ಉಡುಪಿ, ಆ 21 (DaijiworldNews/MS): ಬೈಕಾಡಿ ಭದ್ರಗಿರಿ ಚರ್ಚ್ ರಸ್ತೆಯ ಬಳಿ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವರನ್ನು ಉಡುಪಿಯ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ವ್ಯಕ್ತಿ ಅಸಹಾಯಕ ಸ್ಥಿತಿಯಲ್ಲಿರುವ ಬಗ್ಗೆ, ಬ್ರಹ್ಮಾವರ ಕ್ಷಯರೋಗ ಘಟಕದ ಮೇಲ್ವಿಚಾರಕ ಮಂಜುನಾಥ್ ಆಲಂದೂರು ಅವರು, ಸಮಾಜಸೇವಕರಿಗೆ ಮಾಹಿತಿ ನೀಡಿದ್ದರು. ರಕ್ಷಣಾ ಕಾರ್ಯಚರಣೆಯಲ್ಲಿ ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು, ಆಶಾ ಕಾರ್ಯಕರ್ತೆ ತುಳಸಿ ಬೈಕಾಡಿ ಅವರು ಸಹಕರಿಸಿದರು.
ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದ ಸಂತ್ರಸ್ತರನ್ನು ಆಲ್ಫರ್ಡ್ ಡಿಸೋಜ (58 ) ತಂದೆ ರೆಗೋರಿ ಡಿಸೋಜ ಎಂದು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಆಲ್ಫರ್ಡ್ ಅವರು ಬಿ.ಎಸ್.ಸಿ ಪದವೀಧರ, ಈ ಹಿಂದೆ ಉನ್ನತ ಉದ್ಯೋಗದಲ್ಲಿದ್ದವರೆಂದು ತಿಳಿದುಬಂದಿದೆ. ಇವರ ಸಂಬಂಧಿಕರು ಇದ್ದಲ್ಲಿ ಡಾ.ಎ.ವಿ ಬಾಳಿಗ ಆಸ್ಪತ್ರೆಯ ನಾಗರೀಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ
ಆಲ್ಫರ್ಡ್ ಅವರು ಪಾಳು ಬಿದ್ದಿರುವ ನಾಡ ಹೆಂಚಿನ ಮನೆಯಲ್ಲಿ ಒಬ್ಬಂಟಿಯಾಗಿದ್ದ ವಾಸವಾಗಿದ್ದ ಇವರು ಸ್ಥಳೀಯರು ನೀಡಿದ ಆಹಾರ ನೀಡಿ ಬದುಕುತ್ತಿದ್ದರು. ಮನೆಯ ಗೋಡೆಗಳು ಕಳೆದ ವರ್ಷದ ಮಳೆಗಾಲದಲ್ಲಿಯೇ ಸಂಪೂರ್ಣ ಕುಸಿದು ಬಿದ್ದು ಒಂದು ಪಾರ್ಶ್ವ ಮಾತ್ರ ಉಳಿದು ಕೊಂಡಿತ್ತು. ಮನೆಯ ಅವಶೇಷಗಳು ಅಲ್ಲಲ್ಲಿ ಬಿದ್ದುಕೊಂಡಿದ್ದವು. ಬಾಕಿ ಉಳಿದಿರುವ ಮನೆಯ ಮಣ್ಣಿನ ಗೋಡೆಗಳು ಮಳೆ ನೀರಿಗೆ ತೇವಗೊಂಡು ಉರುಳಿ ಬೀಳುವ ಅಪಾಯದ ಸ್ಥಿತಿಯಲ್ಲಿದ್ದವು. ರಾತ್ರಿ ಬೆಳಕು ಇಲ್ಲದೆ ತೀರಾ ಅಪಾಯಕಾರಿಯಾದ ಪಾಳುಬಿದ್ದಿರುವ ಮನೆಯ ಅಟ್ಟದಲ್ಲಿ ಆಲ್ಫರ್ಡ್ಅವರು ದಿನ ಕಳೆಯುತ್ತಿದ್ದರು. ಮನೆ ಇರುವ ಸ್ಥಳದಲ್ಲಿ ಗಿಡ ಗಂಟಿಗಳು ಪೊದೆಗಳಾಗಿ, ಬೆಳೆದು ಪಾಳುಮನೆಯನ್ನು ಆವರಿಸಿಕೊಂಡಿದ್ದವು. ಹೊರ ವಲಯಕ್ಕೆ ಅಲ್ಲೊಂದು ಮನೆ ಇರುವುದು ಗೋಚರಿಸುತ್ತಿರಲಿಲ್ಲ. ಹಾವು, ಚೇಳು, ಮೊದಲಾದ ವಿಷ ಜಂತುಗಳ ಸಂಚಾರ ಇರುವುದರಿಂದ ರಕ್ಷಣೆಗಾಗಿ ಮನೆಯ ಅಟ್ಟವನ್ನು ಆಶ್ರಯಿಸಿದ್ದೆ ಎಂದು ಆಲ್ಫರ್ಡ್ ವಿವರಿಸಿದ್ದಾರೆ.
ಆಡಳಿತ ವ್ಯವಸ್ಥೆಗಳು ಇದುವರೆಗೂ ರೋಗಿಯನ್ನು ರಕ್ಷಿಸಿ, ಔಷೋಧೋಪಚಾರ ನಡೆಸಿ ಪುರ್ನವಸತಿ ಕಲ್ಪಿಸದಿರುವುದು ವಿಪರ್ಯಾಸದ ಸಂಗತಿ ಎಂದು ವಿಶು ಶೆಟ್ಟಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಪದಪಟ್ಟ ಇಲಾಖೆಗಳು ರೋಗಿಗೆ ಪುರ್ನವಸತಿ ವ್ಯವಸ್ಥೆಗೊಳಿಸಬೇಕೆಂದು ವಿಶು ಶೆಟ್ಟಿ ಅವರು ಆಗ್ರಹಿಸಿದ್ದಾರೆ.