ಉಡುಪಿ, ಆ.23 (DaijiworldNews/HR): "ಜಾತಿ ಜನಗಣತಿಯ ವರದಿ ಕಾಂತರಾಜು ಅವರ ಕಾಲದಲ್ಲೆ ಸಿದ್ದವಾಗಿದ್ದು, ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ ಅದನ್ನು ಸರಕಾರ ಬಿಡುಗಡೆಗೊಳಿಸಬೇಕು ಎಂದು ನಾನು ವಿಧಾನ ಪರಿಷತ್ ನಲ್ಲಿ ಅಗ್ರಹಿಸಿದ್ದೆ. ಅದರೆ ಸರಕಾರ ಎಕೆ ಇದನ್ನು ಬಿಡುಗಡೆ ಮಾಡಿಲ್ಲ ಎಂದು ತಿಳಿದಿಲ್ಲ" ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜಾತಿ ಜನಗಣತಿ ವಿಚಾರವಾಗಿ ಕೆಲವೊಂದು ಪ್ರಕರಣಗಳು ಕೊರ್ಟ್ ನಲ್ಲಿದ್ದು, ಜಾತಿಜನಗಣತಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ನಿರೀಕ್ಷೆಯಲ್ಲಿದ್ದು, ಇದರ ಬಗ್ಗೆ ಮುಂದೆ ಯೋಚನೆ ಮಾಡುತ್ತೇವೆ" ಎಂದರು.
ಶಾಲೆ ತೆರೆಯುವ ವಿಚಾರವಾಗಿ ಮಾತನಾಡಿದ ಅವರು, "ದಕ್ಷಿಣ ಕನ್ನಡ, ಕೊಡಗು, ಉಡುಪಿ ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕಡಿಮೆಯಾಗದ ಕಾರಣ ಈ ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭವಾಗಿಲ್ಲ. ಉಳಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಲೆಗಳು ಇಂದಿನಿಂದ ಪ್ರಾರಂಭವಾಗಿವೆ. ಕೊರೊನಾ ಮಾರ್ಗಸೂಚಿಯನ್ನು ಪಾಲಿಸಿ ಪಾಸಿಟಿವಿಟಿ ರೇಟ್ ಅನ್ನು ಕಡಿಮೆ ಮಾಡಲು ಜಿಲ್ಲಾಡಳಿತಗಳು ಕುರಿತು ಕ್ರಮ ವಹಿಸಬೇಕು" ಎಂದಿದ್ದಾರೆ.
ಜನಾಶೀರ್ವಾದ ಯಾತ್ರೆಗೆ ಉಗ್ರಪ್ಪ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಜನಾಶೀರ್ವಾದ ಯಾತ್ರೆಯನ್ನು ಉಗ್ರಪ್ಪನವರು ಅವರದೇ ಧಾಟಿಯಲ್ಲಿ ಟೀಕೆ ಮಾಡಿದ್ದಾರೆ. ಉಗ್ರಪ್ಪನಂತವರು ಅಗಾಗ್ಗೆ ಸರಕಾರಕ್ಕೆ ಕೆಲವೊಂದು ಸರ್ಟಿಫಿಕೇಟ್ ಗಳನ್ನು ನೀಡುತ್ತಾ ಬಂದಿದ್ದಾರೆ. ಜನಪರವಾದ ಸರಕಾರ ಜನರ ಸಮಸ್ಯೆಗಳನ್ನು ಆಲಿಸಲು ಜನಾಶೀರ್ವಾದ ಯಾತ್ರೆಯನ್ನು ಆಯೋಜಿಸಲಾಗಿದ್ದು, ಇದು ಪ್ರಧಾನಿ ಮೋದಿಯವರ ಆಶಯದಂತೆ ಈ ಯಾತ್ರೆ ನಡೆಯುತ್ತಿದೆ. ಮತ್ತೊಮ್ಮೆ ನಮ್ಮದೇ ಸರಕಾರ ಅಧಿಕಾರಕ್ಕೆ ಬರುತ್ತದೆ. ಉಗ್ರಪ್ಪನವರು ಇದಕ್ಕೆ ಸಹಮತ ಇದ್ದಾರೆ ಎಂದು ನಂಬುತ್ತೇನೆ" ಎಂದು ಹೇಳಿದ್ದಾರೆ.