದಾಪುರ ಆ 25 (DaijiworldNews/MS) : ಕೇವಲ 30 ಸಾವಿರದೊಳಗೆ ನಿರ್ಮಿಸಿದ ಭತ್ತ ಕಟಾವು ಯಂತ್ರ, ರಿಕ್ಷಾದ ಇಂಜಿನ್ ಬಳಸಿಕೊಂಡು ಸಿದ್ಧ ಪಡಿಸಿದ ಕೈಗಾಡಿ, ಬಾವಿಯ ಮಣ್ಣು ಮೇಲೆತ್ತುವ ಯಂತ್ರ ಹೀಗೆ ನಿರುಪಯೂಕ್ತ ವಸ್ತುಗಳನ್ನು ಬಳಸಿಕೊಂಡು ಅದಕ್ಕೆ ಹೊಸ ಜೀವ ಕೊಡುವ ಗ್ರಾಮೀಣ ಇಂಜಿನಿಯರ್ ಒಬ್ಬರು ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯ ಕುಳಂಜೆಯಲ್ಲಿ ಇದ್ದಾರೆ. ಅವರೇ ಕುಳಂಜೆ ಗುಂಡುಕೊಡ್ಲು ಬಾಬು ನಾಯ್ಕ.
ಯಂತ್ರೋಪಕರಣಗಳ ರಚನೆ, ವಿನ್ಯಾಸ, ಕಾರ್ಯನಿರ್ವಹಣೆಯ ಬಗ್ಗೆ ಮೊದಲಿನಿಂದಲೂ ಆಸಕ್ತಿ ಬೆಳೆಸಿಕೊಂಡು ಬಂದ ಕೃಷಿಕ ಬಾಬು ನಾಯ್ಕರು ಇವತ್ತು ತನ್ನದೇ ಸೃಷ್ಟಿಶೀಲತೆಯಲ್ಲಿ ಹಲವಾರು ಕೃಷಿ ಯಂತ್ರೋಪಕರಣಗಳನ್ನು ನಿರ್ಮಿಸಿದ್ದಾರೆ. ಅತ್ಯಂತ ಕಡಿಮೆ ಬೆಲೆಯಲ್ಲಿ, ಗುಜರಿಗೆ ಹಾಕುವ ವಸ್ತುಗಳನ್ನು ಬಳಿಸಿಕೊಂಡು ಬೇರೆ ಬೇರೆ ಯಂತ್ರಗಳ ಆವಿಷ್ಕಾರ ಮಾಡಿದ್ದಾರೆ.
ಇವತ್ತು ಭತ್ತ ಕಟಾವು ಯಂತ್ರವನ್ನು ಕೇವಲ 40 ಸಾವಿರದ ಆಸುಪಾಸಿನಲ್ಲಿ ಸಿದ್ಧ ಪಡಿಸುವುದು ಕಷ್ಟದ ಮಾತು. ಆದರೆ ಬಾಬು ನಾಯ್ಕರು ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ರಿಕ್ಷಾದ ಇಂಜಿನ್ ಬಳಸಿಕೊಂಡು ವಿವಿಧ ನಿರುಪಯೂಕ್ತ ವಸ್ತುಗಳ ಅಳವಡಿಸಿಕೊಂಡು, ಸ್ಟೀಲ್ ಸೀಟ್ ಹಾಗೂ ಹೊಸ ಟೈರ್ಗಳನ್ನು ಖರೀದಿಸಿ ಯಥಾವತ್ತು ಕಟಾವು ಯಂತ್ರ ಸಿದ್ಧ ಪಡಿಸಿದ್ದಾರೆ. ಮಾಮೂಲಿ ಕಟಾವು ಯಂತ್ರಗಳಿಂತ ಪರಿಣಾಮಕಾರಿಯಾಗಿ ಇದು ಕೆಲಸ ಮಾಡುವುದನ್ನು ಕಂಡು ಕೊಂಡಿದ್ದಾರೆ.
ತನ್ನದೇಯಾದ ಅಟೋ ರಿಕ್ಷಾವನ್ನು ಗುಜರಿಗೆ ಹಾಕಲು ಹೋದಾಗ ಅಲ್ಲಿ ಹೇಳಿದ ಬೆಲೆ ಕೇಳಿ ಅದನ್ನು ಮರಳಿ ಮನೆಗೆ ತಂದು ರಿಕ್ಷಾದ ಬಿಡಿಭಾಗಗಳನ್ನು ಬಳಸಿಕೊಂಡು ಅದಕ್ಕೊಂದು ನವಜೀವ ನೀಡಲು ಸಿದ್ಧವಾದರು. ಕೃಷಿಕನಾದ್ದರಿಂದ ಕೃಷಿಕನ ಸಮಸ್ಯೆ, ಸವಾಲುಗಳ ಅರಿವಿರುವುದರಿಂದ ತೋಟಕ್ಕೆ ಗೊಬ್ಬರ, ಮಣ್ಣು ಸಾಗಿಸಲು ಒಂದು ಕೈಗಾಡಿ ಮಾಡುವ ನಿರ್ಣಯಕ್ಕೆ ಬಂದರು. ಇಂಜಿನಿಯರಿಂಗ್ ವರ್ಕ್ ಶಾಪ್ನಲ್ಲಿ ಟೆಂಪೋ ವಿನ್ಯಾಸಗೊಳಿಸಿ, ಅಟೋದ ಇಂಜಿನ್ ಜೋಡಿಸಿ, ಗೇರ್, ಬ್ರೇಕ್ ಗಳ ಜೋಡಣೆ ಮಾಡಿದರು. ಒಳ್ಳೆಯ ಫಲಿತಾಂಶವನ್ನು ಈ ಕೈಗಾಡಿ ನೀಡಿತು. ೨೫ ಬುಟ್ಟಿಯಷ್ಟು ಮಣ್ಣನ್ನು ಏಕಕಾಲಕ್ಕೆ ಸಾಗಿಸಲು, ಕಿರಿದಾದ ದಾರಿಯಲ್ಲಿಯೂ ಕೂಡಾ ಗೊಬ್ಬರ ಇತ್ಯಾದಿಗಳನ್ನು ಸಾಗಿಸಲು ಅನುಕೂಲವಾಗುತ್ತದೆ. ಏರು ಪ್ರದೇಶಕ್ಕೂ ಕೂಡಾ ಏರಬಲ್ಲದು.
