ಕುಂದಾಪುರ, ಆ 24 (DaijiworldNews/MS): ತುಳಿತಕ್ಕೆ ಒಳಗಾದವರ ಧ್ವನಿಯಾಗಿ, ಅಸ್ಪೃಶ್ಯ ವ್ಯವಸ್ಥೆ ವಿರುದ್ಧ ಹೋರಾಡಿ, ದೇಗುಲ ಪ್ರವೇಶ ನಿರಾಕರಣೆಯಾದಾಗ ದೇಗುಲಗಳನ್ನೇ ಸ್ಥಾಪನೆ ಮಾಡಿ ಎಲ್ಲರಿಗೂ ದೇಗುಲ ಪ್ರವೇಶಕ್ಕೆ ನೆಲೆ ಮಾಡಿಕೊಟ್ಟವರು. ಈಗಲೂ ಕೇರಳದಲ್ಲಿ ಅಸ್ಪೃಶ್ಯತೆಯ ಸೋಂಕು ಇದೆ. ನಾರಾಯಣ ಗುರುಗಳ ಸಂದೇಶದ ಕೆಲವು ಭಾಗಗಳನ್ನಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಅವರು ಸೋಮವಾರ ಇಲ್ಲಿನ ತಾಲೂಕು ಕಚೇರಿಯಲ್ಲಿ ನಾರಾಯಣ ಗುರುಗಳ ಜಯಂತಿ ಆಚರಣೆ ಸಂದರ್ಭ ಮಾತನಾಡಿದರು.
ಕೇರಳ ಸೇರಿದಂತೆ ಎಲ್ಲೆಡೆ ಅಸ್ಪೃಶ್ಯತೆ ತಾಂಡವವಾಡುತ್ತಿದ್ದಾಗ ನಾರಾಯಣ ಗುರುಗಳ ಜನನವಾಯಿತು. ಒಂದೇ ಜಾತಿ, ಒಂದೇ ಮತ ಎಂದು ಸಾರುವ ಮೂಲಕ ಅವರು ಸಮಾಜದ ಆಸ್ತಿಯಾದರು. ಅವರು ಯಾವುದೇ ಒಂದು ಸಮಾಜ, ಒಂದು ವರ್ಗಕ್ಕೆ ಸೀಮಿತವಾದವರಲ್ಲ. ಸಮಸ್ತ ಸಮಾಜಕ್ಕೆ ಸೇರಿದವರು ಎಂದರು. ಸಹಾಯಕ ಕಮಿಷನರ್ ಕೆ. ರಾಜು ಅಧ್ಯಕ್ಷತೆ ವಹಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ನರಸಿಂಹ ಪೂಜಾರಿ ನಾರಾಯಣ ಗುರುಗಳ ಕುರಿತು ಮಾತನಾಡಿದರು. ಬಿಲ್ಲವ ಸಮಾಜ ಸೇವಾ ಸಂಘ ಉಪಾಧ್ಯಕ್ಷರಾದ ಭಾಸ್ಕರ ಬಿಲ್ಲವ, ರಾಮ ಪೂಜಾರಿ ಪಡುಕೋಣೆ, ತಹಶೀಲ್ದಾರ್ ಕಿರಣ್ ಗೌರಯ್ಯ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ವಿನಯ್ ನಿರ್ವಹಿಸಿದರು.