ಉಡುಪಿ:, ಆ. 20 (DaijiworldNews/SM): ಕಳೆದ 12 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಕಂಪನಿಯೊಂದರಲ್ಲಿ ಸೂಪರವೈಸರ್ ಆಗಿ ಕೆಲಸ ಮಾಡುತ್ತಿದ್ದ ಉಡುಪಿ ಮಲ್ಪೆಯ ಜಾನ್ ಜತ್ತನ್ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣದ ಅರ್ಧ ಗಂಟೆ ಮುಂಚಿತವಾಗಿ ವಿಮಾನ ಹತ್ತಿ ಇದೀಗ ಊರು ಸೇರಿದ್ದಾರೆ.
ಅಫ್ಘಾನ್ ನಲ್ಲಿನ ಕರಾಳ ನೆನಪನ್ನು ಬಿಚ್ಚಿಟ್ಟ ಅವರು, ಕಳೆದ ಹತ್ತು ದಿನಗಳಿಂದ ತಾಲಿಬಾನ್ಗಳು ಅವರು ಕೆಲಸ ಮಾಡುತ್ತಿದ್ದ ಒಂದೊಂದೇ ಕಡೆ ಕಚೇರಿಗಳನ್ನು ವಶಪಡಿಸಿಕೊಳ್ಳುತ್ತಿದ್ದರು. ವಿಮಾನ ನಿಲ್ದಾಣದಲ್ಲಿದ್ದ ಕಛೇರಿ ಹೋಯ್ತು. ಆಗ ಉಳಿದದ್ದೆಲ್ಲಾ ಬ್ರಾಂಚಸ್ ಹೋಗಿ ಕಾಬುಲ್ ಮಾತ್ರ ಉಳಿದಿತ್ತು. ಕಾಬುಲ್ ಪ್ರದೇಶಕ್ಕೆ ಆಕ್ರಮಣ ಮಾಡುವ ನಿರೀಕ್ಷೆ ಇರಲಿಲ್ಲ. ಯಾಕೆಂದರೆ ಸುತ್ತಲೂ ಅಮೆರಿಕಾ ಭದ್ರತಾ ಪಡೆಯವರಿದ್ದರು. ಪೋಲಿಸ್ ಮುಖ್ಯ ಕಛೇರಿಯೂ ಇತ್ತು. ಆಗಸ್ಟ್ ೧೫ರಂದು ಅಲ್ಲಿಂದ ಹೊರಟಿದ್ದೆ ಎಂದು ಮಾಹಿತಿ ನೀಡಿದ್ದಾರೆ.
ಕೊನೆಯ ಕ್ಷಣದಲ್ಲಿ ನಮ್ಮ ಮೇಲಾಧಿಕಾರಿ ಊರಿಗೆ ಟಿಕೆಟ್ ಮಾಡುವಂತೆ ಸೂಚಿಸಿದರು. ಕೂಡಲೇ ಭಾರತಕ್ಕೆ ಟಿಕೆಟ್ ಬುಕ್ ಮಾಡಿದೆವು. ವಿಮಾನ ಹೊರಟು ಅರ್ಧಗಂಟೆಯಲ್ಲಿ ತಾಲಿಬಾನಿಗಳ ಕ್ರೌರ್ಯ ಅರಂಭವಾಯಿತು.
ಇಲ್ಲಿ ಬಂದು ನೋಡುವಾಗ ದೇವರು ಸರಿಯಾದ ಸಮಯದಲ್ಲಿ ನನ್ನನ್ನು ಮುನ್ನಡೆಸಿದ್ದಾನೆ. ಇದು ದೇವರದ್ದೇ ಅನುಗ್ರಹ. ೧೫ ದಿವಸ ಮೊದಲಷ್ಟೇ ನಾನು ಅಪ್ಘಾನ್ ಗೆ ತೆರಳಿದ್ದೆ. ಅಲ್ಲಿ ನಿರ್ವಹಣೆಗೆ ಸಿಬ್ಬಂದಿ ಇರಲಿಲ್ಲ. ಆದಾಗ್ಯೂ ಬಾಸ್ ನನ್ನನ್ನು ಊರಿಗೆ ಕಳುಹಿಸದರೆಂದರೆ ದೇವರೇ ಅವರಿಗೆ ಪ್ರೇರಣೆ ನೀಡಿದ್ದಾರೆಂದು ಭಾವಿಸಿದ್ದೇನೆ. ನನ್ನ ಜೊತೆಗಿದ್ದ ಮತ್ತೋರ್ವ ಭಾರತೀಯ ರಜೆಯ ಮೇಲೆ ಭಾರತಕ್ಕೆ ಬಂದಿದ್ದರು. ಮತ್ತೊಬ್ಬರು ಆಸ್ಟ್ರೇಲಿಯಾದ ಪ್ರಜೆ ನನ್ನ ಜೊತೆಗಿದ್ದರು.
"ಸಹುದ್ಯೋಗಿಗಳು ನಮ್ಮೊಂದಿಗೆ ಒಳ್ಳೆಯ ರೀತಿಯಲ್ಲಿದ್ದಾರೆ. ಅಲ್ಲಿರುವ ಸಿಬ್ಬಂದಿಗಳು ಕೇವಲ ಆ ದಿನವನ್ನ ಮುನ್ನಡೆಸುವ ಬಗ್ಗೆ ಮಾತ್ರ ಚಿಂತೆ ಮಾಡ್ತಾರೆ. ನಾಳಿನ ಬಗ್ಗೆ ಚಿಂತೆ ಮಾಡುವುದಿಲ್ಲ. ಅಲ್ಲಿನ ಪರಿಸ್ಥಿತಿ ಹಾಗಿದೆ. ಹೊರಗಡೆ ಹೋದರೆ ಏನಾಗುತ್ತದೆ ಎಂಬ ಅರಿವೂ ಸಹ ಇರುವುದಿಲ್ಲ. ಕಾಬೋಲ್ನಲ್ಲಿ ಪ್ರತೀ ವಾರದಲ್ಲಿ ಕಡಿಮೆ ಎಂದರೂ ಎರಡು-ಮೂರು ಬಾರಿ ಬಾಂಬ್ ಸದ್ದು ಕೇಳುತ್ತದೆ. ಪ್ರತಿದಿನದ ಪರಿಸ್ಥಿತಿಯೇ ಹಾಗೆ. ಭಾರತೀಯರೆಂದರೆ ಗೌರವ ಕೊಡುತ್ತಾರೆ. ಕಂಪನಿಯಿಂದ ನಮ್ಮನ್ನ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದರು.