ಬಂಟ್ವಾಳ, ಆ. 24 (DaijiworldNews/SM): ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಕಲ್ಕುರಿ ನಿವಾಸಿ ಧರ್ಮಗುರು ವಂ. ಜೆರೋಮ್ ಸಿಕ್ವೆರಾ ಎಸ್.ಜೆ. ಅವರು ಇಂದು ಬೆಳಗ್ಗೆ ದೆಹಲಿಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಫಾ. ಜೆರೋಮ್ ಅವರು ಅಫ್ಘಾನಿಸ್ಥಾನದಲ್ಲಿ ಸಂಸ್ಥೆಯೊಂದರಲ್ಲಿ ಮುಖ್ಯಸ್ಥರಾಗಿದ್ದು, ತಾಲಿಬಾನ್ ಉಗ್ರರು ದೇಶವನ್ನು ಕೈವಶ ಮಾಡಿಕೊಳ್ಳುತ್ತಿದ್ದಂತೆ ಭಾರತಕ್ಕೆ ಮರಳಲು ತಮ್ಮ ಸ್ನೇಹಿತ, ತೀರ್ಥಹಳ್ಳಿಯ ರಾಬರ್ಟ್ ರೊಡ್ರಿಗಸ್ ಅವರಿಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಂತೆ ತಾಲಿಬಾನಿಗಳು ವಿಮಾನ ನಿಲ್ದಾಣ ವಶಪಡಿಸಿಕೊಂಡಿದ್ದರಿಂದ ಅಲ್ಲಿಯೇ ಉಳಿದಿದ್ದರು.
ಇದೀಗ ಅವರ ಜತೆ ರಾಬರ್ಟ್ ಅವರೂ ದೆಹಲಿ ತಲುಪಿದ್ದಾರೆ ಎಂದು ತಿಳಿದು ಬಂದಿದೆ.
ವಂ.ಜೆರೊಮ್ ಅವರು ದೆಹಲಿಯಿಂದ ತಮ್ಮ ತವರೂರು ಸಿದ್ದಕಟ್ಟೆ ಕರ್ಪೆಗೆ ಬರುವ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ, ಅವರ ಮನೆ ಮಂದಿ ಕೂಡ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಜೆರೋಮ್ ಅವರು ದೆಹಲಿಯಿಂದಲೇ ಈ ಹಿಂದೆ ಇದ್ದ ಜೆಮ್ಸಡ್ ಪುರಕ್ಕೆ ತೆರಳಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ವಂ.ಜೋರೊಮ್ ಸಿಕ್ವೆರಾ ಅವರು ಅಪ್ಘಾನಿಸ್ಥಾನದಿಂದ ಸ್ವದೇಶಕ್ಕೆ ಅಗಮಿಸಿರುವ ಹಿನ್ನಲೆಯಲ್ಲಿ ಕರ್ಪೆಯಲ್ಲಿರುವ ಅವರ ಮನೆ ಮಂದಿಗಳು, ಬಂಧುಗಳು ಸದ್ಯ ನಿಟ್ಟಿಸಿರು ಬಿಟ್ಟಿದ್ದಾರೆ.