ಮಂಗಳೂರು, ಆ. 24(DaijiworldNews/HR): ಜೆಪ್ಪು ಮೂಲದ ಕಿರಣ್ ಎಂಬವರು 2006 ರಲ್ಲಿ ಸೌದಿ ಅರೇಬಿಯಾದ ದಮ್ಮಾಮ್ನಲ್ಲಿರುವ ಸೂಪರ್ ಮಾರ್ಕೆಟ್ವೊಂದಕ್ಕೆ ಕ್ಯಾಷಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದು, ಊರಿನಲ್ಲಿರುವ ಕಷ್ಟಗಳಿಂದಾಗಿ ಸುಮಾರು ಆರು ವರ್ಷಗಳ ಕಾಲ ತಮ್ಮ ಮನೆಗೆ ಭೇಟಿ ನೀಡದೆ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ಆರು ವರ್ಷಗಳ ನಂತರ ಅವರು ಮನೆಗೆ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ ಅವರಿಗೆ ಊರಿಗೆ ಬರಲು ಅನುಮತಿ ನೀಡಿರಲಿಲ್ಲ.
ಕೆಲವು ತಿಂಗಳುಗಳ ನಂತರ ಕಿರಣ್ ಮನೆಗೆ ಹೋಗಲೇ ಬೇಕೆಂದು ಒತ್ತಾಯಿಸಿದಾಗ ಅಲ್ಲಿ ಸೂಪರ್ ಮಾರ್ಕೆಟ್ ಮಾಲೀಕರು ಕಿರಣ್ ವಿರುದ್ದ ಹತ್ತು ಲಕ್ಷ ರಿಯಾಲ್ ಕದ್ದಿದ್ದಾರೆ ಎಂದು ದೂರನ್ನು ದಾಖಲಿಸಿದ್ದು, ದೂರನ್ನು ಪೊಲೀಸ್ ಠಾಣೆ ಮತ್ತು ನ್ಯಾಯಾಲಯವು 18 ತಿಂಗಳುಗಳ ಕಾಲ ತನಿಖೆ ಮಾಡಿದ್ದು, ಕೊನೆಯಲ್ಲಿ ಕಿರಣ್ ನಿರಪರಾಧಿ ಎಂದು ನೀಡುತ್ತಾರೆ. ತೀರ್ಪು ಬಂದ ಆರು ತಿಂಗಳ ಬಳಿಕ ಕಿರಣ್ ಮನೆಗೆ ಹೋಗಲು ತಯಾರಿ ನಡೆಸುತ್ತಿದ್ದಾಗ ಮಾಲೀಕ ಮತ್ತೆ ಅದೇ ಪ್ರಕರಣವನ್ನು ಮರು ತನಿಖೆ ನಡೆಸಲು ಮನವಿ ಮಾಡಿದ್ದಾರೆ.
ಈ ವಿಷಯ ತಿಳಿದ ಕಿರಣ್, ತನ್ನ ಊರಿಗೆ ಭೇಟಿ ನೀಡುವ ಆಸೆಯಿಂದ ಬಹರೈನ್ ಮೂಲಕ ಊರಿಗೆ ಹೋಗಲು ಪ್ರಯತ್ನಿಸಿದರೂ ಕೆಲವು ನಿಯಮಗಳು ಮತ್ತು ನಿಬಂಧನೆಗಳಿಂದಾಗಿ, ಅವರು ಇನ್ನೂ ಒಂದು ವರ್ಷ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡರು. ಸಮಸ್ಯೆ ಕೊನೆಗೊಂಡ ಬಳಿಕ ಅವರು ಭಾರತಕ್ಕೆ ತೆರಳಲು ಅವಕಾಶ ನೀಡುವಂತೆ ಉದ್ಯೋಗದಾತರನ್ನು ಪದೇ ಪದೇ ವಿನಂತಿಸಿದರು ಆದರೆ ಅನುಮತಿ ನಿರಾಕರಿಸಲಾಯಿತು. ಹಲವಾರು ಸಂಸ್ಥೆಗಳು ಕಿರಣ್ಗೆ ಸಹಾಯ ಮಾಡಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದವು, ಆದರೆ ಅವರ ಪ್ರಯತ್ನಗಳು ವ್ಯರ್ಥವಾಯಿತು.
ಈ ವಿಷಯವು ಕರ್ನಾಟಕ ಸಾಂಸ್ಕೃತಿಕ ಪ್ರತಿಷ್ಠಾನದ (ಕೆಸಿಎಫ್) ಸೌದಿ ಅರೇಬಿಯಾದ ಸಾಂತ್ವಾನ ವಿಭಾಗದ ಅಧ್ಯಕ್ಷ ಮುಹಮ್ಮದ್ ಮಲೆಬೆಟ್ಟು ಅವರ ಗಮನಕ್ಕೆ ಬಂದಿದ್ದು, ಅವರು ಕಿರಣ್ ಅವರಿಗೆ ಸಹಾಯ ಮಾಡಲು ನಿರಂತರವಾಗಿ ಶ್ರಮಿಸಿ ಕಂಪನಿಯ ಮಾಲೀಕರೊಂದಿಗೆ ಮಾತನಾಡಿ ಪರಿಹಾರವನ್ನು ಕಂಡುಕೊಂಡರು. ಅವರು ಪ್ರಕರಣವನ್ನು ತೆರವುಗೊಳಿಸಲು ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಬೇಕಾದ ದಾಖಲೆಗಳನ್ನು ಒದಗಿಸಿದರು ಮತ್ತು ಕಿರಣ್ ಮನೆಗೆ ಮರಳಲು ದಾರಿ ಮಾಡಿಕೊಟ್ಟರು.
ಎಲ್ಲಾ ದಾಖಲೆಗಳನ್ನು ಒದಗಿಸಿದ ನಂತರ ದಮ್ಮಾಮಿನಲ್ಲಿ ಕಾರ್ಯಚರಿಸುತ್ತಿರುವ ಮಂಗಳೂರು ಅಸೋಸಿಯೇಶನ್ ಅವರ ಸಹಕಾರದಿಂದ ಕಿರಣ್ಗೆ ವಿಮಾನ ಟಿಕೆಟ್ ನೀಡಲಾಗಿದ್ದು, . ಅವರು ಆಗಸ್ಟ್ 21 ರಂದು ಮನೆಗೆ ತಲುಪಿದ್ದಾರೆ.