ಕಾಸರಗೋಡು, ಆ. 23 (DaijiworldNews/SM): ಕಾಬೂಲಿನಲ್ಲಿ ಸಿಲುಕಿದ್ದ ಬೇಳ ಪೆರಿಯಡ್ಕದ ಸಿಸ್ಟರ್ ಥೆರೆಸಾ ಕ್ರಾಸ್ತಾ ಕಜಕಿಸ್ತಾನಕ್ಕೆ ತಲುಪಿದ್ದಾರೆ. ಕಾಬೂಲಿನಿಂದ ವಿಮಾನ ಮೂಲಕ ಸುರಕ್ಷಿತವಾಗಿ ಕಜಕಿಸ್ತಾನಕ್ಕೆ ತಲುಪಿರುವುದಾಗಿ ಕುಟುಂಬದವರಿಗೆ ಸಂದೇಶ ಲಭಿಸಿದೆ.
ಅಲ್ಲಿಂದ ಭಾರತಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಪಘಾನಿಸ್ತಾನದ ಬೆಳವಣಿಗೆಯಿಂದಾಗಿ ಕಳೆದ ಏಳೆಂಟು ದಿನಗಳಿಂದ ಭಯದ ವಾತಾವರಣದಲ್ಲಿದ್ದ ಸಿಸ್ಟರ್ ಥೆರೆಸಾ ರವರಿಗೆ ಕಾಬೂಲು ವಿಮಾನ ನಿಲ್ದಾಣಕ್ಕೆ ತಲಪಲು ಸಾಧ್ಯವಾಗದೆ ಇದ್ದುದರಿಂದ ಕಾನ್ವೆಂಟ್ ನಲ್ಲೆ ಉಳಿಯುವಂತಾಗಿತ್ತು.
ಈ ನಡುವೆ ಸೋಮವಾರ ಮಧ್ಯಾಹ್ನದ ವೇಳೆಗೆ ಕಾಬೂಲಿನಿಂದ ವಿಮಾನ ಮೂಲಕ ಕಜಕಿಸ್ತಾನಕ್ಕೆ ತಲುಪಿದ್ದಾರೆ ಎಂದು ಸಂದೇಶ ಲಭಿಸಿರುವುದಾಗಿ ಸಹೋದರ ಜೋನ್ ಕ್ರಾಸ್ತ ತಿಳಿಸಿದ್ದಾರೆ.
ಕಜಕಿಸ್ತಾನದಿಂದ ಭಾರತಕ್ಕೆ ಮರಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು, ಎರಡು ಮೂರು ದಿನಗಳಲ್ಲಿ ಭಾರತಕ್ಕೆ ತಲಪುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಇಟೆಲಿ ಮೂಲದ ಸಂಸ್ಥೆ ಯೊಂದರ ವಿಶೇಷ ಚೇತನ ಮಕ್ಕಳ ಆರೈಕೆ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.