ಪುತ್ತೂರು, ಆ 25 (DaijiworldNews/PY): ಪೂರ್ವ ದ್ವೇಷ ಹಿನ್ನೆಲೆ ವ್ಯಕ್ತಿಯೋರ್ವರಿಗೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ದರ್ಬೆಯ ಪೆಟ್ರೋಲ್ ಪಂಪ್ವೊಂದರ ಬಳಿ ಆ.24ರಂದು ನಡೆದಿದೆ.
ಸಾಂದರ್ಭಿಕ ಚಿತ್ರ
ಆರೋಪಿಗಳನ್ನು ಕಿಶೊರ್ ಗೋಳ್ತಮಜಲು, ರಾಕೇಶ್ ಪಂಚೋಡಿ, ರೆಹಮಂತ್, ಇಬ್ರಾಹಿಂ ಕಬಕ, ದೇವಿಪ್ರಸಾದ್ ಹಾಗೂ ಅಶ್ರಫ್ ಪೆರಾಜೆ ಎಂದು ಗುರುತಿಸಲಾಗಿದೆ.
ಪುತ್ತೂರಿನ ಕೆಮ್ಮಾಯಿ ನಿವಾಸಿ ರಾಧಾಕೃಷ್ಣ ಎನ್ನುವವರು ಆ.24ರಂದು ಕೆಲಸದ ನಿಮಿತ್ತ ತಮ್ಮ ಇನ್ನೋವಾ ಕಾರಿನಲ್ಲಿ ಬಂದು, ಕೆಲಸ ಮುಗಿಸಿ ಕಾರಿಗೆ ಡೀಸೆಲ್ ಹಾಕಿಸಿ ಪಕ್ಕದಲ್ಲಿದ್ದ ಏರ್ ಪಂಪ್ಗೆ ಹೋಗಿ ಗಾಳಿ ಹಾಕಿಸುತ್ತಿದ್ದ ಸಂದರ್ಭ ಆರು ಮಂದಿಯ ತಂಡವೊಂದು ಒಂದು ಕಾರು ಹಾಗೂ ಎರಡು ಬೈಕ್ನಲ್ಲಿ ಬಂದಿದ್ದು, ರಾಧಾಕೃಷ್ಣ ಅವರಿಗೆ ಫೈಬರ್ ಪಾರ್ಕಿಂಗ್ ಕೋನ್, ನೋಪಾರ್ಕಿಂಗ್ ಬೋರ್ಡಿನ ಕಬ್ಬಿಣದ ಸ್ಟಾಂಡ್, ಹೆಲ್ಮೆಟ್ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ, ಕಾರನ್ನು ಜಖಂಗೊಳಿಸಿದ್ದಾರೆ. ತೀವ್ರ ಹಲ್ಲೆಗೊಳಗಾದ ರಾಧಾಕೃಷ್ಣ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.
ಘಟನೆಯ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 2 ವರ್ಷಗಳ ಹಿಂದೆ ನಡೆದ ಕಾರ್ತಿಕ್ ಕೊಲೆ ಕೇಸಿನ ಆರೋಪಿ ಪ್ರೀತೇಶ್ ಎಂಬವರು ಈಗಲೂ ಜೈಲಿನಲ್ಲಿದ್ದು ಈ ಬಗ್ಗೆ ಪ್ರಮುಖ ಸಾಕ್ಷಿದಾರರಾದ ಆರೋಪಿ ಕಿಶೋರನ ಸಂಬಂಧಿಗಳಾದ ಕೇಶವ ಸುವರ್ಣ ಮತ್ತು ಪ್ರಮೋದ ಎನ್ನುವವರು ಪ್ರೀತೇಶನ ಪರ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯುವಂತೆ ಒಪ್ಪಿಸಲು ತನ್ನ ಸ್ನೇಹಿತ ಪ್ರಜ್ವಲ್ ಜೊತೆ ಸೇರಿ 3 ದಿಗಳ ಹಿಂದೆ ಬೀರಮಲೆ ಗುಡ್ಡೆಯಲ್ಲಿ ಆರೋಪಿ ಕೀಶೊರನ ಜೊತೆ ಮಾತುಕತೆ ನಡೆಸಿದ ಸಂದರ್ಭ ಅವರೊಳಗೆ ಮಾತಿಗೆ ಮಾತಾಗಿ ಗಲಾಟೆ ನಡೆದಿತ್ತು. ಇದೇ ಸಿಟ್ಟಿನಿಂದ ಆರೋಪಿ ಕಿಶೋರನು ತನ್ನ ಸ್ನೇಹತರೊಂದಿಗೆ ಸೇರಿಕೊಂಡು ಈ ದಿನ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.