ಬಾವಿಯಿಂದ ಮಣ್ಣು ಮೇಲೆತ್ತುವ ಈಗ ಇರುವ ಯಂತ್ರವನ್ನು ಇನ್ನಷ್ಟು ಸರಳೀಕೃತಗೊಳಿಸಿದ್ದಾರೆ. ಯಶಸ್ವಿಯಾಗಿ ಪ್ರಯೋಗವನ್ನು ಕೂಡಾ ನಡೆಸಿದ್ದಾರೆ. ಒಬ್ಬರು ಕುಳಿತು ಅವರ ನಿರ್ವಹಣೆ ಮಾಡುವ ಈ ಯಂತ್ರದಲ್ಲಿ ಸರಳವಾದ ವಿನ್ಯಾಸ ರೂಪಿಸಿದ್ದು, ಮಣ್ಣು ಎತ್ತುವಿಕೆಯಲ್ಲಿ ವೇಗ ಹಾಗೂ ಕಾರ್ಯದಕ್ಷತೆಯನ್ನು ಹೊಂದಿದೆ. ಇಷ್ಟೇ ಅಲ್ಲ ಬಾಬು ನಾಯ್ಕರು ಕೋನೋ ವೀಡರ್ನ್ನು ಕೂಡಾ ತನ್ನು ಚಿತ್ತಚಮತ್ಕಾರದಲ್ಲಿ ವಿನ್ಯಾಸಗೊಳಿಸಿ ಹಲವಾರು ಮಂದಿ ಸ್ನೇಹಿತರಿಗೆ ನೀಡಿದ್ದಾರೆ. ಕೃಷಿ ಪೂರಕವಾದ ಪರಿಕರಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಕೃಷಿಕರಾಗಿರುವ ಬಾಬು ನಾಯ್ಕರು ಸುಧಾರಿತ ಕೃಷಿಯ ಬಗ್ಗೆಯೂ ಆಸಕ್ತರು. ಯಂತ್ರಶ್ರೀ ಭತ್ತ ನಾಟಿ ಮಾಡಿದ್ದಾರೆ. ಅಡಿಕೆ, ತೆಂಗು, ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಇವರ ಯಾಂತ್ರೀಕ ಜ್ಞಾನ ಕೌಶಲ್ಯ ಬೆರಗು ಮೂಡಿಸುತ್ತದೆ. 8 ನೇ ತರಗತಿಯ ತನಕ ಓದಿರುವ ಬಾಬು ನಾಯ್ಕರ ಯಂತ್ರಗಳ ಕಾರ್ಯನಿರ್ವಹಣೆ, ಪ್ರತಿಯೊಂದು ಬಿಡಿಭಾಗಗಳ ಪಾತ್ರಗಳ ಬಗ್ಗೆ ಅನುಭವದ ಮೂಲಕವೇ ತಿಳಿದುಕೊಳ್ಳುತ್ತಾರೆ.
ಗುಜರಿಗೆ ಹಾಕುವ ವಸ್ತುಗಳನ್ನು ಬಳಸಿಕೊಂಡು ಕೃಷಿಗೆ ಪೂರವಾಗುವ ಪರಿಕರಗಳ ನಿರ್ಮಿಸಿದೆ. ಇದು ನಮ್ಮ ಬಳಕೆಗಾಗಿ ಮಾತ್ರ. ಯಂತ್ರಗಳಲ್ಲಿ ಸರಳೀಕರಣಗೊಳಿಸುವ, ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಹೊಸ ವಿನ್ಯಾಸಗಳನ್ನು ಅಳವಡಿಸಿಕೊಳ್ಳುತ್ತೇನೆ. ರಿಕ್ಷಾದ ಇಂಜಿನ್ ಬಳಸಿ ಸಿದ್ಧಪಡಿಸಿದ ಕೈಗಾಡಿ, ಕಟಾವು ಯಂತ್ರ, ಬಾವಿ ಮಣ್ಣು ಎತ್ತುವ ಯಂತ್ರಗಳು ಯಶಸ್ವಿಯಾಗಿವೆ. ಇದು ಮನಸ್ಸಿಗೆ ಖುಷಿ ಕೊಡುವ ಕಲೆ ಅಷ್ಟೆ. -ಬಾಬು ನಾಯ್ಕ, ಕುಳಂಜೆ
ಸಂಪರ್ಕ ಸಂಖ್ಯೆ: 9481918752