ಮಂಗಳೂರು, ಆ. 24 (DaijiworldNews/SM): ತಾಲಿಬಾನ್ ವಶ ಪಡಿಸಿಕೊಂಡ ಬಳಿಕ ಇಡೀ ಜಗತ್ತು ಅಫ್ಘಾನಿಸ್ತಾನದ ಕಡೆಗೆ ಕೆಂಗಣ್ಣು ಇರಿಸಿದರೆ, ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಮಂಗಳೂರು ವಿಶ್ವ ವಿದ್ಯಾನಿಲಯದೆಡೆ ಹೆಜ್ಜೆ ಹಾಕಲು ಮುಂದಾಗಿದ್ದಾರೆ. ತಾಲಿಬಾನಿಗಳ ರಾಕ್ಷಸೀ ಕೃತ್ಯ ಹೆಚ್ಚಾಗುತ್ತಿದ್ದಂತೆಯೇ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಲು ಅಪ್ಘಾನಿಸ್ತಾನದ ವಿದ್ಯಾರ್ಥಿಗಳು ಆಸಕ್ತರಾಗಿದ್ದಾರೆ.
ಅಪ್ಘಾನಿಸ್ತಾನದ ಬೆಳವಣಿಗೆಯ ಬಳಿಕ ನಮಗೆ ಭಾರತವು ಸುರಕ್ಷಿತ ರಾಷ್ಟ್ರವೆಂದು ಭಾರತದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ಘಾನ್ ವಿದ್ಯಾರ್ಥಿಗಳ ಹೇಳಿಕೆಯನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಅಪ್ಘಾನಿಸ್ತಾನದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರು ವಿ.ವಿ.ಯಲ್ಲಿ ವ್ಯಾಸಂಗ ಮಾಡಲು ಅರ್ಜಿ ಸಲ್ಲಿಕೆ ಮಾಡಿದ್ದು, ಇಷ್ಟೊಂದು ಪ್ರಮಾಣದ ಅರ್ಜಿ ಸಲ್ಲಿಕೆಯಾಗಿರುವುದು ಇದೇ ಮೊದಲ ಬಾರಿಗೆ ಎನ್ನುತ್ತಾರೆ ವಿಶ್ವ ವಿದ್ಯಾಲಯದ ಅಧಿಕಾರಿಗಳು. ಅದರಲ್ಲೂ, ಸಾವಿರ ಅರ್ಜಿಗಳ ಪೈಕಿ 150ರಷ್ಟು ಅರ್ಜಿಗಳು ಕೇವಲ ಎಂಬಿಎ, ಕಂಪ್ಯೂಟರ್ ಸೈನ್ಸ್ ಗೆ ಸಲ್ಲಿಕೆಯಾಗಿದೆ. ಈ ಒಂದು ಸಾವಿರ ಮಂದಿ ವಿದ್ಯಾರ್ಥಿಗಳು ಮಂಗಳೂರು ವಿವಿ ಸೇರಿದಂತೆ ದೇಶದ ವಿವಿಧ ೫ ವಿವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಬಳಿಕ ತಾವು ಬಯಸಿದ ವಿವಿಗೆ ಪ್ರವೇಶ ಪಡೆಯುತ್ತಾರೆ.
ಕೊರೊನಾ ಕಾರಣದಿಂದಾಗಿ ಪ್ರಸಕ್ತ ಸಾಲಿನ ಸೆಮಿಸ್ಟರ್ ಪರೀಕ್ಷೆಗಳು ಇನ್ನೂ ಪೂರ್ತಿಗೊಂಡಿಲ್ಲ. ಪರೀಕ್ಷೆಗಳು ಮುಕ್ತಾಯಗೊಂಡ ಬಳಿಕವಷ್ಟೇ ಮುಂದಿನ ಶೈಕ್ಷಣಿಕ ಪ್ರವೇಶಾತಿ ಆರಂಭಗೊಳ್ಳಲಿದೆ. ಮಂಗಳೂರು ವಿವಿಗೆ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ಶುರುವಾಗಿದ್ದು 2014ರಲ್ಲಿ ಪ್ರಥಮ ವರ್ಷ ಕೇವಲ 16 ಮಂದಿಯಷ್ಟೇ ವಿದೇಶಿ ವಿದ್ಯಾರ್ಥಿಗಳಿದ್ದರು. 2015ರಲ್ಲಿ ಮೊದಲ ಬಾರಿ ಅಪ್ಘಾನ್ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಇಂದು, ಅಫ್ಘಾನ್ ವಿದ್ಯಾರ್ಥಿಗಳಿಂದ ಸಾವಿರ ಅರ್ಜಿ ಸಲ್ಲಿಕೆಯಾಗಿದೆ. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸರಕಾರದ ಆದೇಶದನ್ವಯ ನಿಯಮಾನುಸಾರವಾಗಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲ ಸಚಿವರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಗುಣಮಟ್ಟದ ಶಿಕ್ಷಣದಿಂದಾಗಿ ದೇಶ-ವಿದೇಶಗಳಲ್ಲಿ ಹೆಸರು ಪಡೆದಿದ್ದು, ಶಿಕ್ಷಣ ಕಾಶಿಯೆಂದೇ ಪ್ರಖ್ಯಾತಿ ಪಡೆದಿದೆ.