ಹಿರಿಯಡ್ಕ, ಆ. 24(DaijiworldNews/HR): ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಘಟನೆ ಉಡುಪಿಯ ಗುಂಡುಪಾದೆ ಪೆರ್ಣಂಕಿಲ ಗ್ರಾಮದಲ್ಲಿರುವ ಕಲ್ಯಾಣಿ ಜನರಲ್ ಸ್ಟೋರ್ನಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ರಾಮಣ್ಣ ಜಿ, ನಾಯಕ್ ಎಂಬರಿಗೆ ಸೇರಿದ ಕಲ್ಯಾಣಿ ಜನರಲ್ ಸ್ಟೋರ್ ಎಂಬ ದಿನಸಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಾತ ಸಿಗರೇಟ್ ನೀಡುವಂತೆ ಕೇಳಿಕೊಂಡಿದ್ದಾನೆ. ಸಿಗರೇಟ್ ನೀಡುವಾಗ ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 2 ರಿಂದ 16 ಗ್ರಾಮ್ ತೂಕದ ಚಿನ್ನದ ಸರವನ್ನು ಎಗರಿಸಿದ್ದಾನೆ.
ಇನ್ನು ಕುತ್ತಿಗೆಯಿಂದ ಸರವನ್ನು ಎಳೆದುಕೊಂಡು ಓಡಿ ಹೋಗಿ ಅಂಗಡಿಯ ಮುಂಭಾಗ ಸ್ವಲ್ಪ ದೂರದಲ್ಲಿ ಇನ್ನೊರ್ವ ವ್ಯಕ್ತಿ ಚಾಲನಾ ಸ್ಥಿತಿಯಲ್ಲಿ ನಿಲ್ಲಿಸಿಕೊಂಡಿದ್ದ ಮೋಟಾರ್ ಸೈಕಲ್ನಲ್ಲಿ ಕುಳಿತುಕೊಂಡು ಅತಿವೇಗವಾಗಿ ಮರ್ಣೆ ಅಲೆವೂರು ಕಡೆ ಹೋಗಿದ್ದು, ಬೈಕ್ ಗೆ ಹಿಂಬದಿಯಲ್ಲಿ ನಂಬರ್ಪ್ಲೇಟ್ ಇರಲಿಲ್ಲ ಎಂದು ರಾಮಣ್ಣ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹಿರಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.