ಉಡುಪಿ, 21 (DaijiworldNews/HR): "ನಮ್ಮ ಯುವಕರ ದಿಕ್ಕುತಪ್ಪಿಸಿ ತಾಲಿಬಾನಿನ ಶಿಕ್ಷಣ ನೀಡುವ ಅಪಾಯ ಇದ್ದು, ಈ ಪ್ರವೃತ್ತಿ ಕೆಲ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ನಡೆಯುತ್ತಿದೆ" ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಉಡುಪಿಯ ಸರ್ಕ್ಯೂಟ್ ಹೌಸ್ ನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ತಾಲಿಬಾನಿಗಳ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದ್ದು, ತಾಲಿಬಾನಿನ ಮಾನಸಿಕತೆ ಯಾವ ರೀತಿ ಇದೆ ಅನ್ನೋದು ಗೊತ್ತಾಗುತ್ತೆ. ಮಾನವ ಹಕ್ಕು ಉಲ್ಲಂಘನೆ- ಮಕ್ಕಳು ಮಹಿಳೆಯರ ರಕ್ಷಣೆಯಿಲ್ಲ. ಎಲ್ಲಾ ಕಾನೂನು ಗಾಳಿಗೆ ತೂರಿ ತಮ್ಮದೇ ವಿಚಿತ್ರ ಕಾನೂನು ರೂಪಿಸಲು ಹೊರಟಿದ್ದಾರೆ. ಭಯೋತ್ಪಾದನಾ ಚಟುವಟಿಕೆ ಜಗತ್ತಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಜಗತ್ತಿನ ಎಲ್ಲಾ ರಾಷ್ಟ್ರಗಳು ಒಂದಾಗಬೇಕು. ನಿಧಾನವಾಗಿ ಬೇರೆ ಕಡೆಗೂ ವ್ಯಾಪಿಸುವ ಅಪಾಯವಿದೆ" ಎಂದಿದ್ದಾರೆ.
ಇನ್ನು "ಭಾರತವು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗಿದ್ದು, ನಮ್ಮ ಯುವಕರ ದಿಕ್ಕುತಪ್ಪಿಸಿ ತಾಲಿಬಾನಿನ ಶಿಕ್ಷಣ ನೀಡುವ ಅಪಾಯ ಇದ್ದು, ಈ ಪ್ರವೃತ್ತಿ ಕೆಲ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ನಡೆಯುತ್ತಿದೆ.ತಾಲಿಬಾನಿನ ಆಡಳಿತ ಯಾವ ರೀತಿ ಇರುತ್ತೆ? ಎಂದು ಬಿಜೆಪಿ ಮೊದಲೇ ಹೇಳಿತ್ತು. ಇವತ್ತು ಪ್ರತ್ಯಕ್ಷವಾಗಿ ಅಪಘಾನಿಸ್ತಾನದಲ್ಲಿ ಅದು ನೋಡಲು ಸಿಗುತ್ತಿದೆ" ಎಂದರು.
ಅಪಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ವಿಚಾರ ಕುರಿತು ಮಾತನಾಡಿದ ಅವರು, "ಸಿಎಂ ಮತ್ತು ಗೃಹ ಸಚಿವರು ಬೇರೆಬೇರೆ ಹಂತಗಳಲ್ಲಿ ಸಭೆ ನಡೆಸಿದ್ದು, ಕನ್ನಡಿಗರ ರಕ್ಷಣೆಗೆ ಸರಕಾರ ಗರಿಷ್ಠ ಪ್ರಯತ್ನ ಮಾಡುತ್ತಿದೆ. ರಾಜತಾಂತ್ರಿಕ ವಲಯ ಈ ನಿಟ್ಟಿನಲ್ಲಿ ಸಕ್ರಿಯವಾಗಿದೆ" ಎಂದಿದ್ದಾರೆ.
ಇನ್ನು "ಗಣೇಶೋತ್ಸವ ವಿಜ್ರಂಭಣೆಯಿಂದ ನಡೆಯಬೇಕು ಎಂಬುದು ನಮ್ಮ ಆಶಯ. ಆದರೆ ಕೊರೋನಾ ಮೂರನೇ ಅಲೆಯ ಆತಂಕ ಕೂಡಾ ಕಣ್ಣ ಮುಂದೆ ಇದೆ. ಧಾರ್ಮಿಕ ಆಚರಣೆ ಮತ್ತು ಆರೋಗ್ಯ ಎರಡು ಮುಖ್ಯವಾಗಿದ್ದು, ಈ ಬಗ್ಗೆ ಸರಕಾರ ಒಂದು ಸೂತ್ರವನ್ನು ಸಿದ್ಧಪಡಿಸಲಿದೆ. ಧಾರ್ಮಿಕ ಆಚರಣೆ, ವೈಭವೀಕರಣಕ್ಕೆ ಕುಂದು ಆಗದಂತೆ ನಿಯಮ ಬರಲಿದೆ" ಎಂದರು.
ಉಡುಪಿ ಜಿಲ್ಲೆಯಲ್ಲಿ ಇನ್ನೂ ಕೊರೋನಾ ಪಾಸಿಟಿವಿಟಿ ರೇಟ್ ಇಳಿಕೆಯಾಗದ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶಾಲೆಗಳು ಸೋಮವಾರ ತೆರೆಯುವುದಿಲ್ಲ. ಉಳಿದ ಜಿಲ್ಲೆಗಳಲ್ಲಿ ಸೋಮವಾರದಿಂದ ಶಾಲೆಗಳು ಆರಂಭವಾಗುತ್ತದೆ. ಪಾಸಿಟಿವಿಟಿ ರೇಟ್ ಕಡಿಮೆ ಆದರೆ ನಮ್ಮ ಜಿಲ್ಲೆಯಲ್ಲಿ ಶಾಲೆಗಳನ್ನು ಪ್ರಾರಂಭ ಮಾಡುತ್ತೇವೆ. ಉಳಿದ ಜಿಲ್ಲೆಯಲ್ಲಿ ಶಾಲೆ ಪ್ರಾರಂಭವಾಗಿದೆ ಎಂಬ ವಾದ ಸರಿಯಲ್ಲ" ಎಂದು ಹೇಳಿದ್ದಾರೆ.